ಬೆಳ್ತಂಗಡಿ: ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಜಲಪಾತದಲ್ಲಿ ಜ.25ರಂದು ಗುಡ್ಡ ಕುಸಿತದಿಂದ ಮಣ್ಣಿನಡಿ ಕಣ್ಮರೆಯಾಗಿದ್ದ ವಿದ್ಯಾರ್ಥಿ ಲಾಯಿಲ ಗ್ರಾಮದ ಕಾಶಿಬೆಟ್ಟು ವಾಸುದೇವ ಶೆಟ್ಟಿ ಅವರ ಪುತ್ರ ಸನತ್ ಶೆಟ್ಟಿ(20ವ) ಅವರ ಮೃತದೇಹ ಮಂಗಳವಾರ ಪತ್ತೆಯಾಗಿದೆ.
ಭಾರೀ ಭೂ ಕುಸಿತಕ್ಕೊಳಗಾಗಿದ್ದ ಪ್ರದೇಶದಲ್ಲಿ ಹಲವು ಲೋಡುಗಳಷ್ಟು ಮಣ್ಣು ಹಾಗೂ ಬೃಹತ್ ಗಾತ್ರದ ಬಂಡೆ ಕಲ್ಲುಗಳು ಉರುಳಿ ಬಂದಿದ್ದುದರಿಂದ ಹಾಗೂ ಕಾರ್ಯಾಚರಣೆಗೆ ಸೂಕ್ತ ವಾತಾವರಣ ಇಲ್ಲದೇ ಇದ್ದುದರ ಮಧ್ಯೆಯೂ ನಿರಂತರ ನಡೆದ ಪ್ರಯತ್ನದ ಫಲವಾಗಿ ದೇಹ ಇದೀಗ ಕಲ್ಲುಬಂಡೆಯಡಿ ಲಭ್ಯವಾಗಿದೆ.
23 ದಿನಗಳ ಬಳಿಕ ದೇಹ ಪತ್ತೆ;
ಘಟನಾ ಸ್ಥಳದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಕಂದಾಯ ಇಲಾಖೆ, ಸ್ಥಳೀಯ ಗ್ರಾ.ಪಂ, ಎನ್ಡಿಆರ್ಎಫ್ ತಂಡ, ಮಹೇಶ್ ಶೆಟ್ಟಿ ತಿಮರೋಡಿ ಅವರ ನೇತೃತ್ವದ ತಂಡ ಹಾಗೂ ಸ್ಥಳೀಯರು ಇಷ್ಟೂ ದಿನಗಳಲ್ಲಿ ಕಾರ್ಯಾಚರಣೆ ಯಲ್ಲಿ ಭಾಗಿಯಾಗಿದ್ದರು. ಶಾಸಕ ಹರೀಶ್ ಪೂಂಜ ಸಂಪೂರ್ಣ ಮಾರ್ಗದರ್ಶನ ಮತ್ತು ಸಹಕಾರ ನೀಡಿದ್ದರು. ಜಿಲ್ಲಾಧಿಕಾರಿ,ಸಹಾಯಕ ಕಮಿಷನರ್, ತಹಶಿಲ್ದಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಮಾಜಿಶಾಸಕ ವಸಂತ ಬಂಗೇರ ಮೊದಲಾದವರು ಸ್ಥಳಕ್ಕೆ ಭೇಟಿನೀಡಿ ಕಾರ್ಯಾಚರಣೆ ತಂಡವನ್ನು ಹುರಿದುಂಬಿಸಿದ್ದರು.
ಸ್ಥಳಕ್ಕೆ ವೈದ್ಯಕೀಯ ತಂಡ ಭೇಟಿ ನೀಡಲಿದೆ. ಮುಂದಿನ ಕಾರ್ಯಕ್ಕೆ ಪೊಲೀಸ್ ಇಲಾಖೆ ಪೂರ್ವ ಸಿದ್ಧತೆ ನಡೆಸಿದೆ.