ಬೆಳ್ತಂಗಡಿ; ದೇಶದ್ರೋಹದ ಹೇಳಿಕೆ ನೀಡಿದ ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ವತಿಯಿಂದ ಗುರುವಾರ ದಿಢೀರ್ ಪ್ರತಿಭಟನೆ ನಡೆಯಿತು.
ಕರ್ನಾಟಕ ಸರಕಾರದ ಸಚಿವರಾದ ಈಶ್ವರಪ್ಪ ಅವರು ಇತ್ತೀಚೆಗೆ ರಾಷ್ಟ್ರದ ಕೆಂಪು ಕೋಟೆಯಲ್ಲಿ ರಾಷ್ಟ್ರ ದ್ವಜದ ಬದಲು ಕೇಸರಿ ಧ್ವಜವನ್ನು ಹಾರಿಸಲಾಗುವುದು ಎಂದು ದೇಶ ದ್ರೋಹದ ಹೇಳಿಕೆ ನೀಡಿದ್ದಾರೆ. ಸಂವಿಧಾನದ ವಿಧಿಗಳನುಸಾರ ಪ್ರಮಾಣವಚನ ಸ್ವೀಕರಿಸಿದ ರಾಜ್ಯದ ಹಿರಿಯ ಸಚಿವರಾಗಿರುವ ಈಶ್ವರಪ್ಪನವರು ತಮ್ಮ ಸ್ಥಾನದ ಘನತೆಯನ್ನು ಮರೆತು ಬೇಜವಬ್ದಾರಿಯುತ ಹೇಳಿಕೆ ನೀಡಿರುತ್ತಾರೆ. ಆ ಮೂಲಕ ಸಂವಿಧಾನ ಮತ್ತು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಇದು ದೇಶದ್ರೋಹಕ್ಕೆ ಸಮಾನಾದ ಪ್ರಕರಣ.
ಕೆಂಪುಕೋಟೆಯಲ್ಲಿ ರಾಷ್ಟ್ರ ಧ್ವಜದ ಕೆಳಗಡೆ ರೈತರು ಧ್ವಜ ಹಾರಿಸಿದಾಗ ರೈತರ ಮೇಲೆ ದೇಶ ದ್ರೋಹದ ಪ್ರಕರಣ ಮತ್ತು ರಾಷ್ಟ್ರಕ್ಕೆ ಅವಮಾನ ಎಂಬುದಾಗಿ ಹೇಳಿಕೆ ನೀಡಿದ್ದರು. ಇದೀಗ ರಾಷ್ಡ್ರದ್ರೋಹ ಎಸಗಿದ ಈಶ್ವರಪ್ಪ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಭಾರತೀಯ ಜನತಾ ಪಕ್ಷವೂ ಸಂವಿಧಾನದ ಬದಲು ಮಾಡುವ ಹಿಡನ್ ಅಜೆಂಡ ಹೊಂದಿದ್ದು , ಸಂಸದ ಅನಂತ ಕುಮಾರ್ ಹೆಗಡೆಯವರು ನಾವು ಬಂದಿರೂದೆ ಸಂವಿಧಾನ ಬದಲ ಮಾಡಲು ಎಂದು ಈಗಾಗಲೇ ಹೇಳಿದ್ದಾರೆ. ಸಚಿವರಾದ ಈಶ್ವರಪ್ಪನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುವ ದೇಶದ್ರೋಹದ ಹೇಳಿಕೆ ನೀಡಿದ್ದು , ಅವರನ್ನು ತಕ್ಷಣ ಸಚಿವ ಸಂಪುಟದಿಂದ ವಜಾ ಮಾಡಿ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪಾದಯಾತ್ರೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿದ ನಿಯೋಗ ತಹಶಿಲ್ದಾರರ ಮೂಲಕ ರಾಜ್ಯಪಾಲರಿಗೆ ದೂರು ನೀಡಿದರು.
ಜೊತೆಗೆ, ರಾಜ್ಯಾದ್ಯಂತ ಈ ಹಿಂದೆ ಇದ್ದಂತೆ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು ಅದೇ ರೀತಿ ಮುಂದುವರಿಸುವಂತೆ ಅನುಕೂಲ ಮಾಡಿಕೊಡಬೇಕೆಂದೂ ಮನವಿಯಲ್ಲಿ ಆಗ್ರಹಿಸಲಾಯಿತು. ಪ್ರತಿಭಟನೆಯ ಮುಂಚೂಣಿತ್ವದಲ್ಲಿ
ಮಾಜಿ ಶಾಸಕ ವಸಂತ ಬಂಗೇರ, ಉಭಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಮತ್ತು ರಂಜನ್ ಜಿ ಗೌಡ, ಪ್ರಮುಖರಾದ ಮನೋಹರ್ ಕುಮಾರ್ ಇಳಂತಿಲ,ಎ.ಸಿ ಮ್ಯಾಥ್ಯೂ, ಅಬ್ದುಲ್ ರಝಾಕ್, ಅಬ್ದುಲ್ ರಹಿಮಾನ್ ಪಡ್ಪು, ಮುಹಮ್ಮದ್ ನೆರಿಯ, ಸಲೀಂ ಗುರುವಾಯನಕೆರೆ, ಸಂದೀಪ್ ಅರ್ವ, ವಿನ್ಸೆಂಟ್ ಡಿಸೋಜಾ, ಜಯವಿಕ್ರಮ ಕಲ್ಲಾಪು, ಅಶ್ರಫ್ ನೆರಿಯ, ಬೇಬಿ ಸುವರ್ಣ, ಅಭಿನಂದನ್ ಹರೀಶ್ ಕುಮಾರ್, ಭರತ್ ಬಂಗಾಡಿ, ಮೋಹನ್ ಕಲ್ಮಂಜ, ರೋಯಿ ಜೋಸೆಫ್, ಲಕ್ಷ್ಮಣ ನೆರಿಯ, ಪಿ.ಕೆ ರಾಜನ್, ಶ್ರೀನಿವಾಸ ಕೆ ಉಜಿರೆ, ರೂಪಲತಾ, ಸೆಬಾಸ್ಟಿಯನ್ ಪಿ.ಟಿ, ಅಬ್ಬಾಸ್ ಬಟ್ಲಡ್ಕ, ಶಾಜು ಜೋಸೆಫ್ ನೆರಿಯ ಮೊದಲಾದವರು ಭಾಗಿಯಾಗಿದ್ದರು..