ಬೆಳ್ತಂಗಡಿ; ಮಿತ್ತಬಾಗಿಲು ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನ ಪುನರ್ ನಿರ್ಮಾಣಗೊಳ್ಳುತ್ತಿದ್ದು ಇದರ ಸುತ್ತು ಪೌಳಿ ಗೋಡೆಯ ಶಿಲಾನ್ಯಾಸವನ್ನು ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ, ದಾನಿಗಳು ಶನಿವಾರ ನೆರವೇರಿಸಿದರು.
ಇತಿಹಾಸ ಪ್ರಸಿದ್ಧವಾದ ಈ ದೇಗುಲದ ಅಭಿವೃದ್ಧಿಯಲ್ಲಿ ಸಂಬಂಧಪಟ್ಟ ಗ್ರಾಮಗಳ ಗ್ರಾಮಸ್ಥರು ಕುಟುಂಬಸ್ಥರಂತೆ ಕೈಜೋಡಿಸಿದ್ದಾರೆ. ತಾಲೂಕು ಮಟ್ಟದ ಸಮಿತಿಯನ್ನು ರಚಿಸಿ ಕಟೀಲು,ಪೊಳಲಿ ದೇವಸ್ಥಾನಗಳಲ್ಲಿ ನಡೆದಂತೆ ಇಲ್ಲಿಯೂ ಬ್ರಹ್ಮಕಲಶೋತ್ಸವ ನಡೆಯಬೇಕು. ದೇವಸ್ಥಾನದ ಅಭಿವೃದ್ಧಿಗೆ ಸಂಸದ ನಳಿನ್ ಕುಮಾರ್ ಕಟೀಲು ಅವರೊಂದಿಗೆ ಮಾತುಕತೆ ನಡೆಸಿ, ಮುಂದಿನ ಅಧಿವೇಶನದಲ್ಲಿ ಸರಕಾರದಿಂದ ಅನುದಾನ ಒದಗಿಸುವಂತೆ ಮನವಿ ಮಾಡಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ದಾನಿಗಳು ನೀಡಿದ ಸುತ್ತು ಪೌಳಿ ಗೋಡೆಯ ಶಿಲೆಗಳನ್ನು ದಾನಿಗಳಿಂದಲೇ ಹಸ್ತಾಂತರಿಸಲಾಯಿತು. ದೇವಸ್ಥಾನದ ವತಿಯಿಂದ ದಾನಿಗಳನ್ನು ಗೌರವಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಲೋಕೇಶ್ ರಾವ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಕ್ಕೆನೇಜಿ ವಾಸುದೇವ ರಾವ್, ನಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ್ ಗೌಡ, ಕಡಿರುದ್ಯಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಕುಮಾರ್, ಮಿತ್ತಬಾಗಿಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿನಯಚಂದ್ರ ಸೇನೆರೆಬೆಟ್ಟು, ಮಲವಂತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಿನೇಶ್ ಗೌಡ, ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ನ್ಯಾಯವಾದಿ ಬಿ.ಕೆ. ಧನಂಜಯ ರಾವ್ ಕಾರ್ಯಕ್ರಮ ನಿರ್ವಹಿಸಿದರು.