ಬೆಳ್ತಂಗಡಿ: ಗುರುವಾರ ಇಡೀ ದಿನ ಬೆಳ್ತಂಗಡಿ ತಾಲೂಕಿನಾಧ್ಯಂತ ಭಾರಿ ಮಳೆ ಸುರಿಯುತ್ತಿದ್ದು ನದಿಗಳು ತುಂಬಿ ಹರಿಯುತ್ತಿದೆ.
ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದರೂ, ಮಧ್ಯಾಹ್ನದ ಬಳಿಕ ಮಳೆಯ ಬಿರುಸು ಸ್ವಲ್ಪ ತಗ್ಗಿದೆ.
ಆದರೂ ನದಿಪಾತ್ರದ ನಿವಾಸಿಗಳು 2018 ರ ನೆರೆ ಘಟನೆಯನ್ನು ಮತ್ತೆ ನೆನಪಿಸಿಕೊಂಡು ಆತಂಕದಲ್ಲಿದ್ದಾರೆ.ಗುರುವಾರದ ಮಳೆಗೆ ತಗ್ಗು ಪ್ರದೇಶದ ಕೆಲವು ಅಡಕೆ ತೋಟಗಳಿಗೆ ನೀರು ನುಗ್ಗಿದೆ.
ಬುಧವಾರ ಸಂಜೆಯ ಬಳಿಕ ಮಳೆಯ ಜತೆ ಬೀಸಿದ ಗಾಳಿ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಹಲವೆಡೆ ಮನೆಗಳ ಮೇಲ್ಛಾವಣಿಗೆ ಹಾನಿಗಳು ಆಗಿದ್ದು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.