ಬೆಳ್ತಂಗಡಿ; ಕಾನೂನು ಎಂಬುದು ನಮ್ಮ ಬದುಕಿಗೆ ಉತ್ತರದಾಯಿತ್ವವನ್ನು ನೀಡುತ್ತದೆ. ಕಾನೂನಿನ ಭಯ ಮೂಡಬೇಕಾದರೆ ಅದರ ಅರಿವು ಕೂಡಾ ಅಷ್ಟೇ ಮುಖ್ಯವಾಗಿದೆ. ಲೋಕ ಅದಾಲತ್ ಎನ್ನುವ ಪ್ರಕ್ರೀಯೆಯಿಂದ ತ್ವರಿತ ನ್ಯಾಯ ಪಡೆಯುವ ಅವಕಾಶವೂ ಇದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ. ನಾಗೇಶ್ ಮೂರ್ತಿ ಬಿ. ಕೆ ನುಡಿದರು.
ಚಾರ್ಮಾಡಿ ಗ್ರಾಮ ಪಂಚಾಯತ್, ಕಾನೂನು ಸೇವೆಗಳ ಪ್ರಾಧಿಕಾರ ದಕ್ಷಿಣ ಕನ್ನಡ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ ಹಾಗೂ ವಕೀಲರ ಸಂಘ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಚಾರ್ಮಾಡಿ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಆಯೋಜನೆಗೊಂಡಿದ್ದ ಜಾಗೃತಿ ಮತ್ತು ಪ್ರಚಾರ ಕಾರ್ಯಕ್ರಮ, ಕಾನೂನು ಸೇವಾ ಸಪ್ತಾಹ ಹಾಗೂ ಜನತಾ ನ್ಯಾಯಾಲಯ ಕುರಿತು ಮಾಹಿತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಅಂಗವಾಗಿ ಭಾರತದ ರಾಷ್ಟ್ರದಾದ್ಯಂತ ಅಕ್ಟೋಬರ್ 2 ರಿಂದ ನವಂಬರ್ 14 ರವರೆಗೆ ಈ ಅಭಿಯಾನ ಮುಂದುವರಿಯಲಿದೆ.
ಉದ್ಘಾಟನೆ ನೆರವೇರಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಸತೀಶ್ ಕೆ. ಜಿ ಅವರು ಸರಕಾರದ ಯೋಜನೆಯ ಮಾಹಿತಿ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೋ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿಯಾಗಿದ್ದ ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಅಗರ್ಥ, ಕಾನೂನಿನಒಳಹೊರಹು, ಹಿರಿಯ ನಾಗರಿಕರಿಗಿರುವ ಕಾನೂನಿನ ರಕ್ಷಣಾತ್ಮಕ ಅಂಶಗಳ ಬಗ್ಗೆ ಗಮನಸೆಳೆದರು. ಸಹಾಯಕ ಸರಕಾರಿ ಅಭಿಯೋಜಕಿ ಆಶಿತಾ ಎಂ, ಗ್ರಾ. ಪಂ. ಕಾರ್ಯದರ್ಶಿ ಲಕ್ಷ್ಮಿ, ಗ್ರಾ. ಪಂ. ಉಪಾಧ್ಯಕ್ಷೆ ಸುರೇಖಾ, ವಕೀಲರ ಸಂಘದ ಉಪಾಧ್ಯಕ್ಷ ವಸಂತ ಮರಕಡ, ಚಾರ್ಮಾಡಿ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಚಾರ್ಮಾಡಿ, ಕಕ್ಕಿಂಜೆ ಜುಮಾ ಮಸೀದಿ ಅಧ್ಯಕ್ಷ ಅರಕ್ಕಲ್ ಮಮ್ಮಿಕುಂಞಿ, ತೋಟತ್ತಾಡಿ ಸೈಂಟ್ ಅಂತೋನಿ ಚರ್ಚಿನ ಅಧ್ಯಕ್ಷ ಜೋಶ್ ಹಾಗೂ ವಕೀಲರಾದ ಮಮ್ತಾಜ್ ಬೇಗಂ ಸುಭಾಷಿಣಿ ಹಾಗೂ ವಕೀಲರುಗಳು ಗ್ರಾಮ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಯುವ ನ್ಯಾಯವಾದಿ ನವಾಝ್ ಶರೀಫ್ ಕಕ್ಕಿಂಜೆ ಕಾರ್ಯಕ್ರಮ ಸಂಯೋಜಿಸಿದರು.