Posts

ಸಮಗ್ರವಾಗಿರುವ ಸಮಾಜವನ್ನು ಒಡೆಯಬಾರದು: ಸಾಹಿತಿ ಅರವಿಂದ ಚೊಕ್ಕಾಡಿ|| ಮುಂಡಾಜೆಯ ಗಾಂಧಿ ಸ್ಮಾರಕ ವನದಲ್ಲಿ ಗಾಂಧಿ ವಿಚಾರ ವೇದಿಕೆಯಿಂದ ಕಾರ್ಯಕ್ರಮ

1 min read

ಬೆಳ್ತಂಗಡಿ: ಸಮಾಜ ಸಮಗ್ರವಾಗಿರುತ್ತದೆ. ಅದನ್ನು ಒಡೆಯಬಾರದು. ಎಲ್ಲರನ್ನೂ ಒಳಗೊಳ್ಳುವ ಗಾಂಧಿ ತತ್ವಗಳನ್ನು ಎಲ್ಲರಿಗೂ ತಲುಪಿಸಬೇಕಾದ ಅಗತ್ಯವಿದೆ ಎಂದು ಗಾಂಧಿ ವಿಚಾರ ವೇದಿಕೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ, ಲೇಖಕ ಅರವಿಂದ ಚೊಕ್ಕಾಡಿ ಅಭಿಪ್ರಾಯಪಟ್ಟರು.

ಗಾಂಧಿ ವಿಚಾರ ವೇದಿಕೆ ಬೆಳ್ತಂಗಡಿ ಘಟಕದ ವತಿಯಿಂದ ಶನಿವಾರದಂದು ಮುಂಡಾಜೆಯ ಗಾಂಧಿವನದಲ್ಲಿ ನಡೆಸಿದ ಗಾಂಧಿ ಸ್ಮಾರಕ ಮರಕ್ಕೆ ಪುಷ್ಪಾರ್ಚನೆ ಮತ್ತು ಗಾಂಧಿ ಚಿಂತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ದಿಕ್ಸೂಚಿ ಉಪನ್ಯಾಸ ನೀಡಿದರು.

1948 ರಲ್ಲಿ ಗಾಂಧೀಜಿಯವರ ಹತ್ಯೆ ಆದಾಗ ಅವರ ಚಿತಾಭಸ್ಮವನ್ನು  ಮುಂಡಾಜೆಗೆ ತಂದು ಆಲದ ಗಿಡ ನೆಡಲು ಕಾರಣರಾದ ಹಿರಿಯ ಗಾಂಧಿವಾದಿ, ಕೀರ್ತಿಶೇಷ ಜಿ. ಎನ್. ಭಿಡೆಯವರ ಮನೆಯಲ್ಲಿ ಈ ಗಾಂಧಿ ಚಿಂತನ ಕಾರ್ಯಕ್ರಮ ನಡೆಯಿತು.




ಗಾಂಧಿ ವಿಚಾರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಶ್ರೀಧರ ಜಿ ಭಿಡೆ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಬೆಳ್ತಂಗಡಿಯಲ್ಲಿರುವ ಅಪರೂಪದ ಈ ಗಾಂಧಿ ಸ್ಮರಣೆಯ ಕೇಂದ್ರವನ್ನು ಗುರುತಿಸಿ ಮುನ್ನಲೆಗೆ ತರುವ ಕೆಲಸ ನಮ್ಮ ವೇದಿಕೆಯಿಂದ ನಡೆದಿದೆ.ಇದೀಗ ಗ್ರಾಮ ಪಂಚಾಯತ್ತೇ ಇದರ ಅಭಿವೃದ್ಧಿಗೆ ಇಳಿದಿರುವುದು ಸಂತೋಷದ ವಿಷಯ. ಗಾಂಧೀಜಿಯವರ ಇತಿಹಾಸ ಮುಂದಿನ ಪೀಳಿಗೆಗೂ ದೃಢಪಡಿಸಬೇಕಾದುದು ಕರ್ತವ್ಯ. ಹಿಂದಿನವರು ಒಂದು ಹೊತ್ತು ಉಂಡು ಬದುಕಿದ್ದರಿಂದ ಇಂದು ನಾವು ಮೂರುಹೊತ್ತು ಉಣ್ಣುತ್ತಿದ್ದೇವೆ ಎಂಬುದನ್ನು ಅರಿಯಬೇಕು. 

ಗಾಂಧೀಜಿಯಲ್ಲಿ ದೈವೀಕ ಶಕ್ತಿ ಇತ್ತು. ವಿಶ್ವಾದಾದ್ಯಂತ ಗಾಂಧೀಜಿಗಿರುವಷ್ಟು ಸ್ಮಾರಕಗಳು ಬೇರೆ ಯಾರಿಗೂ ಇಲ್ಲ. 

ಸ್ವಾತಂತ್ರ್ಯ ದಿನಾಚರಣೆಯಂದು ಗ್ರಾಮ ಪಂಚಾಯತ್ ನವರು ನಮ್ಮ ಮನೆಗೆ ಬಂದಿದ್ದ ವೇಳೆ ಈ ಇತಿಹಾಸ ನಮ್ಮಲ್ಲಿರುವ ಬಗ್ಗೆ ಅವರ ಗಮನಸೆಳೆದಿದ್ದೆ. ನಂತರ ಮೊದಲ ಹಂತದಲ್ಲಿ ಗಾಂಧಿ ವಿಚಾರ ವೇದಿಕೆಯ ಉಪಾಧ್ಯಕ್ಷ ನಾಮದೇವ ರಾವ್ ಅವರು, ನಂತರ ಗ್ರಾಮ ಪಂಚಾಯತ್‌ನವರು ಮುತುವರ್ಜಿ ತೆಗೆದುಕೊಂಡು ಆ ಸ್ಥಳವನ್ನು ಚೆನ್ನಾಗಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಗಾಂಧಿ ವಿಚಾರ ವೇದಿಕೆಯ ಬೆಳ್ತಂಗಡಿ ಘಟಕದ ಅಧ್ಯಕ್ಷ  ಶರತ್‌ಕೃಷ್ಣ ಪಡ್ವೆಟ್ಣಾಯ ಅಧ್ಯಕ್ಷತೆ ವಹಿಸಿದ್ದು, ಗಾಂಧಿ ಚಿಂತನೆ ಮತ್ತು ನಮ್ಮ ಸಂಸ್ಕೃತಿ ಬೇರೆಬೇರೆಯಲ್ಲ. ಅವು ಒಟ್ಟಾಗಿ ಸಮಗ್ರ ರೂಪದಲ್ಲಿ ಸಮಾಜವನ್ನು ತಲುಪಬೇಕು ಎಂದರು.

ಮುಂಡಾಜೆ ಶಾಲೆಯ ರೇಂಜರ್ಸ್ ರೋವರ್ಸ್ ವಿದ್ಯಾರ್ಥಿಗಳಿಂದ ಈಶ್ವರ ಜಯತೋ ಮತ್ತು ರಘುಪತಿ ರಾಘವ ರಾಜಾರಾಮ್ ಹಾಡಿನ ಆಲಾಪನೆ ನಡೆಯಿತು. ಪ್ರಾಂಶುಪಾಲೆ ಜ್ವಾಲಿ ಡಿಸೋಜಾ ಮತ್ತು ಉಪನ್ಯಾಸಕವೃಂದದವರು ಭಾಗಿಯಾಗಿದ್ದರು. 

ಮಾತೃ ಸಮಿತಿ ಸದಸ್ಯ ಅಶ್ರಫ್ ಆಲಿಕುಂಞಿ ಮುಂಡಾಜೆ  ನಿರೂಪಿಸಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಗಾಂಧಿ ವಿಚಾರ ವೇದಿಕೆಯ ತಾಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ವಿನುತಾ ರಜತ ಗೌಡ, ಮಾತೃ ಸಮಿತಿಯ ಸಂಚಾಲಕ ಗೋಪಾಲಕೃಷ್ಣ ಭಟ್ ಕಾಂಚೋಡು ಅನಿಸಿಕೆ ವ್ಯಕ್ತ ಪಡಿಸಿದರು. ತಾಲೂಕು ಘಟಕದ ಕಾರ್ಯಾಧ್ಯಕ್ಷ ದೇವಿಪ್ರಸಾದ್,  ಕಾರ್ಯದರ್ಶಿ ವಿದ್ಯಾ ಕುಮಾರ್, ಮಾತೃ ಸಮಿತಿ ಕಾರ್ಯದರ್ಶಿ ಶಶಿಧರ ಠೋಸರ್ ಉಪಸ್ಥಿತರಿದ್ದರು. 

ಗ್ರಾ.ಪಂ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಕುವೆಟ್ಟು ಜಿ.ಪಂ ಕ್ಷೇತ್ರದ ಉಪಾಧ್ಯಕ್ಷೆ ಸುಧಾ ರಮಾನಂದ್ ವಂದಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment