ಬೆಳ್ತಂಗಡಿ: ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಇದರ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆ ಹಾಗೂ ತ್ರೈವಾರ್ಷಿಕ ಅಂತಿಮ ಸಭೆಯು ಆ.26 ರಂದು ನಡೆಯಿತು.
ಕಾಜೂರು ಸಮಿತಿ ಗೌರವಾಧ್ಯಕ್ಷ ಸಯ್ಯಿದ್ ಕುಂಬೋಳ್ ತಂಙಳ್ ಅವರು ನಿಯೋಜಿಸಿದಂತೆ ಸಯ್ಯಿದ್ ಕಾಜೂರು ತಂಙಳ್ ಸಭಾಧ್ಯಕ್ಷತೆ ವಹಿಸಿ ಮಹಾಸಭೆ ಕಲಾಪ ನಡೆಸಿಕೊಟ್ಟರು.
ಮೇಲ್ವಿಚಾರಣೆಗಾಗಿ ವಕ್ಫ್ ಜಿಲ್ಲಾಧಿಕಾರಿ ಸಯ್ಯಿದ್ ಮುಹಝ್ಝಿಮ್, ಸಹಾಯಕರಾಗಿ ಆಸಿಫ್, ಮಾಜಿ ಆಡಳಿತಾಧಿಕಾರಿ ಮುಹಮ್ಮದ್ ರಫಿ ಭಾಗಿಯಾಗಿದ್ದರು.
ಕಾಜೂರು ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಅವರು ಆಡಳಿತ ವರ್ಷದ ಸಮಗ್ರ ವರದಿ ವಾಚಿಸಿದರು. ಮೆನೇಜರ್ ಶಮೀಮ್ ಮೊಯ್ದಿನ್ ಲೆಕ್ಕಪತ್ರ ಮಂಡಿಸಿದರು.
ಬಳಿಕ ನಡೆದ ಪ್ರಕ್ರಿಯೆಯಲ್ಲಿ ಜಮಾಅತ್ ನ ಅಭಿವೃದ್ಧಿ ಬಗ್ಗೆ ಸಾಮೂಹಿಕ ಚಿಂತನೆ ನಡೆಯಿತು.
ಆಡಳಿತ ಸಮಿತಿಯ 3 ವರ್ಷದ ಅವಧಿಯು ಮುಂದಿನ ಅಕ್ಟೋಬರ್ ತಿಂಗಳಿಗೆ ಮುಕ್ತಾಯವಾಗಲಿದ್ದು, ಪ್ರಸ್ತುತ ಇರುವ 11 ಮಂದಿಯ ಆಡಳಿತ ಸಮಿತಿಯನ್ನು ಸರ್ವಾನುಮತದಿಂದ ಮುಂದಿನ 3 ವರ್ಷಗಳ ಅವಧಿಗೆ ಮರುಆಯ್ಕೆ ಮಾಡಲಾಯಿತು.
ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ
ಆಡಳಿತ ಮಂಡಳಿ ನೂತನ ಅಧ್ಯಕ್ಷ
ಕೆ.ಯು ಇಬ್ರಾಹಿಂ, ಭವಿಷ್ಯದಲ್ಲಿ ಕಾಜೂರನ್ನು ಉನ್ನತ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತಿಸುವುದು, ಯಾತ್ರಾರ್ಥಿಗಳಿಗೆ ವಸತಿ ಸಮುಚ್ಛಯ ನಿರ್ಮಾಣ, ಜಮಾಅತ್ ಯುವಕರು ವಿದ್ಯಾಭ್ಯಾಸ ಪಡೆದು ಸರಕಾರಿ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಲು ಅವರನ್ನು ಪ್ರಚೋದಿಸುವುದು, ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಿ ಧಾರ್ಮಿಕ ಮತ್ತು ಪ್ರಾಕೃತಿಕ ಪ್ರವಾಸೋದ್ಯಮ ಕೇಂದ್ರವಾಗಿ ಕಾಜೂರನ್ನು ಎತ್ತರಕ್ಕೆ ಕೊಂಡೊಯ್ಯುವ ಭರವಸೆ ನೀಡಿ ಎಲ್ಲರ ಸಹಕಾರ ಕೋರಿದರು.
ಕೋಶಾಧಿಕಾರಿ ಕೆ.ಎಮ್ ಕಮಾಲ್, ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಸಮಿತಿಯ ನಿರ್ದೇಶಕರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.