ಬೆಳ್ತಂಗಡಿ: ಸ್ಥಳೀಯಾಡಳಿತ ಗ್ರಾ. ಪಂ.ಗಳಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ವರ್ಗಾವಣೆಗೊಂಡಿರುವ ಗ್ರಾಮೀಣ ಗ್ರಂಥಾಲಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಲ್ವಿಚಾರಕರಿಗೆ ತಮ್ಮ ಕರ್ತವ್ಯದ ಸಮಯ ಬದಲಾವಣೆ ಹಾಗೂ ಬಯೋಮೆಟ್ರಿಕ್ ಹಾಜರಾತಿಯ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಬಗ್ಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘ (ರಿ) ಆರ್. ಡಿ. ಪಿ. ಆರ್. ಬೆಂಗಳೂರು ಇದರ ಅಧ್ಯಕ್ಷ ಡಾ.ದೇವಿಪ್ರಸಾದ್ ಬೊಳ್ಮ ಅವರು ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ ಇದೀಗ ಸಮಯ ಬದಲಾವಣೆಯೊಂದಿಗೆ ಮಾಸಿಕ 7 ಸಾವಿರ ರೂ.ಇದ್ದ ವೇತನವನ್ನು 12 ಸಾವಿರಕ್ಕೆ ಏರಿಸಿ ಅನುಕೂಲತೆ ಕಲ್ಪಿಸಿದೆ.
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಕೆ. ಎಸ್ ಈಶ್ವರಪ್ಪ ಅವರಿಗೆ ಹಾಗೂ ಆರ್ಡಿಪಿಆರ್ ಇದರ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರಿಗೆ ಈ ಬಗ್ಗೆ ದೇವಿಪ್ರಸಾದ್ ಅವರು ಪತ್ರ ಬರೆದು ಗಮನಸೆಳೆದಿದ್ದರು.
ಹೊಸ ಆದೇಶಾನುಸಾರ ಗ್ರಾ.ಪಂ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯ ಮೇಲ್ವಿಚಾರಕರಿಗೆ ಸಮಯ ಬದಲಾವಣೆ, ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಕಲ್ಪಿಸಿ, ಗೌರವಧನ ಹೆಚ್ಚಳವನ್ನೂ ಪ್ರಕಟಿಸಿ ಮೇ.26 ರಂದು ಆರ್. ಡಿ. ಪಿ. ಆರ್ ಇದರ ಸರಕಾರದ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಆರ್ಡಿಪಿಆರ್ ನೌಕರರ ಸಂಘದ ಪ್ರಯತ್ನ ಹಾಗೂ ಸರಕಾರ ಕೈಗೊಂಡಿರುವ ಕ್ರಮದ ಬಗ್ಗೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರು ಸಂತೋಷ ವ್ಯಕ್ತಪಡಿಸಿದ್ದಾರೆ.