ಬೆಳ್ತಂಗಡಿ; ಮಗಳನ್ನು ಮದುವೆ ಮಾಡಿಕೊಡುವುದಿಲ್ಲವೇ ಎಂದು ಪ್ರಶ್ನಿಸಿ ಕಡಬ ತಾಲೂಕು ಸುಬ್ರಹ್ಮಣ್ಯ ಕೈಕಂಬ ನಿವಾಸಿ ದಿನೇಶ ಎಂಬಾತ ಲಾಯಿಲ ಗ್ರಾಮದ ವಿವೇಕಾನಂದ ನಗರ ಸೋಮನಾಥ ಕುಲಾಲ್ ಎಂಬವರಿಗೆ ಕತ್ತಿಯಿಂದ ಕಡಿದು ಗಾಯಗೊಳಿಸಿದ ಘಟನೆ ಜು.11 ರಂದು ಬೆಳಿಗ್ಗೆ ನಡೆದಿದೆ.
ಆರೋಪಿತನು ಕೆಎ 51 ಇಜೆ174 ನಂಬರ್ನ ಬೈಕಿನಲ್ಲಿ ವಿವೇಕಾನಂದ ನಗರದ ಸೋಮನಾಥ ಕುಲಾಲ್ ಅವರ ಮನೆಯ ಸಿಟೌಟ್ ಗೆ ಏಕಾಏಕಿ ನುಗ್ಗಿ ಅಲ್ಲಿದ್ದ ಸೋಮನಾಥ ಅವರ ಪತ್ನಿ ಮತ್ತು ಮಗಳನ್ನು ಕಂಡು “ಅವಾಚ್ಯ ಶಬ್ಧಗಳಿಂದ ಬೈದು, ಮಗಳನ್ನು ಮದುವೆ ಮಾಡಿಕೊಡುವಂತೆ ಬೆದರಿಸಿದ್ದಾನೆ.
ಬಳಿಕ ಆತನ ಕೈಯಲ್ಲಿದ್ದ ಬ್ಯಾಗಿನಿಂದ ಮಂಡೆಕತ್ತಿಯೊಂದನ್ನು ತೆಗೆದು ಸೋಮನಾಥ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ತಲೆಗೆ ಕಡಿಯುವ ಸಮಯ ಅವರು ತಡೆಯುವ ವೇಳೆ ಎಡಕೈಯ ಅಂಗೈಗೆ ಸೀಳಿದ ರಕ್ತಗಾಯವಾಗಿದ್ದು , ಬಿಡಿಸಲು ಬಂದ ಪಕ್ಕದ ಮನೆಯ ಮಹೇಶರವರಿಗೆ ಕೈಗೆ ತಾಗಿ ರಕ್ತಗಾಯವಾಗಿರುತ್ತದೆ. ಆ ಸಮಯ ಬೊಬ್ಬೆ ಕೇಳಿ ಇತರರು ಬರುವುದನ್ನು ಕಂಡು ಆರೋಪಿಯು ಕೊಲೆಬೆದರಿಕೆಯೊಡ್ಡಿ ಪರಾರಿಯಾಗಿದ್ದಾನೆ.
ಇದೀಗ ಆರೋಪಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ ಕಲಂ: 448,504,307,324, 506ರಂತೆ ಎಫ್ಐಆರ್ ದಾಖಲಾಗಿದೆ.