ಬೆಳ್ತಂಗಡಿ: ವೈದ್ಯರ ದಿನಾಚರಣೆ ಅಂಗವಾಗಿ ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರದ ಕರ್ತವ್ಯ ವೈದ್ಯರುಗಳಿಗೆ ಹಾಗೂ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದ ವತಿಯಿಂದ ಗೌರವಾರ್ಪಣೆ ಹಾಗೂ ವೈದ್ಯರೊಂದಿಗೆ ಆತ್ಮೀಯ ಸಹಭೋಜನ ಕಾರ್ಯಕ್ರಮ ಜು.1ರಂದು ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ನಡೆಯಿತು.
ಮಾನವ ಸ್ಪಂದನ ತಂಡದ ಚೇರ್ಮೆನ್ ಪಿ.ಸಿ ಸೆಬಾಸ್ಟಿಯನ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದ ಕೋವಿಡ್ ಸೋಲ್ಜರ್ಸ್ ತಂಡದ ಕೇಪ್ಟನ್ ಅಶ್ರಫ್ ಆಲಿಕುಂಞಿ ಮಾತನಾಡಿ, ವೈದ್ಯರುಗಳು ಕೋವಿಡ್ ನಿಯಂತ್ರಣದಲ್ಲಿ ಮಾಡುತ್ತಿರುವ ಸೇವೆಗೆ ಪೂರಕವಾಗಿ ನಮ್ಮ ಸಂಘ ಕೆಲಸಮಾಡುತ್ತಿದೆ. ಸರ್ವಧರ್ಮೀಯರನ್ನೂ ಒಳಗೊಂಡು ರಾಜ್ಯದಲ್ಲೇ ಮೊದಲ ನಮ್ಮ ಸಂಘಟನೆ ವತಿಯಿಂದ ಇದುವರೆಗೆ 36 ಅಂತ್ಯಸಂಸ್ಕಾರ ಗಳನ್ನು ಮತ್ತು ಇತರ ಕೋವಿಡ್ ಸೇವೆಗಳನ್ನು ನೀಡುತ್ತಾ ಬರಲಾಗಿದೆ ಎಂದರು.
ಗೌರವ ಸ್ವೀಕರಿಸಿದ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಿದ್ಯಾವತಿ ಮಾತನಾಡಿ, ಕೋವಿಡ್ ಆರಂಭ ಕಾಲಘಟ್ಟದಿಂದ ಈವರೆಗೂ ಸೈನಿಕರಂತೆ ಪ್ರಾಮಾಣಿಕವಾಗಿ ಸೇವೆ ನೀಡಿದ್ದೇವೆ. ಆದರೆ ದೇಶದ ಗಡಿ ಕಾಯುವ ಸೈನಿಕರೇ ನಮಗೆ ಸ್ಪೂರ್ತಿಯಾಗುತ್ತಾರೆ. ಮಾನವ ಸ್ಪಂದನ ತಂಡದ ಕೆಲಸಗಳು ನಮ್ಮ ಇಲಾಖೆಗೆ ಬಹಳ ಸಹಕಾರಿಯಾಗಿದೆ ಎಂದರು.
ವೈದ್ಯರ ದಿನದಂದು ಎಲ್ಲಾ ವೈದ್ಯರನ್ನು ಭಾವನಾತ್ಮಕವಾಗಿ ಗೌರವಿಸಿರುವುದು ಖುಷಿಕೊಟ್ಟಿದೆ ಎಂದರು.
ವೇದಿಕೆಯಲ್ಲಿ ತಾ.ಆರೋಗ್ಯಾಧಿಕಾರಿ ಡಾ.ಕಲಾಮಧು, ಕರ್ತವ್ಯ ವೈದ್ಯರುಗಳಾದ ಡಾ. ಯೋಗೇಶ್, ಡಾ. ಶಶಾಂಕ್ ಕಾಂಬ್ಲೆ, ಡಾ. ತಾರಾಕೇಸರಿ, ಡಾ. ರಶ್ಮಿ, ಡಾ. ಅಭಿರಾಮ್, ಡಾ. ಆಶಲತಾ, ಡಾ. ಸವೇರಾ ಪಿಂಟೋ ಮತ್ತು ಡಾ. ಪ್ರಜ್ಞಾ ಶೆಟ್ಟಿ ಉಪಸ್ಥಿತರಿದ್ದರು.
ಮಾನವ ಸ್ಪಂದನ ತಂಡದ ಉಮೇಶ್ ಗೌಡ, ಕೋವಿಡ್ ಸೋಲ್ಜರ್ಸ್ ತಂಡದ ಸದಸ್ಯ ಶರೀಫ್ ಬೆರ್ಕಳ ಮತ್ತು ಅಕ್ಬರ್ ಬೆಳ್ತಂಗಡಿ ಭಾಗಿಯಾಗಿದ್ದರು.
ತಾ. ಆರೋಗ್ಯಾಧಿಕಾರಿ ಕಚೇರಿ ಕಾರ್ಯಕ್ರಮ ಸಂಯೋಜಕ ಅಜಯ್ ಕಲ್ಲೆಗ ನಿರೂಪಿಸಿದರು. ಆರ್ಬಿಎಸ್ಕೆ ಸಂಯೋಜಕಿ ರಮ್ಯಾ ವಂದಿಸಿದರು.