ಬೆಳ್ತಂಗಡಿ: ತಾಲೂಕಿನ ಶಿರ್ಲಾಲು ಗ್ರಾಮದ ಸುದೇರ್ದು ನಿವಾಸಿ ರವಿಚಂದ್ರ ಪೂಜಾರಿಯವರ ಪುತ್ರ, ಜಿಂದಾಲ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಸುಜಿತ್ (23 ವ.) ಬಳ್ಳಾರಿಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು, ಸ್ಥಳೀಯರು ಊರಿಗೆ ಕರೆ ಮಾಡಿ ತಿಳಿಸಿದ ವೇಳೆಯಷ್ಟೇ ವಿಚಾರ ಬಹಿರಂಗವಾಗಿದೆ.
ಕಂಪೆನಿಯ ಗೆಸ್ಟ್ ಹೌಸ್ನಲ್ಲಿ ಅವರು ಕೃತ್ಯವೆಸಗಿಕೊಂಡಿದ್ದೆಂದು ಗೊತ್ತಾಗಿದೆ. ಸಂಗಡಿಗರ ಜೊತೆ ಬುಧವಾರ ಮಧ್ಯಾಹ್ನದವರೆಗೂ ಬೆರೆತಿದ್ದ ಅವರು ಬಳಿಕ ನಾಪತ್ತೆಯಾಗಿದ್ದರೆಂದು ಹೇಳಲಾಗಿದೆ.
ಆರ್ಥಿಕ ವ್ಯವಹಾರವೊಂದರಲ್ಲಿ ನಷ್ಟ ಉಂಟಾಗಿರುವುದರಿಂದ ಅವರು ಕೃತ್ಯವೆಸಗಿಕೊಂಡಿರ ಬಹುದು ಎಂದು ಊರವರು ಶಂಕೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪೂರಕವಾಗಿ ಸುಜಿತ್ ಅವರು ಮನೆಗೂ ಸಂದೇಶ ಕಳಿಸಿದ್ದರೆಂದು ತಿಳಿದುಬಂದಿದೆ.
ರವಿಚಂದ್ರ ಪೂಜಾರಿ ಅವರ ಮೂವರು ಮಕ್ಕಳ ಪೈಕಿ ಅಣ್ಣ ಸುನಿಲ್ ಕುಮಾರ್ ಶಿರ್ಲಾಲು ಮಿಲ್ಕ್ ಸೊಸೈಟಿಯಲ್ಲಿ ಉದ್ಯೋಗಿಯಾಗಿದ್ದಾರೆ. ಸಹೋದರಿಗೆ ಮೇ. 20ರಂದು ವಿವಾಹವಾಗಿದೆ. ಕಿರಿಯ ಪುತ್ರ, ಅವಿವಾಹಿತರಾಗಿದ್ದ ಸುಜಿತ್ ಅಕ್ಕನ ಮದುವೆಗೆ ಬಂದವರು 15 ದಿನಗಳ ಹಿಂದಷ್ಟೇ ಬಳ್ಳಾರಿಗೆ ಉದ್ಯೋಗಕ್ಕೆ ಮರಳಿದ್ದರು.
ಎರಡು ವರ್ಷಗಳ ಹಿಂದಷ್ಟೇ ಸುಜಿತ್ ಕುಮಾರ್ ಜಿಂದಾಲ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದರು. ವಾಲಿಬಾಲ್ ಆಟಗಾರರಾಗಿದ್ದ ಅವರು ಊರಿಗೆ ಬಂದಾಗ ಮಿತ್ರರ ಜೊತೆ ಆಟವಾಡುತ್ತಿದ್ದರು. ಇದೀಗ ಅವರು ನಿಗೂಢ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ಹಲವಾರು ಸಂದೇಹಗಳಿಗೆ ಕಾರಣವಾಗಿದೆ.
ಘಟನೆಯ ವಿವರ ತಿಳಿಯುತ್ತಿದ್ದಂತೆ ಶಿರ್ಲಾಲಿನ ಅವರ ಆಪ್ತ ಬಂಧುಗಳು ನಾಲ್ಕು ಮಂದಿ ಬಳ್ಳಾರಿಗೆ ಹೋಗಿದ್ದು, ಅಲ್ಲಿನ ಕಾನೂನು ಪ್ರಕ್ರೀಯೆ ಮುಗಿಸಿ ಶುಕ್ರವಾರ ರಾತ್ರಿ ವೇಳೆಗೆ ಮೃತದೇಹವನ್ನು ಶಿರ್ಲಾಲಿಗೆ ತರುತ್ತಿದ್ದಾರೆ. ರಾತ್ರಿಯೇ ಅಂತ್ಯಸಂಸ್ಕಾರಕ್ಕೆ ಎಲ್ಲಾ ವ್ಯವಸ್ಥೆ ರೂಪಿಸಲಾಗಿದೆ ಎಂದು ವಿವರ ಲಭಿಸಿದೆ.