ಬೆಳ್ತಂಗಡಿ: ಲಾಯಿಲ ಗ್ರಾಮದ ಕುಂಟಿನಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ವಿವಾಹಿತೆಯೊರ್ವರು ಏಕಾಏಕಿ ಅಸ್ವಸ್ಥ ಗೊಂಡಿದ್ದವರು ಮಂಗಳೂರಿನ ಆಸ್ಪತ್ರೆಯಲ್ಲಿ ಒಂದು ದಿನ ಸಾವು ಬದುಕಿನ ನಡುವೆ ಹೋರಾಡಿ ಬಳಿಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಇದೀಗ ವಿದೇಶದಿಂದ ಮರಳಿದ ಗೃಹಿಣಿ ಪತಿ ನೀಡಿದ ದೂರಿನನ್ವಯ ಶಂಕಿತ ಆರೋಪಿ ಲಾಯಿಲ ಪಂಚಾಯತ್ ಮಾಜಿ ಸದಸ್ಯ, ಹಾಲಿ ಪಂಪು ಆಪರೇಟರ್ ಶರೀಫ್ ಅವರ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿದೆಆಕೆಗ
ಮುಂಡಾಜೆ ಗ್ರಾಮದ ಕುರುಡ್ಯ ದಿ. ಅಬ್ಬಾಸ್ ಅವರ ಪುತ್ರಿ, ಬಂಟ್ವಾಳ ತಾಲೂಕಿನ ಕಲಾಯಿ ನಿವಾಸಿ ಆದಂ ಅವರ ಪತ್ನಿ ಅಸ್ಮಾ(32) ಎಂಬವರೇ ಈ ರೀತಿ ಮೃತಪಟ್ಟಿದ್ದ ಮಹಿಳೆ.
ಸೆ. 8 ರಂದು ಇದ್ದಕ್ಕಿದ್ದಂತೆ ಕುಂಟಿನಿಯ ಬಾಡಿಗೆ ಮನೆಯಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಲ್ಲಿ ಸೆ.9 ರಂದು ಆಕೆ ಕೊನೆಯುಸಿರೆಳೆದಿದ್ದರು.
ಆರಂಭದಲ್ಲಿ ಅಸ್ಮಾ ಅವರ ಸಹೋದರ ಅಶ್ರಫ್ ಕುರುಡ್ಯ ಅವರು, ಸಹೋದರಿ ಮಕ್ಕಳಾಗದ ಕೊರಗಿನಿಂದ ವಿಷಪ್ರಾಶನಗೈದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆಕೆಯ ಪತಿ ಆದಂ ಅವರು ವಿದೇಶದಿಂದ ಮರಳಿದ್ದು, ಈ ಪ್ರಕರಣದಲ್ಲಿ ಸಂದೇಹವಿದೆ. ಇದು ಆಕೆಯ ಬಾಡಿಗೆ ಮನೆ ಮಾಲಿಕ ಶರೀಫ್ ಅವರ ದುಶ್ಪ್ರೇರಣೆಯಿಂದಾಗಿ ಆಕೆ ಕೃತ್ಯ ವೆಸಗಿದ್ದಾಗಿ ಮರುತನಿಖೆಗೆ ಆಗ್ರಹಿ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ಮರು ತನಿಖೆಗೆ ಅವಕಾಶವಾಗಿದೆ.
ಅಸ್ಮಾಳನ್ನು ಸುಮಾರು 9 ವರ್ಷಗಳ ಹಿಂದೆ ಬಂಟ್ವಾಳ ತಾಲೂಕು ಕಲಾಯಿ ನಿವಾಸಿ ಆದಂ ಯಾನೆ ಅಫ್ರೀದ್ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಕೆಲ ಸಮಯ ಕಾವಳಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಆಕೆ ಕೊನೆಗೆ ಲಾಯಿಲ ಗ್ರಾಮದ ಕುಂಟಿನಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯದಲ್ಲಿದ್ದರು. ಮದುವೆಯಾಗಿ ಒಂಬತ್ತು ವರ್ಷಗಳಾಗಿದ್ದರೂ ಅವರಿಗೆ ಮಕ್ಕಳಾಗಿರಲಿಲ್ಲ.
ಗ್ರಾ.ಪಂ ಮಾಜಿ ಸದಸ್ಯ , ಪಂಪು ಆಪರೇಟರ್ ಶರೀಫ್ ಅವರ ಬಾಡಿಗೆ ಮನೆಯಲ್ಲಿ ಅವರು ಒಬ್ಬರೇ ವಾಸವಿದ್ದರು. ಅಲ್ಲಿ ಆಕೆ ನಿಗೂಢವಾಗಿ ಅಸ್ವಸ್ಥಗೊಂಡು ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದರು.
ಇದೀಗ ಶರೀಫ್ ಅವರು ಈ ಕೃತ್ಯಕ್ಕೆ ಆಕೆಗೆ ಪ್ರಚೋದನೆ ನೀಡಿರುವ ಬಗ್ಗೆ ಆಕೆಯ ಮೊಬೈಲ್ ಫೋನ್ ಮೂಲಕ ಮಹತ್ವದ ಮಾಹಿತಿ, ಸಾಕ್ಷಿ ಮನೆಯವರಿಗೆ ಲಭಿಸಿದೆ. ಫೋನ್ ಸಂಭಾಷಣೆಯ ತುಣುಕು ಕೂಡ ಪತ್ತೆಯಾಗಿದ್ದು ಆ ಹಿನ್ನೆಲೆಯಲ್ಲಿ ಪತಿ ಆದಂ ಅವರ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಶರೀಫ್ ವಿರುದ್ಧ 306 ಐಪಿಸಿ ಸೆಕ್ಷನ್ ಪ್ರಕಾರ ಕೇಸು ದಾಖಲಾಗಿದೆ. ಶರೀಫ್ ಅವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ಆರಂಭಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.