Posts

ನಗ, ನಗದು ಕಳವು: ನೆರಿಯ ಗ್ರಾ.ಪಂ ಸದಸ್ಯನ ಮೇಲೆಯೇ ಕೇಸು ದಾಖಲು

2 min read

ಬೆಳ್ತಂಗಡಿ; ನೆರಿಯ ಗ್ರಾಮದ ಕುಲೆನಾಡಿ ಎಂಬಲ್ಲಿ ಮನೆಯ ಬೀರುವಿನಲ್ಲಿಟ್ಟಿದ್ದ 65 ಸಾವಿರ ರೂ. ನಗದು ಮತ್ತು 44 ಗ್ರಾಂ ಚಿನ್ನದ ಆಭರಣಗಳು ಕಳವಾಗಿರುವ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಆಶ್ಚರ್ಯ ಎಂದರೆ ಇದನ್ನು ಕಳವು ಗೈಯ್ಯಲಾಗಿರುವ ಬಗ್ಗೆ‌  ದೂರುದಾರರು ತನ್ನ ಬಾವನ‌ ಮಗ, ನೆರಿಯ ಗ್ರಾ. ಪಂ ಬಿಜೆಪಿ ಬೆಂಬಲಿತ ಸದಸ್ಯ ಸಚಿನ್ ಎಂಬವರ ಮೇಲೆಯೇ ಸಂದೇಹ ವ್ಯಕ್ತಪಡಿಸಿ ದೂರು ನೀಡಿದ್ದು, ಇಡೀ ಪ್ರಕರಣ ಭಾರೀ ಚರ್ಚೆಗೆ ವೇದಿಕೆ ಒದಗಿಸಿದೆ.

ನೆರಿಯ ಗ್ರಾಮದ ಕುಲೆನಾಡಿ ಎಂಬಲ್ಲಿನ ಸಂಜೀವ ಗೌಡರ ಪತ್ನಿ ಚಂದ್ರಾವತಿ ಅವರೇ ದೂರು ನೀಡಿರುವವರು. ಅವರು ನೀಡಿದ ದೂರಿನ ವಿವರದಲ್ಲಿ 65 ಸಾವಿರ ರೂ ನಗದು ಮತ್ತು ಒಟ್ಟು 44 ಗ್ರಾಂ ಚಿನ್ನಾಭರಣ ಮನೆಯ ಕಪಾಟಿನಿಂದ ಕಾಣೆಯಾಗಿದೆ ಎಂಬುದಾಗಿದೆ. ಆಭರಣ ಸಹಿತ ಕಳವಾದ ಸೊತ್ತಿನ ಒಟ್ಟು ಮೌಲ್ಯ 2.47 ಲಕ್ಷ ರೂ.‌ಗಳೆಂದು ಅಂದಾಜಿಸಲಾಗಿದೆ.

ಘಟನೆಯ ಸಂಕ್ಷಿಪ್ತ ವಿವರ;.   

ಕಳೆದ ವರ್ಷ ಅಂದರೆ 2021 ನವಂಬರ್ ತಿಂಗಳ 24 ರಂದು ಚಂದ್ರಾವತಿ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಗುಂಪಿನಿಂದ  2,47,000 ಸಾಲ‌ ಪಡೆದಿದ್ದು, ಆ ಪೈಕಿ ರೂ.65,000 ನಗದನ್ನು ಮನೆಯ ಮಲಗುವ ಕೊಠಡಿಯಲ್ಲಿರುವ ಬೀರುವಿನಲ್ಲಿ ಇಟ್ಟಿದ್ದರು. ಅದಲ್ಲದೇ ಅದೇ ಬೀರುವಿನಲ್ಲಿ ಕಳೆದ ವರ್ಷ ಸೆಪ್ಟೆಂಬರ್ 6 ರಂದು, ಆಭರಣ ಇಡುವ ಪೆಟ್ಟಿಗೆಯಲ್ಲಿ 24 ಗ್ರಾಂ ತೂಕದ ಲಕ್ಷ್ಮೀ ದೇವರ ಪದಕ ಇರುವ ಚಿನ್ನದ ನೆಕ್ಲೇಸ್‌ -1 ಮತ್ತು ಇನ್ನೊಂದು ಡಬ್ಬದಲ್ಲಿ 20 ಗ್ರಾಂ ತೂಕದ ಬಾಣದ S ಗುರುತು ಇರುವ ಚಿನ್ನದ ಪದಕದ ಸರವೊಂದನ್ನು ಇಟ್ಟಿದ್ದರು. ಮೊನ್ನೆ ಮಂಗಳವಾರ ಮಾ. 8 ರಂದು ಬೆಳಿಗ್ಗೆ ಅವರು  ಹಣದ ಅವಶ್ಯಕತೆ ಇರುವುದರಿಂದ ಬೀರುವಿನಲ್ಲಿ ಇಟ್ಟಿದ್ದ  ಹಣವನ್ನು ತಗೆಯಲು ಹೋದಾಗ ಹಣ ನಾಪತ್ತೆಯಾಗಿತ್ತು.‌ ಒಂದು ಬಾರಿ ವಿಚಲಿತರಾದ ಅವರು ಸಂಶಯಗೊಂಡು ಆಭರಣ ಇಟ್ಟಿದ್ದ ಡಬ್ಬಿಯನ್ನು ನೋಡಿದಾಗ ಸದ್ರಿ ಡಬ್ಬಿಯಲ್ಲಿ ಇಟ್ಟಿದ್ದ ಚಿನ್ನದ ನೆಕ್ಲೇಸ್‌  ಹಾಗೂ ಚಿನ್ನದ ಸರ ಕೂಡಾ  ಇಲ್ಲದಿರುವುದು ಖಚಿತವಾಯಿತು. ತಕ್ಷಣ ಪತಿ ಮತ್ತು ಮನೆಯವರಿಗೆ ವಿಚಾರ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. 

ಸಚಿನ್ ಮೇಲೆಯೇ ಅನುಮಾನ;

ದೂರುದಾರರು ತನ್ನ ಬಾವನ ಮಗ, ಗ್ರಾ.ಪಂ ಸದಸ್ಯ, ಸ್ಥಳೀಯ ಬಿಜೆಪಿ ಮುಖಂಡ ಸಚಿನ್ ಅವರೇ ಈ ಕೃತ್ಯವೆಸಗಿರುವ ಸಂದೇಹ ಇರುವುದಾಗಿ ನೇರ ಆರೋಪಿಸಿದ್ದಾರೆ. ಆರೋಪಿಯು ಸಂಬಂಧಿನೇ ಆಗಿದ್ದುದರಿಂದ ಆಗಾಗಾ ಮನೆಗೆ  ಬರುತ್ತಿದ್ದು ಇದು ಆತನದೇ ಕೃತ್ಯ ಎಂದು ಹೇಳಿದ್ದಾರೆ.‌

ಸಚಿನ್ ಪೊಲೀಸರ ವಶಕ್ಕೆ; ತೀವ್ರ ತನಿಖೆ

ಘಟನೆ ಬಗ್ಗೆ ದೂರು ಬಂದ ತಕ್ಷಣ ಎಫ್.ಐ.ಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸಚಿನ್ ರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಆರಂಭಿಸಿದ್ದಾರೆ. ಆದರೆ ಸಚಿನ್ ರನ್ನು ಬಂಧಿಸಲಾಗಿರುವ ಬಗ್ಗೆ ಅಧಿಕೃತ ಮಾಹಿತಿ ಲಭಿಸಿಲ್ಲ. ಬೇರೆ ಬೇರೆ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ ಎಂದು ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌  ಹೃಷಿಕೇಶ್ ಸೋನಾವನೆ ಭಗವಾನ್ ಅವರೇ ಮಾಹಿತಿ ನೀಡಿದ್ದಾರೆ.

ಸ್ಥಳೀಯವಾಗಿ ಪ್ರಭಾವಿಯಾಗಿರುವ ಸಚಿನ್:

ಇದೀಗ ಕಳ್ಳತನ ಆರೋಪ ಎದುರಿಸುತ್ತಿರುವ ಸಚಿನ್ ಅವರು ಸ್ಥಳೀಯವಾಗಿ ಬಿಜೆಪಿ ಪಕ್ಷದಲ್ಲಿ ಪ್ರಮುಖ ಸಂಘಟಕರು. ಊರಿ‌ನ ವಿವಿಧ ಧಾರ್ಮಿಕ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವವರು. ಕಾಟಾಜೆ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಹಿತ ಇತರ ಹಿಂದೂ ಸಂಘಟನೆಗಳ ಕಾರ್ಯಚಟುವಟಿಕೆಗಳಲ್ಲಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. 

ಸಾಮಾಜಿಕ ಜಾಲ‌ತಾಣದಲ್ಲಿ ಭಾರೀ ಸದ್ದು:

ಸದ್ರಿ ಸಚಿನ್ ಅವರು ಬೆಳ್ತಂಗಡಿ ಶಾಸಕರ ಆಪ್ತರಲ್ಲಿ ಓರ್ವರಾಗಿದ್ದು, ಈ ಘಟನೆ ನಡೆಯುತ್ತಿರುವಂತೆ ಕೆಲವು ವಾಟ್ಸ್ ಆಪ್ ಗ್ರೂಪ್ ಗಳಲ್ಲಿ‌, ಅವರು ಶಾಸಕರ ಜೊತೆ ಇರುವ ಫೋಟೋ ಗಳನ್ನು ಹಾಕಿ ಪ್ರಚಾರ ಮಾಡಲಾಗುತ್ತಿದೆ. ಇದೀಗ ಪೊಲೀಸ್ ತನಿಖೆ ಮುಂವರಿದಿದ್ದು ನಿಜಾಂಶ‌ ಮಾತ್ರ ಬಯಲಾಗಬೇಕಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment