ಬೆಳ್ತಂಗಡಿ; ಇಲ್ಲಿನ ಉಜಿರೆ ನೈಟ್ ಬೀಟ್ ಕರ್ತವ್ಯದ ವೇಳೆ ಉಜಿರೆ ಜನಾರ್ದನ ದೇವಸ್ಥಾನದ ಬಳಿ ನಾಲ್ವರ ತಂಡ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಸಮವಸ್ತ್ರ ಹರಿದುದೂ ಮಾತ್ರವಲ್ಲದೆ ಜೀವಬೆದರಿಕೆಯೊಡ್ಡಿದ ಘಟನೆ ಸೋಮವಾರ ರಾತ್ರಿ 11.30 ರ ವೇಳೆಗೆ ನಡೆದಿದೆ.
ಬೆಳ್ತಂಗಡಿ ಠಾಣೆ ಪಿಸಿ ವೆಂಕಟೇಶ್ ಸಿ.ಬಿ ಅವರು ಈಸಮಬಂಧ ಠಾಣೆಗೆ ದೂರು ನೀಡಿದ್ದಾರೆ.
ಉಜಿರೆ ನಿವಾಸಿಗಳಾದ ಸಾಬು, ಮಂಜುನಾಥ, ಕಿರಣ ಮತ್ತು ನವೀನ ಎಂಬವರೇ ಹಲ್ಲೆ ನಡೆಸಿದವರೆಂದು ಹೆಸರಿಸಲಾಗಿದೆ.
ವೆಂಕಟೇಶ್ ಪಿಸಿ ಮತ್ತು ಹೋಮ್ಗಾರ್ಡ್ ರಾಜಣ್ಣ ಅವರು ಸಮವಸ್ತ್ರದಲ್ಲಿ ಉಜಿರೆ ದ್ವಾರದ ಬಳಿ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ವೇಳೆಗೆ ಸೇರಿದ ಜನರನ್ನು ಅಲ್ಲಿಂದ ಹೋಗುವಂತೆ ತಿಳಿಸಿದ ವೇಳೆಗೆ ಆರೋಪಿತರು ಪೊಲೀಸರನ್ನು ಮತ್ತು ಸಮವಸ್ತ್ರ ವನ್ನು ತುಚ್ಛವಾಗಿ ನಿಂದಿಸಿ ಸಮವಸ್ತ್ರದ ಕಾಲರ್ ಹಿಡಿದೆಳೆದು ಹರಿದಿರುವುದಲ್ಲದೇ ಆರೋಪಿಳೆಲ್ಲರೂ ಸೇರಿ ಕೈಗಳಿಂದ ಹಲ್ಲೆ ನಡೆಸಿ ಕಾಲಿನಿಂದ ತುಳಿದು ಪಿರ್ಯಾದಿ ದಾರರ ಕುತ್ತಿಗೆಯನ್ನು ಹಿಡಿದು ಮುಗಿಸಿ ಬಿಡುವುದಾಗಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಈಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.