ಬೆಳ್ತಂಗಡಿ: ಬುಧವಾರ ಸಂಜೆ ಎಡೆಬಿಡದೆ ಸುರಿದ ಭಾರೀ ಮಳೆಗೆ ಲಾಯಿಲ ಗ್ರಾಮದ ಸವಣಾಲು ಹೆರಾಜೆ ಎಂಬಲ್ಲಿ ಹಸನಬ್ಬ ಎಂಬವರ ಮನೆಯ ಪಕ್ಕದ ಗುಡ್ಡ ಕುಸಿದು ಹಾನಿಯುಂಟಾಗಿದೆ.
ಜೂ. 16 ರಂದು ರಾತ್ರಿ ಘಟನೆ ನಡೆದಿದ್ದು ಗುಡ್ಡ ಕುಸಿಯುವ ವೇಳೆ ಮಣ್ಣಿನ ಜೊತೆಗೆ ಕಲ್ಲುಗಳೂ ಕೂಡ ಉರುಳಿ ಬಂದಿವೆ. ಗುರುವಾರ ಕೂಡ ಮಣ್ಣು ಕುಸಿಯುತ್ತಿದ್ದು, ಮನೆಯವರು ತೀವ್ರ ಆತಂಕಕ್ಕೆ ಒಳಗಾಗಿ ಕಳೆದ ರಾತ್ರಿಯಿಂದಲೇ ವಾಸ್ತವ್ಯ ಬದಲಾಯಿಸಿದ್ದಾರೆ.
ಘಟನೆಯಿಂದ ಹಸನಬ್ಬ ಅವರ ಮನೆಯ ಗೋಡೆಗೆ ಹಾನಿಯಾಗಿದೆ.
ಸ್ಥಳಕ್ಕೆ ಗುರುವಾರ ತಹಶಿಲ್ದಾರ್ ಮಹೇಶ್ ಜೆ, ಗ್ರಾಮ ಲೆಕ್ಕಾಧಿಕಾರಿ ರನಿತಾ, ಲಾಯಿಲ ಗ್ರಾ.ಪಂ ಅಧ್ಯಕ್ಷೆ ಬೆನೆಡಿಕ್ಟ್ ಸಾಲ್ಡಾನಾ, ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜ, ಮತ್ತು ಸದಸ್ಯರುಗಳು, ಕಾರ್ಯದರ್ಶಿ ಪುಟ್ಟಸ್ವಾಮಿ, ಲೆಕ್ಕ ಸಹಾಯಕಿ ರೇಷ್ಮಾ ಗಂಜಿಗಟ್ಟಿ ಮೊದಲಾದವರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಮನೆಯವರು ಸೂಕ್ತ ಪರಿಹಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.