ಕೃಷಿ ಇಲಾಖೆಯಿಂದ ಇಬ್ಬರು ರೈತರಿಗೆ ಟಿಲ್ಲರ್ ಹಸ್ತಾಂತರ
ಬೆಳ್ತಂಗಡಿ: ಸರಕಾರದಿಂದ ಸಿಗುವ ಸವಲತ್ತುಗಳ ಕುರಿತು ಕೃಷಿಕರು ಗಮನಹರಿಸಿ ಕೃಷಿ ಇಲಾಖೆಯಿಂದ ಸೂಕ್ತ ಮಾಹಿತಿ ಪಡೆದು ಯೋಜನೆಗಳನ್ನು ಸದ್ಬಳಸಿಕೊಳ್ಳಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಕೃಷಿ ಇಲಾಖೆಯಿಂದ 2020-21ನೇ ಸಾಲಿನ ಕೃಷಿ ಯಾಂತ್ರೀಕರಣ ಉಪ ಅಭಿಯಾನ (ಎಸ್.ಎಂ.ಎ.ಎಂ. ) ಯೋಜನೆಯಡಿ ರೈತರಿಗೆ ಟಿಲ್ಲರ್ನ್ನು ಕೃಷಿ ಇಲಾಖೆ ಆವರಣದಲ್ಲಿ ಮಂಗಳವಾರ ವಿತರಿಸಿ ಮಾತನಾಡಿದರು.
ಈ ವೇಳೆ ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್ ಟಿ.ಎಂ., ಮಾತನಾಡಿ, ರೈತರಿಗೆ ಸಬ್ಸಿಡಿ ದರದಲ್ಲಿ ಯಂತ್ರೋಪಕರಣ ವಿತರಣೆಯಾಗುತ್ತಿದ್ದು, ಸಾಮನ್ಯ ವರ್ಗದ ಮಂದಿಗೆ ಶೇ.50 ಹಾಗೂ ಪ.ಜಾತಿ, ಪ.ಪಂ.ಡದ ಮಂದಿಗೆ ಶೇ.75 ಸಬ್ಸಿಡಿ ಒದಗಿಸಲಾಗುತ್ತದೆ ಎಂದರು.
ಸಹಾಯಕ ಕೃಷಿ ಅಧಿಕಾರಿಗಳಾದ ಚಿದಾನಂದ ಹೂಗಾರ್, ಉಮೇರ ಜಬೀನ್, ಧರ್ಮಸ್ಥಳ ಗ್ರಾ.ಪಂ. ಸದಸ್ಯ ಸುಧಾಕರ್, ಪಟ್ರಮೆ ಗ್ರಾ.ಪಂ. ಸದಸ್ಯ ಮನೋಜ್, ಪ್ರಮುಖರಾದ ಶಿವಪ್ಪ, ಚೆನ್ನಪ್ಪ, ಕೇಶವ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಮಿತ್ತಬಾಗಿಲು ತುಂಗಪ್ಪ ಪೂಜಾರಿ ಹಾಗೂ ಪಟ್ರಮೆ ದೇವಕುಮಾರಿ ಅವರಿಗೆ ಟಿಲ್ಲರ್ ಕೀಲಿಕೈಯನ್ನು ಶಾಸಕ ಹರೀಶ್ ಪೂಂಜ ಹಸ್ತಾಂತರಿಸಿದರು.