ಹಳೇಯದನ್ನು ಮರೀಬಾರದು ಹೊಸತನ್ನು ಬಿಡಬಾರದು ಎಂಬ ರೀತಿಯಲ್ಲಿ ಕೆಲಸ ಮಾಡಬೇಕು. ಅಷ್ಟು ಬದಲಾವಣೆ ಆಗಿದೆ. ಬೆಳ್ತಂಗಡಿ ನನ್ನದೇ ಊರು ಆಗಿರುವುದರಿಂದ ಇಲ್ಲಿ ಉತ್ತಮ ಸಹಕಾರ ಸಿಕ್ಕಿದೆ. ಸೀಮಿತ ಆದಾಯದಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ನಿರ್ಗಮಿತ ಮುಖ್ಯಾಧಿಕಾರಿ ಎಂ.ಹೆಚ್ ಸುಧಾಕರ್ ಹೇಳಿದರು.
ಸುಳ್ಯ ಪಟ್ಟಣ ಪಂಚಾಯತ್ ಗೆ ಮುಖ್ಯಾಧಿಕಾರಿಯಾಗಿ ವರ್ಗಾವಣೆಗೊಂಡ ಬೆಳ್ತಂಗಡಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂ.ಎಚ್ ಸುಧಾಕರ್ ಅವರಿಗೆ ಬೀಳ್ಕೊಡುಗೆ ಹಾಗೂ ನೂತನ ಮುಖ್ಯಾಧಿಕಾರಿಗಳಾಗಿ ಆಗಮಿಸುತ್ತಿರುವ ರಾಜೇಶ್ ಕೆ ಮೂಡಬಿದ್ರೆ ಅವರಿಗೆ ಸ್ವಾಗತ ಕಾರ್ಯಕ್ರಮ ಜೂ.8 ರಂದು ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.
ಸಾರ್ವಜನಿಕ ಸಹಭಾಗಿತ್ವದಲ್ಲಿ ಮಾತ್ರ ಸರಕಾರಿ ವ್ಯವಸ್ಥೆಗಳು ಅತ್ಯುತ್ತಮ ವಾಗಿ ಮುಂದುವರಿಯಲು ಸಾಧ್ಯ.ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಿದೆ ಎಂದರು.
ಅಧಿಕಾರ ವಹಿಸಿಕೊಂಡ ನೂತನ ಮುಖ್ಯಾಧಿಕಾರಿ ರಾಜೇಶ್ ಮೂಡಬಿದ್ರೆ ಮಾತನಾಡಿ, ಉಳ್ಳಾಲ ಸೋಮೇಶ್ವರ, ಮೂಡಬಿದ್ರೆ ಮೂಲ್ಕಿಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಆಡಳಿತ ಪಕ್ಷ , ವಿರೋಧ ಪಕ್ಷ ಎಲ್ಲರೂ ಸೇರಿದರೆ ಮಾತ್ರ ಅಭಿವೃದ್ಧಿ ಕೆಲಸ ಮಾಡಬಹುದು. ಮುಂದಕ್ಕೆ ಎಲ್ಲರೂ ಸೇರಿ ಅಭಿವೃದ್ಧಿ ಮಾಡೋಣ ಎಂದರು.
ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಯಾನಂದ ಗೌಡ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.
ಸಮಾರಂಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್, ಸದಸ್ಯರಾದ ಡಿ. ಜಗದೀಶ್, ಜನಾರ್ದನ ಕುಲಾಲ್, ರಾಜಶ್ರೀ ರಮಣ್, ನಾಮನಿರ್ದೇಶಿತ ಸದಸ್ಯ ಕೇಶವ, ಇಂಜಿನಿಯರ್ ಮಹಾವೀರ ಆರಿಗಾ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಸಿಬ್ಬಂದಿ ನಿತಿನ್ ಕಾರ್ಯಕ್ರಮ ನಿರೂಪಿಸಿದರು. ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಭಾಗಿಯಾಗಿದ್ದರು.ಪಟ್ಟಣ ಪಂಚಾಯತ್ ಸದಸ್ಯ ಶರತ್ಕುಮಾರ್ ಶೆಟ್ಟಿ ವಂದಿಸಿದರು.