ಬೆಳ್ತಂಗಡಿ; ಕರ್ನಾಟಕದ ಹಿರಿಯ ವಿದ್ವಾಂಸರಲ್ಲೋರ್ವರಾಗಿದ್ದ ಉಜಿರೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಹಳೆಪೇಟೆ ಇಲ್ಲಿನ ಪ್ರಧಾನ ಧರ್ಮಗುರುಗಳಾಗಿದ್ದ ಅಬ್ದುರ್ರಝಾಕ್ ಸಖಾಫಿ ಕಳಂಜಿಬೈಲು (52.ವ) ಅವರು ಡಿ. 19 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕಲ್ಲಕಟ್ಟ ನಿವಾಸಿ ಮರ್ಹೂಮ್ ಅಬ್ದುಲ್ ಖಾದರ್ ಹಾಜಿ ಮತ್ತು ಆಯಿಶಾ ಹಜ್ಜುಮ್ಮ ದಂಪತಿ ಪುತ್ರರಾಗಿದ್ದ ಅಬ್ದುಲ್ ರಝಾಕ್ ಸಖಾಫಿ ಅವರು
ಕರ್ನಾಟಕ ರಾಜ್ಯ ಸಖಾಫೀಸ್ ಕೌನ್ಸಿಲ್ ಇದರ ಬೆಳ್ತಂಗಡಿ ತಾ. ಸಮಿತಿ ನಿರ್ದೇಶಕರೂ ಆಗಿದ್ದರು. ಕೇರಳದ ಕಲ್ಲಿಕೋಟೆ ಮರ್ಕಝ್ ಅಂತಾರಾಷ್ಟ್ರೀಯ ವಿದ್ಯಾ ಸಂಸ್ಥೆಯಲ್ಲಿ ಧಾರ್ಮಿಕ ಸಖಾಫಿ ಪದವಿ ಪಡೆದಿದ್ದ ಅವರು, ಇತ್ತೀಚೆಗೆ ನಮ್ಮನ್ನಗಲಿದ್ದ ಖಾಝಿ ತಾಜುಲ್ ಫುಕಹಾಅ್ ಬೇಕಲ್ ಉಸ್ತಾದರ ಪರಮಶಿಷ್ಯರಲ್ಲಿ ಓರ್ವರಾಗಿದ್ದರು. ಪೇರಮುಗರು, ಪುತ್ತಿಗೆ,ಸುಳ್ಯದ ಎಲಿಮಲೆ, ನೆಲ್ಯಾಡಿ ಇಲ್ಲೆಲ್ಲಾ ಮುದರ್ರಿಸರಾಗಿ ಕರ್ತವ್ಯ ನಿರ್ವಹಿಸಿ ಕಳೆದ ಎರಡು ತಿಂಗಳಿನಿಂದೀಚೆಗೆ ಉಜಿರೆ ಕೇಂದ್ರ ಮಸ್ಜಿದ್ನಲ್ಲಿ ಮುದರ್ರಿಸರಾಗಿದ್ದರು.
ಬೇಕಲ್ ಉಸ್ತಾದರ ಗುರು ಸೇವೆ ಮಾಡುತ್ತಿರುವ ಒಂದು ದೃಶ್ಯ
ಬೆಳಿಗ್ಗೆ ಅವರಿಗೆ ಎದೆ ನೋವು ಕಾಣಿಸಿಕೊಂಡ ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವ ದಾರಿ ಮಧ್ಯೆ ಅವರು ಕೊನೆಯುಸಿರೆಳೆದರು.
ಮೃತರು ಪತ್ನಿ ಝುಬೈದಾ, ಪುತ್ರ ರಾಝಿಕ್, ಮೂವರು ಪುತ್ರಿಯರಾದ ಝಬೀದಾ, ಝಹೀರಾ ಮತ್ತು ಝಮೀರಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.