ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ಗೆ 42 ಕ್ಷೇತ್ರಗಳಿರುತ್ತದೆ. ಇದರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 8 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿವೆ . ಆದರೆ ಈ ಕ್ಷೇತ್ರಗಳ ಪೈಕಿ ಪ.ಜಾತಿ, ಪಂಗಡಗಳಿಗೆಂದು ಕ್ಷೇತ್ರವನ್ನು ಅನುಸೂಚಿತ ವರ್ಗ ಮತ್ತು ಅನುಸೂಚಿತ ಪಂಗಡಗಳಿಗೆ ಮೀಸಲಾಗಿರಿಸಿಲ್ಲ . ಇದು ಸಾಮಾಜಿಕ ನ್ಯಾಯದ ಉಲ್ಲಂಘನೆಯಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾ.ಸಂಚಾಲಕ ನೇಮಿರಾಜ್ ಕಿಲ್ಲೂರು ಆರೋಪಿಸಿದರು.
ಡಿಎಸ್ಎಸ್ ತಾಲೂಕು ಸಮಿತಿ ಬುಧವಾರ ಬೆಳ್ತಂಗಡಿ ಆಶಾ ಸಾಲಿಯಾನ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಸೆಕ್ಷನ್ 162 ರ ಪ್ರಕಾರ ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ಚುನಾವಣಾ ಕ್ಷೇತ್ರಗಳನ್ನು ಆಯಾ ವರ್ಗದ ಜನಸಂಖ್ಯೆಯ ಆಧಾರದಲ್ಲಿ ನಿಗದಿಪಡಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ , ಬೆಳ್ತಂಗಡಿ ತಾಲೂಕಿನಲ್ಲಿ ಈ ವರ್ಗಕ್ಕೆ ಸೇರಿದ ಜನಸಂಖ್ಯೆ ಅಧಿಕವಾಗಿದೆ . ಭೌಗೋಳಿಕವಾಗಿ 81 ಗ್ರಾಮಗಳನ್ನು ಹೊಂದಿರುವ ಬೆಳ್ತಂಗಡಿ ತಾಲೂಕಿನ ಹಲವು ಪ್ರದೇಶಗಳು ಮೂಲ ಸೌಕರ್ಯ ಗಳಿಂದ ಇನ್ನೂ ಕೂಡಾ ವಂಚಿತವಾಗಿದೆ. ತಾಲೂಕಿನ ಹಲವು ಗ್ರಾಮಗಳು ನಕ್ಸಲ್ ಪೀಡಿತ ಪ್ರದೇಶಗಳಾಗಿವೆ. ಮೂಲ ಸೌಕಯ್ಯಗಳಿಂದ ವಂಚಿತವಾಗಿರುವ ಈ ವರ್ಗದ ಅಭಿವೃದ್ಧಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಒದಗಿಸಬೇಕಾಗಿತ್ತು . ಈಗಾಗಲೇ ಹೊರಡಿಸಲಾದ ಜಿ.ಪಂ, ತಾ.ಪಂ . ಮೀಸಲಾತಿಯ ಕರಡು ಅಧಿಸೂಚನೆಯಲ್ಲಿ ದ.ಕ.ಜಿಲ್ಲೆಯ ಮಂಗಳೂರು ಕ್ಷೇತ್ರಕ್ಕೆ ಒಳಪಡುವ ತೆಂಕಎಡಪದವು , ಮೂಡುಶೆಡ್ಡೆ , ಕೋಣಾಜೆ ಕ್ಷೇತ್ರಗಳಲ್ಲಿ ಬೆರಳಣಿಕೆಯಷ್ಟು ಸಂಖ್ಯೆಯಲ್ಲಿರುವ ಪರಿಶಿಷ್ಟ ಸಮುದಾಯದ ಕ್ಷೇತ್ರಗಳನ್ನು ಮೀಸಲು ಕ್ಷೇತ್ರ ಎಂದು ಪರಿಗಣಿಸಿರುವುದು ತೀರಾ ಬೇಸರದ ಸಂಗತಿ. ಆ ಕ್ಷೇತ್ರಗಳಿಗೆ ಮೀಸಲಾದ ಮೀಸಲಾತಿಯನ್ನು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಪರಿಶಿಷ್ಟ ಜಾತಿ ಸಮುದಾಯದವರು ವಾಸವಿರುವ ಕ್ಷೇತ್ರಗಳನ್ನು ಪ.ಜಾತಿ, ಪಂಗಡದ ಮೀಸಲು ಕ್ಷೇತ್ರಗಳೆಂದು ತಿದ್ದುಪಡಿ ಮಾಡಬೇಕಾಗಿ ರಾಜ್ಯ ಚುನಾವಣಾ ಆಯೋಗವನ್ನು ಒತ್ತಾಯಿಸುತ್ತೇವೆ ಎಂದರು.
ಬೆಳ್ತಂಗಡಿ ತಾಲೂಕಿನ ಪರಿಶಿಷ್ಟ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕಾಗಿದೆ. ಈ ಹಿಂದಿನ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 6 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿದ್ದಾಗ ಮತ್ತು 7 ಜಿಲ್ಲಾ ಪಂಚಾಯತ್ ಕ್ಷೇತ್ರಗಳಾಗಿ ಪುನರ್ ವಿಂಗಡಣೆಗೊಂಡಾಗ ಕೂಡ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ನೀಡಲಾಗಿತ್ತು . ಆದರೆ ಬೆಳ್ತಂಗಡಿ ತಾಲೂಕಿನಲ್ಲಿ ಇದೀಗ 8 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿದ್ದು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಕನಿಷ್ಠ ಒಂದೂ ಕ್ಷೇತ್ರವನ್ನೂ ಮೀಸಲಾಗಿರಿಸಿಲ್ಲ , ಆದ್ದರಿಂದ ಮೇಲೆ ತಿಳಿಸಿದ ಕರಡೂ ಅಧಿನಿಯಮಕ್ಕೆ ನಮ್ಮ ಸಂಘಟನೆ ಜಿಲ್ಲಾ ಚುನಾವಣಾ ಅಧಿಕಾರಿಗೆ ಮತ್ತು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಯವರಿಗೆ ಆಕ್ಷೇಪಣೆಯನ್ನು ಸಲ್ಲಿಸುತ್ತಿದ್ದೇವೆ ಎಂದರು.
ಬೆಳ್ತಂಗಡಿ ತಾಲೂಕಿನ 8 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಕನಿಷ್ಠ 2 ಸ್ಥಾನಗಳನ್ನು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಕ್ಕೆ ಮೀಸಲಿರಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಡಿಎಸ್ಎಸ್ ರಾಜ್ಯ ಸಂಚಾಲಕ ಎಲ್ ಚಂದು, ವಿಭಾಗೀಯ ಸಂಚಾಲಕ ಬಿ.ಕೆ ವಸಂತ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವೆಂಕಣ್ಣ ಕೊಯ್ಯೂರು, ಜಿಲ್ಲಾ ಖಜಾಂಜಿ ಶ್ರೀಧರ ಕಳೆಂಜ, ತಾ. ಸಂಘಟನಾ ಸಂಚಾಲಕ ಶೇಖರ್ ಕುಕ್ಕೇಡಿ, ಬೇಬಿ ಸುವರ್ಣ ಮಾಲಾಡಿ ಮೊದಲಾದವರು ಉಪಸ್ಥಿತರಿದ್ದರು.