ಬೆಳ್ತಂಗಡಿ : ನಡ ಗ್ರಾಮದ ಸುರ್ಯ ಕೇಳ್ತಾಜೆ ಬಳಿಯ ಸೊರಕೆ ಎಂಬಲ್ಲಿ ಅಪರಿಚಿತ ಯುವತಿಯ ಶವವೊಂದು ಅರೆಬೆಂದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಸೋಮವಾರ ಸಂಜೆ ಪತ್ತೆಯಾಗಿದೆ.
ಸೊರಕೆ ನಿವಾಸಿ ಚಂದ್ರಹಾಸ ಶೆಟ್ಟಿ ಅವರ ಮನೆಯವರು ಜಾನುವಾರು ಹುಡುಕಿಕೊಂಡು ಹೋದ ವೇಳೆ ಬೀರಿದ ದುರ್ವಾಸನೆಯ ಕಾರಣದಿಂದ ಸಂದೇಹಗೊಂಡು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ಯಾಡಿ 1 ಸಮೀಪದ ಸೊರಕೆ ಎಂಬಲ್ಲಿ ರಬ್ಬರ್ ತೋಟದ ಚರಂಡಿಯಲ್ಲಿ ಈ ಮೃತದೇಹವಿದ್ದು ಬಹುತೇಕ ಕೊಳೆತುಹೋಗಿದೆ.
ಮೈ ಮೈಲೆ ಕಟ್ಟಿಗೆ ರಾಶಿ ಹಾಕಲಾಗಿದ್ದು ಅದಕ್ಕೆ ಬೆಂಕಿಹಚ್ಚಿರುವುದು ಕಂಡು ಬಂದಿದೆ. ಅಲ್ಪ ಮಣ್ಣು ಸುರಿಯಲಾಗಿದ್ದು ಮರೆ ಮಾಚಲು ವಿಫಲ ಯತ್ನ ನಡೆಸಿರುವುದೂ ಮೇಲ್ನೋಟಕ್ಕೆ ಕಂಡು ಬರುತ್ತದೆ. ಬೆಂಕಿಯ ಕಾರಣಕ್ಕೆ ದೇಹ ಅರೆ ಸುಟ್ಟಿದ್ದು ಗುರುತು ಪತ್ತೆ ಮಾಡುವುದು ಕಷ್ಟಸಾದ್ಯ ಎಂಬಂತಹ ಸ್ಥಿತಿಯಲ್ಲಿದೆ ಎಂದು ಬೆಳ್ತಂಗಡಿ ಎಸ್.ಐ ನಂದಕುಮಾರ್ ತಿಳಿಸಿದ್ದಾರೆ.
ನಾಪತ್ತೆ ಪ್ರಕರಣಗಳಿಲ್ಲ;
ಬೆಳ್ತಂಗಡಿ ವೃತ್ತ ಕಚೇರಿ ವ್ಯಾಪ್ತಿಯ ಬೆಳ್ತಂಗಡಿ, ವೇಣೂರು, ಪುಂಜಾಲಕಟ್ಟೆ, ಧರ್ಮಸ್ಥಳ ಠಾಣೆಗಳಲ್ಲಿ ಸಧ್ಯಕ್ಕೆ ಮಹಿಳೆ ಅಥವಾ ಯುವತಿಯರು ನಾಪತ್ತೆಯಾಗಿರುವ ಯಾವುದೇ ದೂರುಗಳು ದಾಖಲಾಗಿಲ್ಲ. ಆದ್ದರಿಂದ ಈ ಮೃತದೇಹ ಹೊರಗಿನಿಂದ ತಂದು ಇಲ್ಲಿಹಾಕಿರುವ ಸಾಧ್ಯತೆಯೇ ಅಧಿಕ ಎಂದು ಹೇಳಲಾಗಿದೆ.
ಘಟನೆ ಅಂದಾಜು ಮೂರ್ನಾಲ್ಕು ದಿನಗಳ ಹಿಂದೆಯೇ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
--------
ವರದಿ: ಅಚ್ಚು ಮುಂಡಾಜೆ