ಬೆಳ್ತಂಗಡಿ; ಮತ ಎಣಿಕೆ ಕೇಂದ್ರದ ಎದುರೇ ಎಸ್.ಡಿ.ಪಿ.ಐ ಪರ ವ್ಯಕ್ತಿಗಳು ವೈರಿ ದೇಶ ಪಾಕಿಸ್ತಾನದ ಪರ ಘೋಷಣೆಕೂಗಿದ್ದು, ಈ ರಾಷ್ಟ್ರದ್ರೋಹದ ಕೃತ್ಯವೆಸಗಿರುವ ಅವರು ಗೆಲ್ಲಿಸಿದ ಅಭ್ಯರ್ಥಿಗಳ ಮನಸ್ಥಿತಿ ಹೇಗಿರಬಹುದೆಂದು ಊಹಿಸಬಹುದು. ಆದುದರಿಂದ ವಿಜೇತರಾಗಿರುವ ಎಲ್ಲ ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳ ಸದಸ್ಯತ್ವವನ್ನು ಪ್ರಜಾಸತ್ತಾತ್ಮಕ ಕಾಯ್ದೆಯಡಿ ರದ್ದುಪಡಿಸಬೇಕು ಎಂದು ವಿ.ಹಿಂ.ಪ ತಾ. ಅಧ್ಯಕ್ಷ, ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಆಗ್ರಹಿಸಿದರು.
ಉಜಿರೆಯಲ್ಲಿ ಎಸ್.ಡಿ.ಪಿ.ಐ ವಿಜಯೋತ್ಸವದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ವಿಹಿಂಪ, ಭಜರಂಗದಳ ವತಿಯಿಂದ ಬೆಳ್ತಂಗಡಿ ಠಾಣೆಗೆ ದೂರು ನಿಡಿದ ಬಳಿಕ ಅವರು ಉಜಿರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಘಟನೆ ನಡೆಯುತ್ತಲೇ ಸಂಜೆವೇಳೆಗೆ ಪತ್ರಿಕಾಹೇಳಿಕೆ ನೀಡಿದ ಅವರು, ಈ ಬಗ್ಗೆ ಭಜರಂಗದಳ ಮತ್ತು ವಿ.ಹಿಂ.ಪ ವತಿಯಿಂದ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ವಿವರ ನೀಡಿದರು.
ಆರೋಪಿಗಳು ಮಾಡಿದ ದೇಶದ್ರೋಹದ ಕೃತ್ಯ ಜನಸಾಮಾನ್ಯರ ಲ್ಲಿ ರಾಷ್ಟ್ರದ ಗೌರವಕ್ಕೆ ಕುಂದುಂಟಾಗುವ ಸಾಧ್ಯತೆ ಹೇರಳವಾಗಿದೆ. ಇದನ್ನು ಸಂಘಟನೆ ಉಗ್ರವಾಗಿ ಖಂಡಿಸುತ್ತದೆ ಎಂದರು.
ಈ ವೇಳೆ ಮಾತನಾಡಿದ ವಿಹಿಂಪ ಪುತ್ತೂರು ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಆರೋಪಿಗಳ ವಿರುದ್ಧ 24 ಗಂಟೆಯೊಳಗೆ ಕ್ರಮ ಜರುಗದೇ ಇದ್ದಲ್ಲಿ ಜಿಲ್ಲೆಯಾಧ್ಯಂತ ಹೋರಾಟ ಸಂಘಟಿಸಲಾಗುವುದು ಎಂದರು. ಈ ವೇಳೆ ಠಾಣೆಗೆ ದೂರು ನೀಡಿದ ಮೋಹನ್ ಬೆಳ್ತಂಗಡಿ, ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ, ಪ್ರಮುಖರಾದ ರಮೇಶ್, ದಿನೇಶ್, ಸಂತೋಷ್, ಶ್ರೀಧರ ಗುಡಿಗಾರ್ ಮೊದಲಾದವರು ಉಪಸ್ಥಿತರಿದ್ದರು.