ಬೆಳ್ತಂಗಡಿ: ತಾಲೂಕಿನ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಆಡಳಿತಕ್ಕೊಳಪಟ್ಟ ವಾಣಿ ಶಿಕ್ಷಣ ಸಂಸ್ಥೆಗಳು ಬೆಳ್ತಂಗಡಿ ಇದರ ಪ್ರಾಯೋಜಕತ್ವದಲ್ಲಿ ರಂಗು ರಂಗಿತ ವಾಣಿ ಸಾಂಸ್ಕೃತಿಕ ಉತ್ಸವ ಡಿ.10 ರಂದು ವಾಣಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಡಿಸೆಂಬರ್ 8 ರಂದು ಕಾಲೇಜು ವಿಭಾಗದ ವಾರ್ಷಿಕೋತ್ಸವ, ಡಿ 9 ರಂದು ಆಂಗ್ಲ ಮಾದ್ಯಮ ಶಾಲೆಯ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿದೆ. ಇದರಲ್ಲಿನ ತಾಲೂಕಿನ ಶಿಕ್ಷಣಾಭಿಮಾನಿಗಳು, ಕಲಾಭಿಮಾನಿಗಳು ಭಾಗವಹಿಸಬಹುದು ಎಂದು ವಾಣಿ ಪ.ಪೂ ಕಾಲೇಜಿನ ಪ್ರಾಚಾರ್ಯ ಡಿ. ಯದುಪತಿ ಗೌಡ ಹೇಳಿದರು.
ಸೋಮವಾರ ನಗರದ ವಾರ್ತಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.
ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ 1990 ರಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮಾದ್ಯಮ ಶಿಕ್ಷಣವನ್ನು ನೀಡುವ ಉದ್ದೇಶದಿಂದ ವಾಣಿ ಆಂಗ್ಲ ಮಾದ್ಯಮ ಶಾಲೆಯನ್ನು ಹುಟ್ಟು ಹಾಕಿತು. ಆರಂಭದಲ್ಲಿ LKG ಯಿಂದ SSLC ವರೆಗೆ ಶಿಕ್ಷಣ ನಡೆಸುತ್ತಿದ್ದ ಸಂಸ್ಥೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಣ ನೀಡುವ ದೃಷ್ಟಿಯಿಂದ ಸುಳ್ಯದ ದಿ, ಕುರುಂಜಿ ವೆಂಕಟರಮಣ ಗೌಡರ ಸಹಕಾರದೊಂದಿಗೆ 2004ರಲ್ಲಿ ವಾಣಿ ಪದವಿ ಪೂರ್ವ ಕಾಲೇಜು ಪ್ರಾರಂಭ ಮಾಡಿತು. ನಿರಂತರವಾಗಿ ಉತ್ತಮ ಶಿಕ್ಷಣ ನೀಡುತ್ತಾ ಮೂರು ದಶಕಗಳಲ್ಲಿ ವಾಣಿ ಶಿಕ್ಷಣ ಸಂಸ್ಥೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ತನ್ನ ಛಾಪನ್ನು ಪಡೆಯಿತು.
ವಾಣಿ ಸಂಸ್ಥೆ ಪಠ್ಯ ವಿಚಾರಗಳೊಂದಿಗೆ ಪಠ್ಯೇತರ ಚಟುವಟಿಕೆಗಳು ಆರಂಭ ಕಾಲದಿಂದಲೇ ನಿರಂತರ ಪ್ರೋತ್ಸಾಹ
ನೀಡುತ್ತಾ ಬ೦ದಿದೆ. ಇಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿದ ಹೆಮ್ಮೆ ವಾಣಿ ಶಿಕ್ಷಣ ಸಂಸ್ಥೆಗೆ ಇದೆ.
ಇಂದು ವಾಣಿ ಶಿಕ್ಷಣ ಸಂಸ್ಥೆಯಲ್ಲಿ LKG ಯಿಂದ PUC ವರೆಗೆ ಎರಡು ಸಾವಿರ ವಿದ್ಯಾರ್ಥಿಗಳು ಜ್ಞಾನಾರ್ಜನೆ ಗೈಯುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾ ಮಾರಿಯಿಂದ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ತೊಡಗಿಸಿಕೊಳ್ಳಲು ಸಾದ್ಯವಾಗಿಲ್ಲ ಹಾಗು ಇಲಾಖೆ ಯಾವುದಕ್ಕೂ ಅನುಮತಿಯನ್ನು ನೀಡಿಲ್ಲ. ಆದರೆ ಈ ವರ್ಷ ನಮ್ಮ ದೇಶದ ಸ್ವಾತಂತ್ರದ ಅಮೃತ ಮಹೋತ್ಸವ ವರ್ಷವಾಗಿದ್ದು ಈ ದೃಷ್ಟಿಯಿಂದ ಶಾಲಾ ಕಾಲೇಜಿನ ವಾರ್ಷಿಕ ಹಬ್ಬಗಳನ್ನು ನಡೆಸುವುದರ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಒಂದು ದಿನದ ವಾಣಿ ಸಾಂಸ್ಕೃತಿಕ ಉತ್ಸವವನ್ನು ನಡೆಸಿ ಬೆಳ್ತಂಗಡಿಯ ಕಲಾಭಿಮಾನಿಗಳಿಗೆ ವಿವಿಧ ಸಾಂಸ್ಕೃತಿಕ ಕಲಾ ವೈಭವವನ್ನು ಪ್ರದರ್ಶನ ಮಾಡಬೇಕು ಎನ್ನುವ ದೃಷ್ಟಿಯಿಂದ ವಾಣಿ ಸಾಂಸ್ಕೃತಿಕ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ದಾ ನಿಟ್ಟಿನಲ್ಲಿ ಡಿ.10 ರಂದು ವಾಣಿ ಸಾಂಸ್ಕೃತಿಕ ಹಬ್ಬವನ್ನು ಹಮ್ಮಿಕೊಳ್ಳಲಾಗಿದ್ದು, ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ. ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉದ್ಯಮಿ ಶಶಿಧರ ಶೆಟ್ಟಿ ಉದ್ಯಮಿಗಳು ಬರೋಡ, ಪುತ್ತೂರು ಗೌಡರ ಸಂಘದ ಗೌರವಾಧ್ಯಕ್ಷ ಮೋಹನ ಗೌಡ ಇಡ್ಯಡ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಎಸ್ ವಿರೂಪಾಕ್ಷಪ್ಪ, ವಾಣಿ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಎಚ್ ಪದ್ಮ ಗೌಡ ಅವರು ಭಾಗವಹಿಸಲಿದ್ದಾರೆ.
ಬೆಂಗಳೂರಿನ ನಾರಾಯಣ ಗೌಡ ಬೇಗೂರು, ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ತಾಲೂಕು ಮೂಲ್ಯರ ಯಾನೆ ಕುಂಬಾರರ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ಮುಂಬಾಯಿಯ ಉದ್ಯಮಿ ಎ ಎಂ ಪ್ರಾನ್ಸಿಸ್, ಮಿಯಾರು ಶ್ರೀರಾಮ ವ್ಯಾಲ್ಯೂ ಸರ್ವಿಸಸ್ ಸೋಲಾರ್ ಟೆಕ್ನಾಲಜಿ ಸೊಲ್ಯೂಸನ್ನ ನಿರ್ದೆಶಕರಾದ ನಿತ್ಯಾನಂದ ಬಿ, ಹೈದರಾಬಾದಿನ ನೋವಾಟಿನ್ ಕಂಪೆನಿಯ ಕುಮಾರಿ ಚಿನ್ಮಯಿ ವಿ ಭಟ್, ಪ್ರಗತಿ ಪರ ಕೃಷಿಕರು ನ್ಯಾಯವಾದಿಗಳಾದ ಸತೀಶ್ ಬಾರ್ದಡ್ಕ, ಬಳಂಜ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಕುರೆಲ್ಯ ಉಪಸ್ಥಿತರಿರಲಿದ್ದಾರೆ ಎಂದರು.
ಡಿ.10 ರಂದು
ಬೆಳಗ್ಗೆ 11 ಗಂಟೆಯಿಂದ ಬೆಂಗಳೂರಿನ ಖ್ಯಾತ ವಾಗ್ಮಿ ಸುಧಾ ಬರಗೂರು ಇವರಿಂದ 'ರಸನುಡಿ' ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಈ ವರ್ಷದ ರಾಜ್ಯೋತ್ಸವದ ಪ್ರಶಸ್ತಿ ಪಡೆದ ಖ್ಯಾತ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ರಕ್ಷಾ ರಾಗ್ನೇಶ್ ಅಭಾಗತರಾಗಿ ಭಾಗವಹಿಸಲಿದ್ದಾರೆ.
ಅಪರಾಹ್ನ 2.30 ರಿಂದ 4.30ರ ವರೆಗೆ ನೃತ್ಯ ವೈಭವ ಕಾರ್ಯಕ್ರಮ ವಿಧೂಷಿ ವಿದ್ಯಾ ಮನೋಜ್ ಶಿಷ್ಯರಿಂದ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಂದ ಯಕ್ಷನೃತ್ಯ ಹಾಗೂ ಪ್ಯೂಷನ್ ಡ್ಯಾನ್ಸ್ ನಡೆಯಲಿದೆ. ಸಂಜೆ ೫.೩೩ ರಿಂದ ೮.೩೦ ರ ವರೆಗೆ ರಾಜ್ಯದಲ್ಲಿಯೇ ಮಾನ್ಯತೆಯನ್ನು ಪಡೆದ ಸಿಟಿ ಗಯ್ಸ್ ಡ್ಯಾನ್ಸ್ ಕ್ರಿವ್ (ಕುಡ್ಡ ಕ್ವಿನ್ಸ್) ಮಂಗಳೂರು ತಂಡದಿಂದ ಡ್ಯಾನ್ಸ್ ಶೋ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸರ್ವರನ್ನು ವಾಣಿ ಶಿಕ್ಷಣ ಸಂಸ್ಥೆಗಳ ಪರವಾಗಿ ಸ್ವಾಗತಿಸುತ್ತಿದ್ದೇವೆ ಎಂದರು ಪತ್ರಿಕಾಗೋಷ್ಠಿಯಲ್ಲಿ ಕೇಳಿಕೊಂಡರು.
ಗೋಷ್ಠಿಯಲ್ಲಿ ವಾಣಿ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಹೆಚ್ ಪದ್ಮ ಗೌಡ, ಅಧ್ಯಕ್ಷ ಪಿ ಕುಶಾಲಪ್ಪ ಗೌಡ, ಕಾರ್ಯದರ್ಶಿ ಗಣೇಶ್ ಗೌಡ ಮತ್ತು ಉಪ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಉಪಸ್ಥಿತರಿದ್ದರು.
-----
ವರದಿ: ಅಚ್ಚು ಮುಂಡಾಜೆ