ಅಂಬೇಡ್ಕರ್ ಭವನದಲ್ಲಿ ಬಿ.ಎಮ್ ಭಟ್ ನಡೆಸಿದ ಸಮ್ಮೇಳನದ ದೃಶ್ಯ
ಬೆಳ್ತಂಗಡಿ; ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಸಿಪಿಐ(ಎಂ) ಹೆಸರಿನಲ್ಲಿ ಸಿಪಿಐ(ಎಂ)ನಿಂದ ಉಚ್ಚಾಟನೆಗೊಂಡ ಬಿ.ಎಂ.ಭಟ್ ಸಮ್ಮೇಳನ ನಡೆಸುವ ಮೂಲಕ ಜನತೆಯನ್ನು ದಾರಿ ತಪ್ಪಿಸುವ ಕುತಂತ್ರ ನಡೆಸಿದ್ದಾಗಿದೆ. ಇದನ್ನು ನೈಜ ಕಮ್ಯೂನಿಷ್ಟರು ಅರ್ಥ ಮಾಡಿಕೊಳ್ಳಬೇಕು ಎಂದು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಹೇಳಿಕೆ ನೀಡಿದೆ.
ಆ ಮೂಲಕ ಹಿರಿಯ ಕಾರ್ಮಿಕ ಚಳವಳಿಗಾರ, ಋಣಮುಕ್ತ ಹೋರಾಟ ಸಮಿತಿ ರಾಜ್ಯಾಧ್ಯಕ್ಷ, ನ್ಯಾಯವಾದಿ ಬಿ.ಎಮ್ ಭಟ್ ಅವರನ್ನು ಕಾರಣವೊಂದಕ್ಕಾಗಿ ಸಿಪಿಐಎಂ ಪಕ್ಷದಿಂದ ಉಚ್ಚಾಟಿಸಿದ ಅಂದಿನ ವಿದ್ಯಮಾನದ ಮುಂದುವರಿದ ಚರ್ಚೆ ಮತ್ತೆ ಗರಿಗೆದರಿದೆ.
ಘಟನೆಯ ವಿವರ;
ಇದೀಗ ಸಿಪಿಐಎಂ ಪಕ್ಷದ ತಾಲೂಕು ಕಾರ್ಯದರ್ಶಿ, ನ್ಯಾಯವಾದಿ ಶಿವಕುಮಾರ್ ಎಂ.ಎಸ್ ಅವರು ನೀಡಿದ ಹೇಳಿಕೆಯಲ್ಲಿ, ಬಿ.ಎಂ ಭಟ್ ರನ್ನು 2017 ರಲ್ಲಿ ಸಿಪಿಐ(ಎಂ) ನಿಂದ ಅಧಿಕೃತವಾಗಿ ಉಚ್ಚಾಟನೆ ಮಾಡಲಾಗಿದೆ. ಆದರೆ ಅವರು ತನ್ನ ಹೊಟ್ಟೆಪಾಡಿಗಾಗಿ ಪಕ್ಷದ ಹೆಸರು ಮತ್ತು ಬಾವುಟವನ್ನು ದುರುಪಯೋಗ ಪಡಿಸಿಕೊಳ್ಳುತ್ತಲೇ ಬಂದಿದ್ದಾರೆ. ಹಣ ಮಾಡುವ ಉದ್ದೇಶದಿಂದ ಪಕ್ಷದ ಸಾಮೂಹಿಕ ಸಂಘಟನೆಗಳ ಹೆಸರುಗಳನ್ನು ಉಪಯೋಗಿಸಿಕೊಳ್ಳುತ್ತಿರುವ ಬಿ.ಎಮ್ ಭಟ್ ಅವರು ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಬಿ.ಎಮ್ ಭಟ್ ನಡೆಸಿದ ಸಮ್ಮೇಳನಕ್ಕೂ ಸಿಪಿಐಎಂ ಪಕ್ಷಕ್ಕೂ ಸಂಬಂಧವಿಲ್ಲ;
ಸಿಪಿಐಎಂ ಪಕ್ಷದ ಅಧಿಕೃತ ಸಮ್ಮೇಳನ ಅಕ್ಟೋಬರ್ 23 ರಂದು ನಡೆದಿದೆ. ಸಮ್ಮೇಳನದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ, ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಯಾದವ ಶೆಟ್ಟಿ ಮೊದಲಾದ ಪಕ್ಷದ ಅಧಿಕೃತರು ಭಾಗವಹಿಸಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಮಹತ್ವದ ನಿರ್ಣಯಗಳನ್ನೂ ಸಮ್ಮೇಳನದಲ್ಲಿ ಕೈಗೊಳ್ಳಲಾಗಿದೆ. ಅನೇಕ ಚಳವಳಿಗಳನ್ನು ಮುನ್ನಡೆಸಿಕೊಂಡು ಹೋಗಲೂ ಸಭೆ ತೀರ್ಮಾನಿಸಿದೆ. ಮುಖ್ಯವಾಗಿ ಕೇಂದ್ರ, ರಾಜ್ಯ ಸರಕಾರದ ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿ ನಿಲುವುಗಳು, ಖಾಸಗೀಕರಣ, ದೇಶದ ಮಹತ್ವದ ಸಂಸ್ಥೆ ಮತ್ತು ಸೊತ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಜನಜಾಗೃತಿ ಚಳವಳಿ ಕೈಗೆತ್ತಿಕೊಳ್ಳುವುದು, ಅನಿಯಮಿತ ಬೆಲೆ ಏರಿಕೆ ಬಗ್ಗೆ ಹೋರಾಟ ಇತ್ಯಾಧಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಇದರಿಂದಾಗಿ ಹತಾಶೆಗೊಂಡ ಉಚ್ಚಾಟಿತ ನಾಯಕರಾದ ಬಿ.ಎಂ ಭಟ್ ಅವರು ಜನತೆಯನ್ನು ದಾರಿ ತಪ್ಪಿಸಲು ಇದೀಗ ಸಮ್ಮೇಳನದ ನಾಟಕ ಮಾಡಿದ್ದಾರೆ. ಇದಕ್ಕೂ, ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದಿದ್ದಾರೆ.
ನ.22,23 ಜಿಲ್ಲಾ ಸಮ್ಮೇಳನ;
ಸಿಪಿಐಎಂ ಪಕ್ಷದ ಜಿಲ್ಲಾ ಸಮ್ಮೇಳನವು ನವೆಂಬರ್ 22,23 ರಂದು ಗುರುಪುರ ಕೈಕಂಬದಲ್ಲಿ ನಡೆಯಲಿದೆ. ಸಮ್ಮೇಳನದ ಬಹಿರಂಗ ಸಭೆ ನವೆಂಬರ್ 23 ರಂದು ನಡೆಯಲಿದ್ದು , ಮುಖ್ಯ ಭಾಷಣಕಾರರಾಗಿ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದ ಕೇರಳದ ಮಾಜಿ ಆರೋಗ್ಯ ಸಚಿವೆ ಶೈಲಜಾ ಟೀಚರ್ ಭಾಗವಹಿಸಲಿದ್ದಾರೆ, ಇದು ಸಿಪಿಐಎಂ ಪಕ್ಷದ ಅಧಿಕೃತ ಕಾರ್ಯಕ್ರಮ. ಆದ್ದರಿಂದ ಪಕ್ಷದ ಹೆಸರು ,ಕೆಂಬಾವುಟ ದುರ್ಬಳಸಿಕೊಳ್ಳುವವರ ಬಗ್ಗೆ ಜನ ಅರ್ಥ ಮಾಡಿಕೊಳ್ಳಬೇಕು ಎಂದು ಪಕ್ಷದ ಕಾರ್ಯದರ್ಶಿ, ನ್ಯಾಯವಾದಿ ಶಿವಕುಮಾರ್ ಎಸ್. ಎಂ , ಮುಖಂಡರಾದ ವಸಂತ ನಡ , ಶೇಖರ್ ಲಾಯಿಲ, ರೋಹಿಣಿ ಪೆರಾಡಿ , ಸುಜಿತ್ ಉಜಿರೆ, ಸುಕನ್ಯಾ ಹೆಚ್ , ಜಯಂತಿ ನೆಲ್ಲಿಂಗೇರಿ , ಪದ್ಮಾವತಿ ಇವರು ತಿಳಿಸಿದ್ದಾರೆ.