ಬೆಳ್ತಂಗಡಿ: ಶುಕ್ರವಾರ ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತವಾಗಿ ದಾರುಣವಾಗಿ ಮೃತಪಟ್ಟ ತಾಲೂಕಿನ ಮರೋಡಿ ನಿವಾಸಿ, ಪ್ರಸ್ತುತ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದ ಅಬೂಬಕ್ಕರ್(48.ವ) ಅಬ್ಬು ಅವರ ಅಂತ್ಯಸಂಸ್ಕಾರ ಶನಿವಾರ ಮರೋಡಿ ಮಸ್ಜಿದ್ ದಫನ ಭೂಮಿಯಲ್ಲಿ ನಡೆದಿದೆ.
ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ಕಾನೂನು ಕ್ರಮಗಳನ್ನು ಪೂರೈಸಿ ಇಲಾಖಾ ಮೇಲಧಿಮಾರಿಗಳ ನಿರ್ದೇಶನದಂತೆ ಪಾರ್ಥಿವ ಶರೀರವನ್ನು ಅವರು ಕರ್ತವ್ಯದಲ್ಲಿದ್ದ ಪುಂಜಾಲಕಟ್ಟೆ ಠಾಣೆಯ ಮುಂಭಾಗಕ್ಕೆ ತರಲಾಯಿತು. ಅಲ್ಲಿ ಮೇಲಧಿಕಾರಿಗಳ ಉಪಸ್ಥಿತಿಯಲ್ಲೇ ಸಹೋದ್ಯೋಗಿ ಪೊಲೀಸರಿಂದ ಮೃತದೇಹಕ್ಕೆ ಸರಕಾರಿ ಗೌರವ ಸಲ್ಲಿಸುವ ಭಾಗವಾಗಿ ಮೂರು ಸುತ್ತು ಗಾಳಿಯಲ್ಲಿ ಕುಶಾಲು ತೋಪು ಹಾರಿಸಿ ಪೊಲೀಸ್ ಬ್ಯಾಂಡ್ ಮೂಲಕ ಅಂತಿಮ ಗೌರವ ಸಲ್ಲಿಸಲಾಯಿತು. ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ , ಎಸ್.ಐ ಸೌಮ್ಯಾ, ಕುಟ್ಟಿ ಎಂ ಸಹಿತ ಇತರ ಪೊಲೀಸ್ ಸಿಬ್ಬಂದಿಗಳು ಈ ವೇಳೆ ಹಾಜರಿದ್ದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಅಬ್ಬು ಅವರ ಅಭಿಮಾನಿಗಳು, ಕುಟುಂಬಸ್ತರು, ಸಮುದಾಯಸ್ತರು, ಸಾರ್ವಜನಿಕರು ಹಾಜರಿದ್ದು ಮೃತದೇಹದ ಅಂತಿಮದರ್ಶನ ಪಡೆದರು. ಪೊಲೀಸ್ ಇಲಾಖೆಯ ಅಂತಿಮ ನಮನದ ದೃಷ್ಯಾವಳಿಗಳು ಪೊಲೀಸ್ ಇಲಾಖೆಯ ಬಗ್ಗೆ ಜನರ ಮನದಲ್ಲಿ ಗೌರವ ಮತ್ತು ಅಭಿಮಾನ ತಂದು ಕೊಟ್ಟಿತು. ಸೇರಿದ್ದ ಜನರ ಕಣ್ಣಾಲಿಯಲ್ಲಿ ನೀರು ತರಿಸಿತು. ಅಕಾಲಿಕವಾಗಿ ಅಗಲಿದ ಸಹೋದ್ಯೋಗಿಯ ಮರಣದಿಂದ ಅವರ ಜೊತೆ ಕರ್ತವ್ಯ ಸಲ್ಲಿಸಿದ ವಿವಿಧ ಠಾಣೆಯ ಸಿಬ್ಬಂದಿಗಳು ಜಾತಿ ಧರ್ಮ ಭೇದವಿಲ್ಲದೆ ಕಂಬನಿ ಮಿಡಿಯುವ ದೃಷ್ಯ ಎಲ್ಲರಲ್ಲೂ ಭಾವನೆ ಉಮ್ಮಳಿಸಿಬರಲು ಕಾರಣವಾಯಿತು.
----
ಅವರಿಗೆ ಡಿಕ್ಕಿ ಹೊಡೆದ ಸ್ಕೂಟರ್ ಸವಾರ ಇರ್ವತ್ತೂರು ಕೈಯಬ್ಬೆ ನಿವಾಸಿ ರಮೇಶ್ ಆಚಾರ್ಯ ಅವರ ಪುತ್ರ ದುರ್ಗಾಪ್ರಸಾದ್ ಆಚಾರ್ಯ ಅವರು ಇದೀಗ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರ್ತವ್ಯದಲ್ಲಿದ್ದ ಅಬೂಬಕ್ಕರ್ ಅವರ ಬೈಕಿಗೆ
ಎದುರಿನಿಂದ ಬಂದ ದುರ್ಗಾಪ್ರಸಾದ್ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಶುಕ್ರವಾರ ಮುಖಾಮುಖಿ ಡಿಕ್ಕಿಹೊಡೆದಿತ್ತು. ಈ ವೇಳೆ ರಸ್ತೆಗೆಸೆಯಲ್ಪಟ್ಟಿದ್ದ ಇಬ್ಬರೂ ಪ್ರಜ್ಞೆ ಕಳೆದುಕೊಂಡಿದ್ದರು. ಇದೇ ಹಾದಿಯಲ್ಲಿ ಬಂದ ಅಬೂಬಕ್ಕರ್ ಅವರ ಸಹೋದ್ಯೋಗಿಗಳೇ ಇದ್ದ ಪುಂಜಾಲಕಟ್ಟೆ ಪೊಲೀಸ್ ಠಾಣಾ ಜೀಪಿನಲ್ಲಿ ಅವರನ್ನು ತಕ್ಷಣ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾದ ವೇಳೆ ವೈದ್ಯರು, ಸಿಬ್ಬಂದಿಗಳಿಲ್ಲದೆ ಬೀಗ ಹಾಕಿದ್ದುದರಿಂದ ಪ್ರಥಮ ಚಿಕಿತ್ಸೆ ಕೊಡಿಸಲು ಅಸಾಧ್ಯವಾಗಿತ್ತು. ತಕ್ಷಣ ಅಲ್ಲಿಂದ ಅವರನ್ನು ಬಂಟ್ವಾಳ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಸಕಾಲದಲ್ಲಿ ಚಿಕಿತ್ಸೆ ಲಭಿಸದೆ ಅವರು ರಸ್ತೆಮಧ್ಯೆ ಪೊಲೀಸ್ ಇಲಾಖೆಯ ವಾಹನದಲ್ಲೇ ಅಸುನೀಗಿದ್ದರು.
ಅಬೂಬಕ್ಕರ್ ರವರು ಈ ಹಿಂದೆ ಬೆಳ್ತಂಗಡಿ, ವೇಣೂರು, ಧರ್ಮಸ್ಥಳ, ಮೂಡಬಿದ್ರೆ ಮತ್ತು ಬಂಟ್ವಾಳ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಂಟ್ವಾಳ ಠಾಣೆಯಲ್ಲಿ ಅಪರಾಧ ಪತ್ತೆ ದಳದಲ್ಲೂ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದ ಅವರು ಇಲಾಖಾ ಮೇಲಧಿಕಾರಿಗಳ ವಿಶೇಷ ಮನ್ನಣೆಗೂ ಪಾತ್ರರಾಗಿದ್ದರು. ಬೆಳ್ತಂಗಡಿ ಠಾಣೆಯಲ್ಲಿ ಅವರು ಕೆಲ ಸಮಯ ಠಾಣಾ ಬರಹಗಾರರಾಗಿಯೂ (ರೈಟರ್) ನಿಯೋಜಿತರಾಗಿ ಸೇವೆ ಸಲ್ಲಿಸಿದ್ದರು.
ಮರೋಡಿ ಗ್ರಾಮದ ದಿ.ಅಬೂಸ್ವಾಲಿಹ್ ಮತ್ತು ನೆಫೀಸಾ ದಂಪತಿಯ ಐವರು ಗಂಡು ಮತ್ತು ಮೂವರು ಹೆಣ್ಣು ಮಕ್ಕಳ ಪೈಕಿ ಓರ್ವರಾಗಿದ್ದ ಅವರು ಗ್ರಾಮದ ಸರ್ವಧರ್ಮೀಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಕೃಷಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು ಸ್ವತಃ ಕೃಷಿಕರೂ ಆಗಿದ್ದರು. ಅತ್ಯುತ್ತಮ ಫುಟ್ ಬಾಲ್ ಆಟಗಾರರೂ ಆಗಿ ಊರಿನಲ್ಲಿ ಮತ್ತು ಪೊಲೀಸ್ ಇಲಾಖೆಯಲ್ಲಿ ಗುರುತಿಸಿಕೊಂಡಿದ್ದರು. ಒಂದೂವರೆ ವರ್ಷಗಳ ಹಿಂದಷ್ಟೇ ಅವರು ಹೊಸ ಮನೆ ನಿರ್ಮಿಸಿ ಗೃಹಪ್ರವೇಶಗೈದಿದ್ದರು. ಶುಕ್ರವಾರ ಅವರು ಸಹೋದ್ಯೋಗಿಗಳ ಜೊತೆಯೇ ವಾಮದಪದವು ಎಂಬಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಧ್ಯಾಹ್ನದ ಭೋಜನ ಸೇವಿಸಿ ಬರುತ್ತಿದ್ದ ವೇಳೆ ಘಟನೆ ನಡೆದಿದ್ದು, ಅದು ಅವರ ಜೀವನದ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಗಿತ್ತು.
ಅವರ ಸಹೋದರಲ್ಲಿ ಓರ್ವ ಇಕ್ಬಾಲ್ ಅವರು ಪೊಲೀಸ್ ಇಲಾಖೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿ ಪ್ರಸ್ತುತ ಮಂಗಳೂರು ಠಾಣೆಯಲ್ಲಿ ಕೆಲಸದಲ್ಲಿದ್ದಾರೆ.
ಇಬ್ಬರು ಸಹೋದರರು ವಿದೇಶದಲ್ಲಿದ್ದು, ಅಣ್ಣನ ಅಕಾಲಿಕವಾದ ಮರಣದ ವಾರ್ತೆ ಅರಿತು ಸಹೋದರ ಇಲ್ಯಾಸ್ ಅವರು ವಿದೇಶದಿಂದ ತುರ್ತು ಆಗಮಿಸಿದ್ದರು.
ಅಬೂಬಕ್ಕರ್ ಅವರಿಗೆ ಹೊಸಂಗಡಿ ಸನಿಹದ ಪೆರಿಂಜೆಯ ಸಾಮಾಜಿಕ ಕಾರ್ಯಕರ್ತ ಇಸ್ಮಾಯಿಲ್ ಕೆ ಅವರ ಸಹೋದರಿ ಹಾಜಿರಾ ಅವರ ಜೊತೆ ವಿವಾಹವಾಗಿದ್ದು, ಆಳ್ವಾಸ್ ಸಂಸ್ಥೆಯಲ್ಲಿ ಪಿಯುಸಿ ಓದುತ್ತಿರುವ ಪುತ್ರ ಆಶಿಕ್ ಮತ್ತು ಪ್ರಾಥಮಿಕ ವಿದ್ಯಾಭ್ಯಾಸ ಓದುತ್ತಿರುವ ಪುತ್ರಿ ಆಶಿಫಾ ಎಂಬಿಬ್ಬರು ಮಕ್ಕಳಿದ್ದಾರೆ.