ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಅಮಾನುಷವಾಗಿ ಕೊಲೆಗೈಯ್ಯಲ್ಪಟ್ಟ ಪ್ರವೀಣ್ ನೆಟ್ಟಾರು ಕೊಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಬೆಳ್ತಂಗಡಿ ಬಿಲ್ಲವ ಸಂಘದಿಂದ ಇಂದು ಸಂಜೆ 7.00 ಗಂಟೆಗೆ ಬೆಳ್ತಂಗಡಿ ಬಸ್ಸು ತಂಗುದಾಣದ ಬಳಿ ಮಾನವ ಸರಪಳಿ ರಚಿಸಿ ಮೌನ ಪ್ರತಿಭಟನೆ ನಡೆಯಲಿದೆ.
ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ.) ಬೆಳ್ತಂಗಡಿ ಇವರ ನೇತೃತ್ವದಲ್ಲಿ ನಡೆಯುವ ಈ ಮೌನ ಪ್ರತಿಭಟನೆಯಲ್ಲಿ ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ, ಬಿಲ್ಲವ ಮಹಿಳಾ ವೇದಿಕೆ ಬೆಳ್ತಂಗಡಿ ಯುವವಾಹಿನಿ (ರಿ.) ಬೆಳ್ತಂಗಡಿ ಮತ್ತು ಯುವವಾಹಿನಿ (ರಿ.) ವೇಣೂರು ಘಟಕ ಸಹಭಾಗಿಯಾಗಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಬಿಲ್ಲವ ಸಂಘದಿಂದ ತೀವ್ರ ಖಂಡನೆ
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಸಂಘಟನಾ ಕಾರ್ಯದರ್ಶಿಗಳು, ಸುಳ್ಯ ಮಾಜಿ ಅಧ್ಯಕ್ಷರು, ಗೆಜ್ಜೆಗಿರಿ ಕ್ಷೇತ್ರದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದ ಬಿಲ್ಲವ ಸಮಾಜದ ಯುವ ಮುಖಂಡ ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ರವರನ್ನು ಬರ್ಬರವಾಗಿ ಕೊಲೆಗೈದಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಬೆಳ್ತಂಗಡಿ ಬಿಲ್ಲವ ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ.
ಈ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಅತೀ ಶೀಘ್ರ ಶಿಕ್ಷೆ ನೀಡುವಲ್ಲಿ ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಈ ಮೂಲಕ ಆಗ್ರಹಿಸುತ್ತೇವೆ. ಮೃತರ ಕುಟುಂಬ ವರ್ಗದವರಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದ್ದಾರೆ.