ಬೆಳ್ತಂಗಡಿ; ಇತ್ತೀಚೆಗೆ ಕರಾವಳಿಯಲ್ಲಿ ಹುಟ್ಟಿಕೊಂಡ ಹಿಜಾಬ್ ಪ್ರಕರಣ ತೀವ್ರಸ್ವರೂಪದ ವಿವಾದವಾಗಿ ಮಾರ್ಪಟ್ಟು ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿದೆ. ಪರೀಕ್ಷೆಗಳಿಗೆ ದಿನ ಎಣಿಸುತ್ತಿರುವ ಸಂದರ್ಭದಲ್ಲಿ ಇಂತಹ ವಿವಾದಗಳು ವಿದ್ಯಾಭ್ಯಾಸಕ್ಕೆ ಕಂಟಕವಾಗಿದ್ದು, ಪ್ರಜಾಸತ್ತಾತ್ಮಕ ದಾರಿಯಲ್ಲಿ ಇದಕ್ಕೆ ಕೊನೆ ಹಾಡಬೇಕಾಗಿದೆ . ಈ ನಡುವೆ ನ್ಯಾಯಾಲಯ ನೀಡಿರುವ ಮಧ್ಯಂತರ ತೀರ್ಪನ್ನು ದುರ್ವಾಖ್ಯಾನಗೊಳಿಸಿ ಶಿರವಸ್ತ್ರ ಧರಿಸಿದ ವಿದ್ಯಾರ್ಥಿನಿಯರಿಗೆ ಶಿಕ್ಷಣವನ್ನು ನಿರಾಕರಿಸುವ ಪ್ರವೃತ್ತಿ ಕೆಲವು ಸಂಸ್ಥೆಗಳಲ್ಲಿ ಕಂಡುಬಂದಿದ್ದು ಇದು ಅತ್ಯಂತ ಖಂಡನಾರ್ಹ. ಇದರ ವಿರುದ್ಧ ಎಸ್ಸೆಸ್ಸೆಫ್ ಈಸ್ಟ್ ಜಿಲ್ಲೆ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್ಸೆಸ್ಸೆಫ್ ಜಿಲ್ಲಾ ಪ್ರ.ಕಾರ್ಯದರ್ಶಿ ಮುಹಮ್ಮದ್ ಅಲೀ ತುರ್ಕಳಿಕೆ ಹೇಳಿದರು.
ಬೆಳ್ತಂಗಡಿ ವಾರ್ತಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹೆಣ್ಣುಮಕ್ಕಳು ಶಿರವಸ್ರ್ತ ಧರಿಸುವುದು ಮುಸ್ಲಿಮರ ಧಾರ್ಮಿಕ ಸಂಸ್ಕೃತಿಯಾಗಿದ್ದು ಪುರಾತನ ಕಾಲದಿಂದಲೂ ಅದನ್ನು ಪಾಲಿಸುತ್ತಾ ಬರಲಾಗುತ್ತಿದೆ. ಸಮಪತ್ರದ ನೆಪದಲ್ಲಿ ಏಕಾಏಕಿ ಅದನ್ನು ನಿರಾಕರಿಸುವುದು ಯಾವದೋ ಷಡ್ಯಂತ್ರದ ಭಾಗವೆಂದೇ ಭಾವಿಸಬೇಕಾಗುತ್ತದೆ . ಸಮವಸ್ತ್ರ ಜಾರಿಯಲ್ಲಿರುವ ಸಂಸ್ಥೆಗಳಲ್ಲಿ ಸಮಯಕ್ಕೆ ಧಕ್ಕೆಯಾಗದಂತೆ ತಲೆ ಧರಿಸಲಾಗುತ್ತದೆ . ಪುರಾತನ ಕಾಲದಿಂದಲೂ ಮುಸ್ಲಿಮ್ ಹೆಣ್ಣುಮಕ್ಕಳು ಧರಿಸುತ್ತಿರುವ ಶಿರವಸ್ತ್ರವನ್ನು ತೆಗೆಸುವುದಕ್ಕಾಗಿ ಕೇಸರಿ ಶಾಲನ್ನು ಹೊಸವಾಗಿ ಆರಂಭಿಸಲಾಗಿದೆ. ಕೇಸರಿ ಶಾಲು ಮುಸ್ಲಿಮರ ಶಿರವಸ್ತ್ರದಂತೆ ಧಾರ್ಮಿಕವಾಗಿ ಅನಿವಾರ್ಯವಾಗಿದ್ದರೆ ಈ ಹಿಂದೆ ಯಾರೂ ಅದನ್ನು ಧರಿಸಿರಲಿಲ್ಲವೇಕೆ? ಇಲ್ಲಿ ವಿವಾದಕ್ಕಾಗಿ ವಿವಾದವನ್ನು ಸೃಷ್ಟಿಸಲಾಗಿದೆ ಎನ್ನಾನದಕ್ಕೆ ಬೇರೇನು ಪ್ರಧಾನ ಬೇರೇನು ಪುರಾವೆ ಬೇಕು ಎಂದು ಅವರು ಪ್ರಶ್ನಿಸಿದರು.
ಸದ್ಯ ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ಸಂವಿಧಾನದ ಕೊಡಮಾಡಿರುವ ಧಾರ್ಮಿಕ ಸ್ವಾತಂತ್ರದ ಪ್ರಕಾರ ಹಿಜಾಬ್ ಧರಿಸಲು ಅನುಮತಿ ದೊರೆಯುವ ವಿಶ್ವಾಸವಿದೆ . ಈ ನಡುವೆ ಈಗಾಗಲೇ ಸಮವಸ್ತ್ರ ಜಾರಿಯಲ್ಲಿದ್ದು ವಿವಾದ ಉಂಟಾಗಿರುವ ಸಂಸ್ಥೆಗಳಿಗೆ ಅನ್ವಯವಾಗುವಂತೆ ಕೋರ್ಟು ನೀಡಿರುವ ಮಧ್ಯಂತರ ತೀರ್ಪು ಇತರ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲವೆಂದು ಕೋರ್ಟ್ ಸ್ಪಷ್ಟಪಡಿಸಿದೆ.
ಆದಾಗ್ಯೂ ಕೆಲವು ಸಂಸ್ಥೆಗಳ ಮುಖ್ಯಸ್ಥರು ಹಿಜಾಬನ್ನು ತೆಗೆಸಲು ಒತ್ತಡ ಹೇರುತ್ತಿದ್ದು , ಒಪ್ಪದವರನ್ನು ಹೊರಗೆ ನಿಲ್ಲಿಸುವ ಇಲ್ಲವೇ ಮನೆಗೆ ಕಳಹಿಸುವ ಪ್ರಯತ್ನ ನಡೆದಿದೆ.
ಕೋರ್ಟ್ ಆದೇಶ ಪಾಲಿಸುವಂತೆ ಹೇಳುವ ಪ್ರಸ್ತುತ ಸಂಸ್ಥೆಗಳ ಮುಖ್ಯಸ್ಥರು ವಾಸ್ತವದಲ್ಲಿ ತಾವೇ ಕೋರ್ಟು ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ . ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ತಲೆಗೆ ಹಿಜಾಬು ಧರಿಸುವುದರಿಂದಲೋ ಹಣೆಗೆ ಕುಂಕುಮ ಹಚ್ಚುವುದರಿಂದ ಸಮಾನತೆಗೇನೂ ಅಡ್ಡಿಯಾಗುವುದಿಲ್ಲ. ಕಾಲೇಜು ವಿದ್ಯಾರ್ಥಿಗಳು ವಿವಿಧತೆಯಲ್ಲಿ ಏಕತೆ ಎಂಬ ದೇಶದ ವಾಸ್ತವಿಕತೆಯನ್ನು ಅರ್ಥ ಮಾಡಿಕೊಳ್ಳದಷ್ಟು ಮುಗ್ಧರೇಗಲ್ಲ.
ಕೇವಲ ಸಾಂಕೇತಿಕ ಸಮಾನತೆಗಾಗಿ ಸಮವಸ್ತ್ರ ಸಂಹಿತೆಯನ್ನು ಹೇರಿ ಮುಸ್ಲಿಂ ಹಣ್ಣುಮಕ್ಕಳ ಸಾಂವಿಧಾನಿಕ ಹಕ್ಕನ್ನು ಕಿತ್ತುಕೊಳ್ಳಬಾರರು ಹಾಗೂ ಅವರ ಶೈಕ್ಷಣಿಕ ಬೆಳವಣಿಗೆಗೆ ತೊಡಕುಂಟುಮಾಡಬಾರದು. ಮುಂದಿನ ದಿನಗಳಲ್ಲಾದರೂ ಮಕ್ಕಳು ಪರೀಕ್ಷೆಗೆ ಗಮನ ಕೇಂದ್ರೀಕರಿಸುವಂತಾಗಬೇಕು ಎಂದು ಎಸ್ಸೆಸ್ಸೆಫ್ ಆಗ್ರಹಿಸುತ್ತದೆ ಎಂದರು.
ಈ ನಡುವೆ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿರುವ ಯುವಕನೊಬ್ಬನ ಹತ್ಯೆಯನ್ನು ಎಸ್ಸೆಸ್ಸೆಫ್ ಖಂಡಿಸುತ್ತದೆ . ಹತ್ಯೆ , ಹಲ್ಲೆ , ಪ್ರತಿ ಹಿಂಸೆಗಳಿಂದ ಯಾರೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ . ಅಪರಾಧಿಗಳನ್ನು ಪತ್ತೆ ಹಚ್ಚಿ ಉಗ್ರ ಶಿಕ್ಷೆಗೆ ಗುರಿಪಡಿಸಬೇಕು . ಈ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೆ ನ್ಯಾಯ ಒದಗಿಸಲು ಸಂಬಂಧಪಟ್ಟವರು ಮುಂದಾಗಬೇಕು . ಪ್ರತಿಯೊಬ್ಬರೂ ಪ್ರಜಾಸತ್ತಾತ್ಮಕ ಹಾದಿಯಲ್ಲಿ ಪ್ರತಿಭಟನೆಗಳನ್ನು ದಾಖಲಿಸಬೇಕಿದೆ . ಕಾನೂನನ್ನು ಕೈಗೆತ್ತಿಕೊಳ್ಳಲು ಹಿಂಗಾಚಾರವೆಸಗಲು ಮುಂದಾಗಬಾರದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಕೋಶಾಧಿಕಾರಿ ಶರೀಫ್ ಬೆರ್ಕಳ, ಕ್ಯಾಂಪಸ್ ಜಿಲ್ಲಾ ಕಾರ್ಯದರ್ಶಿ ರಶೀದ್ ಮಡಂತ್ಯಾರು, ಜಿಲ್ಲಾ ಕಾರ್ಯದರ್ಶಿಗಳಾದ ಇಕ್ಬಾಲ್ ಮಾಚಾರು ಮತ್ತು ಶರೀಫ್ ನಾವೂರು ಉಪಸ್ಥಿತರಿದ್ದರು.