ಕಾರ್ಯಾಚರಣೆಯ ಕೊನೆಯ ದಿನದಂದೇ ದೇಹ ಪತ್ತೆ!.
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಬಂಗರಪಲ್ಕೆ ಜಲಪಾತದಲ್ಲಿ ಜ.25ರಂದು ನಡೆದಿದ್ದ ಭೂ ಕುಸಿತದಿಂದ ಮಣ್ಣಿನಡಿ ಕಣ್ಮರೆಯಾಗಿದ್ದ ವಿದ್ಯಾರ್ಥಿ ಲಾಯಿಲ ಗ್ರಾಮದ ಕಾಶಿಬೆಟ್ಟು ವಾಸುದೇವ ಶೆಟ್ಟಿ ಅವರ ಪುತ್ರ ಸನತ್ ಶೆಟ್ಟಿ(20ವ) ಅವರ ಮೃತದೇಹದ ಹುಡುಕಾಟದ ಕೊನೆಯ ದಿನದಂದೇ ಅವರ ದೇಹ ಸಿಕ್ಕಿದೆ. ತಂಡ ಆಲೋಚಿಸಿದ್ದಂತೆ ಒಂದು ದಿನ ಮಾತ್ರ ಕೆಲಸ ಮಾಡಿ ಹುಡುಕಾಟ ಬಿಟ್ಟುಬಿಡುವ ಬಗ್ಗೆ ನಿರ್ಧಾರಕ್ಕೆ ಬರಲಾಗಿತ್ತು. ಒಂದು ವೇಳೆ ಕೆಲಸ ನಿಲ್ಲಿಸಿಬಿಟ್ಟಿದ್ದರೆ ಇನ್ನೆಂದೂ ಸನತ್ ಶೆಟ್ಟಿ ಅವರ ಪಾರ್ಥಿವ ಶರೀರ ಅವರ ಮನೆಯವರಿಗೆ ನೋಡಲು ಸಿಗುತ್ತಲೇ ಇರಲಿಲ್ಲ ಎಂಬ ವಿಚಾರ ಈಗ ತಿಳಿದುಬಂದಿದೆ.
ಸನತ್ ಶೆಟ್ಟಿ ಅವರು ಜೀವಂತ ಸಮಾದಿಯಾಗಿದ್ದ ಜಾಗದಲ್ಲಿ ಇಷ್ಟೆಲ್ಲ ಪ್ರತಿಕೂಲ ವಾತಾವರಣದ ಮಧ್ಯೆಯೂ ಘಟನೆಯನ್ನು ಸವಾಲಾಗಿ ಸ್ವೀಕರಿಸಿದ್ದ ಕಾರ್ಯಾಚರಣೆ ನಿರತವಾಗಿದ್ದ ಪೊಲೀಸ್ ಮತ್ತು ಸ್ವಯಂ ಸೇವಕರ ತಂಡ ನಿಜಕ್ಕೂ ಬಸವಳಿದು ಹೋಗಿತ್ತು.
ಒಂದೆರಡು ಬಾರಿ ಬಂಡೆ ಕಲ್ಲುಗಳ ಮಧ್ಯದಿಂದ ವಾಸನೆ ಮೂಗಿಗೆ ಬಡಿದಿತ್ತಾದರೂ ಒಂದೆಡೆ ಕೊಳೆತ ಹೆಬ್ಬಾವೊಂದು ಪತ್ತೆಯಾಗಿತ್ತು. ಪ್ರಾರಂಭದಲ್ಲಿ ಕೈ ಕೆಲಸದ ಮೂಲಕ ದೇಹದ ಹುಡುಕಾಟ ಯತ್ನ ನಡೆದು ಅದರಲ್ಲಿ ಫಲಕಾಣದಾಗ ಮೊದಲಬಾರಿಗೆ ಕೆಲಸ ಸ್ಥಗಿತಗೊಳಿಸುವ ಯೋಚನೆ ಮಾಡಲಾಗಿತ್ತು.
ಆ ಬಳಿಕ ಜೆಸಿಬಿ ಯಂತ್ರದ ಮೂಲಕ ಕಾರ್ಯಾಚರಣೆ ಮುಂದುವರಿಸಲಾಯಿತು. ಅದರಲ್ಲೂ ಯಶಃ ಕಾಣದಾದಾಗ ಅದರ ಕಾರ್ಯಾಚರಣೆ ಯನ್ನೂ ಕೈ ಬಿಡುವ ಚಿಂತನೆ ಮಾಡಲಾಯಿತು.
ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಮರುದಿನ ಎರಡುದಿನ ಬೇರೆ ಬೇರೆ ಕಾರಣಗಳಿಂದ ಕೆಲಸ ನಿಲ್ಲಿಸಲಾಗಿತ್ತು. ಅದಾಗಿ ಮತ್ತೆ ಹೆವಿ ಇಟಾಚಿ ಮೂಲಕ ಭೂ ಅಗೆತ ಆರಂಭಿಸಲಾಯಿತು. ಅದರಲ್ಲೂ ಯಶಃ ಕಾಣದಾದಾಗ ಒಟ್ಟು ಬುಧವಾರಕ್ಕೆ ಕೆಲಸಕ್ಕೆ ಅಂತಿಮ ಚುಕ್ಕಿಇಡುವ ಬಗ್ಗೆ ತಂಡ ಯೋಚನೆ ಮಾಡಿತ್ತು. ಆದರೆ ಮಂಗಳವಾರ ಸಂಜೆ ಕೆಲಸದ ಅಂತ್ಯದ ವೇಳೆ ಸನತ್ ಶೆಟ್ಟಿ ದೇಹ ಸಿಕ್ಕಿದೆ.
ಘಟನೆ ನಡೆದು ಇಷ್ಟೂ ದಿನಗಳಲ್ಲಿ ಸ್ಥಳದಲ್ಲಿ ಬೆಳ್ತಂಗಡಿ ಠಾಣೆಯ ಸಬ್ ಇನ್ಸ್ಪೆಕ್ಟರ್ ನಂದ ಕುಮಾರ್, ಬೀಟ್ ಪೊಲೀಸ್ ಇಬ್ರಾಹಿಂ, ಉಜಿರೆಯ ಸಾಮಾಜಿಕ ಕಾರ್ಯಕರ್ತ ಅಜಯ್ ಶೆಟ್ಟಿ, ರಾಷ್ಟ್ರೀಯ ಹಿಂಜಾವೇ ಸಂಘಟನೆಯ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿಯೋಗ ಕೆಲಸ ಮಾಡಿದ್ದರು.
ಘಟನೆ ನಡೆದು 23 ದಿನಗಳ ಬಳಿಕ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮಣ್ಣಿನಡಿ ಪತ್ತೆಯಾಗಿದೆ. ಆ ಮೂಲಕ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎದ್ದಿದ್ದ ಭಾರೀ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.
ಅಂದು ಘಟನೆ ನಡೆದ ಬಗ್ಗೆ ಅವರ ಜೊತೆಗಾರರು ವಿವರಿಸಿದ ಜಾಗಕ್ಕಿಂತ ಸುಮಾರು 25 ಅಡಿ ದೂರದಲ್ಲಿ, 50 ಅಡಿಯಷ್ಟು ಮಣ್ಣಿನ ಆಳಕ್ಕೆ ಸನತ್ ಶೆಟ್ಟಿ ಅವರ ದೇಹ ಇಂದು ಪತ್ತೆಯಾಗಿದೆ. ಮಣ್ಣು ತೆರವುಗೊಳಿಸುವ ವೇಳೆ ಅದರಡಿ ದೇಹ ಹುದುಗಿ ಹೋಗಿತ್ತು. ದೇಹ ಕೊಳೆತ ಸ್ಥತಿಯಲ್ಲಿ ಪತ್ತೆಯಾಗಿದ್ದು ತಕ್ಷಣ ಮಹಜರು ನಡೆಸಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ತರಲಾಯಿತು. ರಾತ್ರಿಯೇ ಅತ್ಯಂತ ತ್ವರಿತ ವಾಗಿ ಮರಣೋತ್ತರ ಪರೀಕ್ಷೆ ಕ್ರಮ ಜರುಗಿಸಿ ಉಜಿರೆ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ವಿಧಿ ನೆರವೇರಿಸಲಾಯಿತು.
ಮಂಗಳವಾರದ ಕೆಲಸ ಕೊನೆಗೊಳಿಸುವ ಸಿದ್ಧತೆಯಲ್ಲಿರುವಂತೆಯೆ ಮೃತದೇಹದ ಕುರುಹು ಪತ್ತೆಯಾಯಿತು. ಕೆಲಸ ನಿರತವಾಗಿದ್ದ ಹಿಟಾಚಿ ಸಹಾಯದಿಂದ ದೇಹ ಮೇಲೆತ್ತಿ, ಜಲೀಲ್ ಅವರ ಆಂಬುಲೆನ್ಸ್ ಮೂಲಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ತರಲಾಯಿತು.
ಮಿತ್ರರ ಜೊತೆ ಕ್ರಿಕೆಟ್ ಆಡಲು ಹೋಗಿದ್ದ ಸನತ್ ಶೆಟ್ಟಿ:
ಮಿತ್ರರ ಜೊತೆ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲು ಅಂದು ರವಿವಾರ ಮನೆಯಿಂದ ಹೊರಟು ಹೋಗಿದ್ದ ಸನತ್ ಶೆಟ್ಟಿ ಅವರು ಸಂಸೆಯಲ್ಲಿ ಅಂದು ಪಂದ್ಯಾಟದಲ್ಲಿ ಭಾಗವಹಿಸಿ ಬಳಿಕ ಮಿತ್ರನ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಮರುದಿನ ಸೋಮವಾರ ಮನೆಯವರ ಜೊತೆ ಕೊನೆಯದಾಗಿ ದೂರವಾಣಿ ಮೂಲಕ ಸಂಪರ್ಕ ಸಾಧಿಸಿದ್ದ ಅವರು, ಸಂಜೆ ವೇಳೆ ಮನೆಗೆ ಬರುವುದಾಗಿ ಹೇಳಿದ್ದರು. ಅಲ್ಲಿಂದ ಎಳನೀರು ಬಳಿಯ ಬಂಗರ ಪಲ್ಕೆ ಪ್ರಕೃತಿ ರಮಣೀಯ ಜಲಪಾತಕ್ಕೆ ಅವರ ತಂಡ ಭೇಟಿ ನೀಡಿತ್ತು. ಮಿತ್ರರೊಡಗೂಡಿ ಸಂತೋಷದಲ್ಲಿ ಸಮಯ ಕಳೆಯುತ್ತಿದ್ದ ವೇಳೆ ದುರಾದೃಷ್ಟವಶಾತ್ ಅವರು ಇದ್ದ ಭಾಗದಲ್ಲಿ ಭಾರೀ ಭೂ ಕುಸಿತ ಸಂಭವಿಸಿ ಸನತ್ ಶೆಟ್ಟಿ ಮಣ್ಣಿನಡಿ ಹೂತು ಹೋಗಿದ್ದರು. ಉಳಿದಿಬ್ಬರು ಹಾಗೂ ತಂಡದಲ್ಲಿದ್ದ ಇತರರು ಅಪಾಯದಿಂದ ಪಾರಾಗಿ ಬದುಕಿಬಂದಿದ್ದರು. ಉಳಿದವರು ನೀಡಿದಮಾಹಿತಿ ಆಧರಿಸಿ ಇದುವರೆಗೆ ಘಟನಾ ಸ್ಥಳದಲ್ಲಿ ಮೃತದೇಹದ ಶೋಧ ಕಾರ್ಯ ನಡೆಸಲಾಗಿತ್ತು.
ಘಟನೆ ನಡೆದ ಮರುದಿನ ಪ್ರಥಮ ಪೊಲೀಸ್ ನಿಯಮದಂತೆ ಬೆಳ್ತಂಗಡಿ ಠಾಣೆಯಲ್ಲಿ ಸನತ್ ಶೆಟ್ಟಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಘಟನಾ ಸ್ಥಳದಲ್ಲಿ ಭಾರೀ ಭೂ ಕುಸಿತಕ್ಕೊಳಗಾಗಿದ್ದ ಪ್ರದೇಶದಲ್ಲಿ ಹಲವು ಲೋಡುಗಳಷ್ಟು ಮಣ್ಣು ಹಾಗೂ ಬೃಹತ್ ಗಾತ್ರದ ಬಂಡೆ ಕಲ್ಲುಗಳು ಉರುಳಿ ಬಂದಿದ್ದುದರಿಂದ ಸನತ್ ಶೆಟ್ಟಿ ಅವರ ದೇಹದ ಪತ್ತೆಗೆ ಭಾರೀ ಅಡ್ಡಿಯಾಗಿತ್ತು.
ಸ್ಥಳಕ್ಕೆ ತುರ್ತು ವಾಹನಗಳೂ ಕೂಡ ಹೋಗುವುದಕ್ಕೆ ರಸ್ತೆ ಕೂಡ ಇಲ್ಲದ್ದರಿಂದ ಹಾಗೂ ಆ ಪ್ರದೇಶ ರಾಷ್ಟ್ರೀಯ ಉದ್ಯಾನವನ ಪ್ರದೇಶವೂ ಆಗಿರುವುದರಿಂದ ತಾಂತ್ರಿಕ ತೊಂದರೆಗಳು ಎದುರಾಗಿದ್ದವು. ಅಲ್ಲದೆ ಇನ್ನೂ ಭೂಕುಸಿತ ಆಗುವ ಸಂಭವ ಇದ್ದುದರಿಂದ ಹೆಚ್ಚು ಜನರನ್ನು ಅಲ್ಲಿಗೆ ತೆರಳು ಪೊಲೀಸ್ ಇಲಾಖೆ ಅನುಮತಿಸಿರಲಿಲ್ಲ. ಒಟ್ಟಿನಲ್ಲಿ ಕಾರ್ಯಾಚರಣೆಗೆ ಸೂಕ್ತ ವಾತಾವರಣ ಇಲ್ಲದೇ ಇದ್ದುದರ ಮಧ್ಯೆಯೂ ಆರಂಭದ ಒಂಭತ್ತು ದಿನಗಳಲ್ಲಿ ಮಾನವ ಶ್ರಮದ ಮೂಲಕ ಕೆಲಸ ನಡೆಸಲಾಗಿತ್ತು. ಅದರಲ್ಲಿ ಸಫಲತೆ ಕಾಣದ್ದರಿಂದ ಬಳಿಕ ಹೊಸ ರಸ್ತೆ ನಿರ್ಮಿಸಿಕೊಂಡು ಜೆಸಿಬಿಯನ್ನು ಸ್ಥಳಕ್ಕೆ ಕರೆಸಲಾಗಿತ್ತು. ಬಳಿಕ ನಡೆಸಿದ ಕಾರ್ಯಾಚರಣೆಯಲ್ಲೂ ನಿರೀಕ್ಷಿತ ಸಫಲತೆ ಕಾಣದಾಗ ಕೊನೆಯದಾಗಿ ಬೃಹತ್ ಹಿಟಾಚಿ ಮೂಲಕ ಕೆಲಸ ನಡೆಸಲಾಗಿತ್ತು.
ಇದೀಗ ಎಲ್ಲ ಶ್ರಮದ ಬಳಿಕ ಕೊನೆಯದಾಗಿ ಸಫಲತೆ ಲಭಿಸಿದ್ದು ಸನತ್ ಶೆಟ್ಟಿ ದೇಹ ಮಣ್ಣಿನ ಅಡಿಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದೆ.
23 ದಿನಗಳ ಬಳಿಕ ದೇಹ ಪತ್ತೆ;
ಘಟನಾ ಸ್ಥಳದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಕಂದಾಯ ಇಲಾಖೆ, ಸ್ಥಳೀಯ ಗ್ರಾ.ಪಂ, ಎನ್ಡಿಆರ್ಎಫ್ ತಂಡ, ರಾಷ್ಟ್ರೀಯ ಹಿಂದೂಜಾಗರಣ ವೇದಿಕೆಯ ಮಹೇಶ್ ಶೆಟ್ಟಿ ತಿಮರೋಡಿ ಅವರ ನೇತೃತ್ವದ ತಂಡ, ಗ್ರಾ.ಯೋ.ವಿಪತ್ತು ನಿರ್ವಹಣೆ ತಂಡದ ಸದಸ್ಯರು, ಹತ್ತಾರು ಸಂಖ್ಯೆಯಲ್ಲಿ ನಿತ್ಯದ ಕೆಲಸಕ್ಕೆ ಜೊತಯಾಗುತ್ತಿದ್ದ ಸ್ವಯಂ ಸೇವಕರು, ಸ್ಥಳೀಯ ಜನರು, ಮಲವಂತಿಗೆ ಗ್ರಾ.ಪಂ ಆಡಳಿತ ಮಂಡಳಿ ಎಲ್ಲರೂ ತಮ್ಮದೇ ರೀತಿಯಲ್ಲಿ ಶ್ರಮಿಸಿದ್ದರು.
ಶಾಸಕ ಹರೀಶ್ ಪೂಂಜ ಸಂಪೂರ್ಣ ಮಾರ್ಗದರ್ಶನ ಮತ್ತು ಸಹಕಾರ ನೀಡಿದ್ದರು. ಜಿಲ್ಲಾಧಿಕಾರಿ ಜಗದೀಶ್, ಪುತ್ತೂರು ಸಹಾಯಕ ಕಮಿಷನರ್ ಡಾ. ಯತೀಶ್ ಉಳ್ಳಾಲ್, ತಹಶಿಲ್ದಾರ್ ಮಹೇಶ್ ಜೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಮಾರ್ಗದರ್ಶನ ದಲ್ಲಿ, ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ, ಸಬ್ ಇನ್ಸ್ ಪೆಕ್ಟರ್ ನಂದಕುಮಾರ್, ವ್ಯಾಪ್ತಿಯ ಬೀಟ್ ಪೊಲೀಸ್ ಇಬ್ರಾಹಿಂ,ಸಾಮಾಜಿಕ ಕಾರ್ಯಕರ್ತ ಅಜಯ್ ಶೆಟ್ಟಿ ಉಜಿರೆ ಇವರುಗಳು ಹಾಗೂ ಇತರ ಪೊಲೀಸ್ ಸಿಬ್ಬಂದಿಗಳು, ಮತ್ತು ನಾಗರಿಕರ ಸಹಾಯದಿಂದ ಕೆಲಸಕಾರ್ಯಗಳು ನಡೆದಿದ್ದವು.
ಹಲವು ಬಾರಿ ಶಾಸಕ ಹರೀಶ್ ಪೂಂಜ ಸ್ಥಳಕ್ಕೆ ಭೇಟಿ ನೀಡಿದ್ದೂ ಮಾತ್ರವಲ್ಲದೆ ಕಾರ್ಯಾಚರಣೆ ಗೆ ಬೇಕಾದ ಎಲ್ಲ ನೆರವು, ಸ್ಥಳೀಯರೊಬ್ಬರ ಕಡೆಯಿಂದ ಕಾರ್ಯಕರ್ತರಿಗೆ ಊಟೋಪಚಾರದ ವ್ಯವಸ್ಥೆ ಮಾಡಿದ್ದರು.ಸ್ಥಳಕ್ಕೆ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ವಸಂತ ಬಂಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಗೌಡ ಸಹಿತ ಮಲವಂತಿಗೆ ಗ್ರಾ.ಪಂ ಅಧ್ಯಕ್ಷ- ಉಪಾಧ್ಯಕ್ಷರು ಭೇಟಿ ನೀಡುತ್ತಾ ಕಾರ್ಯಾಚರಣೆ ತಂಡವನ್ನು ಹುರಿದುಂಬಿಸಿದ್ದರು.
ಎಳನೀರಿನಂತಹ ದುರ್ಗಮ ಪ್ರದೇಶಗಳಲ್ಲಿ ಕಾರ್ಯಾಚರಣೆ ಯಶಸ್ವಿಯಾಗಿರುವುದರ ಹಿಂದೆ ಪ್ರಕಾಶ್ ಕುಮಾರ್ ಜೈನ್ ಅವರ ಸ್ಪಂದನೆಯೂ ಅಪೂರ್ವವಾಗಿತ್ತು. ಕಾರ್ಯಚರಣೆ ಮಾಡುವ ತಂಡಕ್ಕೆ ಊಟ ಉಪಹಾರದಿಂದ ಮೊದಲ್ಗೊಂಡು ಜನೆರೇಟರ್, ಟ್ರ್ಯಾಕ್ಟರ್ , ಜೆಸಿಬಿ, ಹಿಟಾಜಿ ಇವೆಲ್ಲವೂ ವ್ಯವಸ್ಥಿತವಾಗಿ ಆಗುವಂತೆ ನಿರಂತರವಾಗಿ ಪ್ರತಿದಿನ ಸ್ಥಳದಲ್ಲೆ ಇದ್ದು ಅವರು ಮೇಲ್ವಿಚಾರಣೆ ಮಾಡುತ್ತಿದ್ದರು.
ಒಟ್ಟಿನಲ್ಲಿ ಎಲ್ಲರ ನಿಸ್ವಾರ್ಥ ಪ್ರಯತ್ನ, ತ್ಯಾಗದ ಫಲವಾಗಿ ಸನತ್ ಶೆಟ್ಟಿ ದೇಹ ಅವರ ಮನೆ ಸೇರಿದೆ. ಮೋಕ್ಷಧಾಮ ಸೇರಿದೆ ಎಂಬ ತೃಪ್ತಿ ಎಲ್ಲರ ಮನದಲ್ಲೂ ಮೂಡಿದೆ.
ಅವರ ಕುಟುಂಬಕ್ಕೆ ಮನೆಮಗನ ಈ ಅಕಾಲಿಕ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದಷ್ಟೇ ನಮ್ಮ ಲೈವ್ ಮೀಡಿಯಾ ನ್ಯೂಸ್ ತಂಡದ ಪ್ರಾರ್ಥನೆ
------------
ಅಚ್ಚು ಮುಂಡಾಜೆ
ಪ್ರಿನ್ಸಿಪಲ್ ಎಡಿಟರ್,
ಲೈವ್ ಮೀಡಿಯಾ ನ್ಯೂಸ್ ಎಡ್ಮಿನ್ ಡೆಸ್ಕ್.