ಬೆಳ್ತಂಗಡಿ; ಅತ್ಯುತ್ತಮ ಈಜುಗಾರರಾಗಿ ಹಲವರ ಜೀವರಕ್ಷಣೆ ಜೊತೆಗೆ ಹಲವು ಕಾರ್ಯಾಚರಣೆ ಗಳಲ್ಲಿ ಭಾಗಿಯಾಗಿರುವ ಖ್ಯಾತಿ ಹೊತ್ತ ಬಂದಾರಿನ ಮುಹಮ್ಮದ್ ಓಟೆಚ್ಚಾರು ಅವರನ್ನು ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಾಲಯದ ಬಳಿಯ ರಕ್ಷಣಾ ಕಾರ್ಯಕ್ಕೆ ಜಿಲ್ಲಾಡಳಿತ ಮತ್ತೊಮ್ಮೆ ನೇಮಿಸಿದೆ.
ಜೂ. 16 ರಂದು ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ಸಭಾಂಗಣದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ನಡೆದ ಮಳೆಗಾಲ ಪೂರ್ವದ ಸಿದ್ಧತಾ ಸಮಾಲೋಚನಾ ಸಭೆಯಲ್ಲಿ ಈ ನೇಮಕಾತಿ ನಡೆಸಲಾಗಿದೆ.
ಎಸ್ವೈಎಸ್ ಕುಪ್ಪೆಟ್ಟಿ ಸೆಂಟರ್ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮುಹಮ್ಮದ್ ಓಟೆಚ್ಚಾರು ಅವರು ಜಲರಕ್ಷಣೆಯಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆಯವರಿಗೆ ಸಹಕಾರಿಯಾಗುವಂತೆ, ನೀರಿನಲ್ಲಿ ಮುಳುಗಿದ ಮೃತದೇಹಗಳ ಮೇಲೆತ್ತುವಿಕೆ, ನೆರೆಯಲ್ಲಿ ಸಿಲುಕಿದವರ ರಕ್ಷಣಾ ಕೆಲಸ ಇತ್ಯಾಧಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಪ್ರಸಿದ್ದಿ ಪಡೆದಿದ್ದಾರೆ. ಈ ಹಿಂದೆಯೂ ಅವರು ಜಿಲ್ಲಾಡಳಿತದ ಸೂಚನೆಯಂತೆ ಪುತ್ತೂರಿನಲ್ಲಿ ಮುಳುಗು ಕಾರ್ಯಾಚರಣೆಗಾಗಿ ನೇಮಕಗೊಂಡಿದ್ದರು.
ಪ್ರಾಕೃತಿಕ ವಿಕೋಪ ಜಾಗೃತಿ ಮುಂಜಾಗ್ರತಾ ಸಭೆಯಲ್ಲಿ ಪುತ್ತೂರು ತಾಲೂಕಿನ ವ್ಯಾಪ್ತಿಯ ಸಮಾಲೋಚನಾ ಸಭೆಯಲ್ಲಿ ಪುತ್ತೂರು ಸಹಾಯಕ ಆಯುಕ್ತ, ತಹಸೀಲ್ದಾರ್ ಸಹಿತ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಮುಹಮ್ಮದ್ ಬಂದಾರು ಅವರ ಸಾಧನೆ ಪರಿಗಣಿಸಿ ಈಗಾಗಲೇ ಅವರಿಗೆ ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದರಿಂದ ಜೀವರಕ್ಷಕ ಪ್ರಶಸ್ತಿ, ಕರ್ನಾಟಕ ಸರಕಾರದ ಬ್ಯಾರಿ ಅಕಾಡಮಿಯಿಂದ ರಾಜ್ಯಮಟ್ಟದ ಪುರಸ್ಕಾರ, ಸಾಹಿತ್ಯ ಪರಿಷತ್ತು ನಿಂದ ಸನ್ಮಾನ ಸಹಿತ ಹಲವು ಕಡೆಗಳಲ್ಲಿ ಸನ್ಮಾನ, ಗೌರವಗಳು ಲಭಿಸಿವೆ.
---
ವರದಿ: ಅಚ್ಚು ಮುಂಡಾಜೆ
(ಕಾರ್ಯಕ್ರಮಗಳ ವರದಿ, ಸಾಧಕರ ಪರಿಚಯ ಇತ್ಯಾಧಿಗಳಿಗೆ ನಮ್ಮನ್ನು ಸಂಪರ್ಕಿಸಿ. ಸಾಧನೆ ನಿಮ್ಮದು- ಪ್ರೋತ್ಸಾಹ ನಮ್ಮದು)
9449640130