ಮೃತ ಸಾರಮ್ಮ ಅವರ ಅಂತ್ಯಸಂಸ್ಕಾರ ನೆರವೇರಿಸುತ್ತಿರುವ "ಸಹಾಯ್" ತಂಡ
ಬೆಳ್ತಂಗಡಿ; ಕೋವಿಡ್ ಮಹಾಮಾರಿಗೆ ತುತ್ತಾಗಿ ಪತ್ನಿ ಕೊನೆಯುಸಿರೆಳೆದ ಕೇವಲ 18 ಗಂಟೆಗಳ ಅಂತರದಲ್ಲಿ ಪತಿಯೂ ಅದೇ ದಾರಿ ಹಿಡಿದ ಘಟನೆ ನೆರಿಯ ಗ್ರಾಮದಲ್ಲಿ ನಡೆದಿದೆ.
ನೆರಿಯ ಗ್ರಾಮದ ಪರಂದಾಡಿ ನಿವಾಸಿ ಸಾರಮ್ಮ (58ವ.) ಅವರು ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಜೂನ್ 22 ನೇ ಮಂಗಳವಾರ ದಂದು ಮೃತಪಟ್ಟರೆ, ಅವರ ಪತಿ ಇಬ್ರಾಹಿಂ( 68ವ.) ಅವರು ಬುಧವಾರ ಬೆಳಿಗ್ಗೆ ಮಂಗಳೂರಿನ ಒಮೇಗಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಲ್ಲದೆ ಇದೀಗ ದಂಪತಿ ಪುತ್ರ ಅಬ್ದುಲ್ ಖಾದರ್ ಅವರಿಗೂ ಕೋವಿಡ್ ದೃಢಪಟ್ಟಿದೆ.
ಪರಂದಾಡಿ ಇಬ್ರಾಹಿಂ ಅವರ ಮನೆಯಲಿ ಸಾರಮ್ಮ ಅವರಿಗೆ ಮೊದಲು ಕೊವಿಡ್ ದೃಢಪಟ್ಟು ಅವರನ್ನು ಬೆಳ್ತಂಗಡಿ ಸರಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಬಳಿಕ ಪತಿ ಇಬ್ರಾಹಿಂ ಅವರಿಗೂ ಕೋವಿಡ್ ದೃಢಪಟ್ಟಿತ್ತು. ಹೃದಯ ಸಂಬಂಧಿ ಕಾಯಿಲೆಕೂಡ ಇದ್ದ ಅವರಿಗೆ ಇದು ತೊಂದರೆ ನೀಡಿದ್ದರಿಂದ ಅವರನ್ನು ಮಂಗಳೂರಿನ ಒಮೆಗಾ ಆಸ್ಪತ್ರೆಗೆ ದಾಖಲಿಸಲಾಯಿತು.
ಅಲ್ಲಿ ರೋಗ ಉಲ್ಬಣಗೊಂಡ ಪರಿಣಾಮ ಗೃಹಿಣಿ ಸಾರಮ್ಮ ಅವರು ಮಂಗಳವಾರ ಮೃತರಾದರೆ ಪತಿ ಇಬ್ರಾಹಿಂ ಅವರು ಬುಧವಾರ ಸಾವನ್ನಪ್ಪಿದ್ದಾರೆ.ಮೃತರ ಅಂತ್ಯಸಂಸ್ಕಾರ ನೆರಿಯ ಜುಮ್ಮಾ ಮಸ್ಜಿದ್ ದಫನ ಭೂಮಿಯಲ್ಲಿ ಕೋವಿಡ್ ನಿಯಮಾನುಸಾರ ನಡೆದಿದ್ದು, ಕರ್ನಾಟಕ ಮುಸ್ಲಿಂ ಜಮಾಅತ್ ಸಹಾಯ್ ಬೆಳ್ತಂಗಡಿ ಸರ್ಕಲ್ ತಂಡದ ಕಾರ್ಯಕರ್ತರು ನೆರವೇರಿಸಿದ್ದಾರೆ.ಮೃತ ದಂಪತಿ ಮೂವರು ಮಕ್ಕಳಾದ ಅಬೂಬಕ್ಕರ್, ಅಬ್ದುಲ್ ಖಾದರ್ ಮತ್ತು ರಫೀಕ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ