ಬೆಳ್ತಂಗಡಿ; ಬೆಂಗಳೂರಿನಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ ಎನ್ನಲಾದ ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಕರಾಯದ ಯುವಕ ನಿತೇಶ್ ನಾಯ್ಕ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಬೆಳ್ತಂಗಡಿ ತಾಲ್ಲೂಕಿನ ತಣ್ಣೀರುಪಂತ ಗ್ರಾ.ಪಂ ವ್ಯಾಪ್ತಿಯ ಕರಾಯ ಕೊಂಬೆಟ್ಟಿಮಾರು ಬರಮೇಲು ನಿವಾಸಿ, ಸಣ್ಣ ಕೃಷಿಕ ಹಾಗೂ ಕೂಲಿ ಕಾರ್ಮಿಕರಾಗಿರುವ ವಿಶ್ವನಾಥ ನಾಯ್ಕ ಅವರ ಪುತ್ರರಾದ ನಿತೇಶ್ ನಾಯ್ಕ ಅವರು ಬೆಂಗಳೂರಿನಲ್ಲಿ ಅಪಘಾತಕ್ಕೆ ತುತ್ತಾದವರಾಗಿದ್ದಾರೆ.
ವಿಶ್ವನಾಥ ನಾಯ್ಕ ಅವರ ನಾಲ್ವರು ಮಕ್ಕಳ ಪೈಕಿ ಓರ್ವರಾದ ನಿತೇಶ್ ಐಟಿಐ ವಿದ್ಯಾಭ್ಯಾಸ ಪೂರ್ತಿಗೊಳಿಸಿ ಬೆಂಗಳೂರು ಸೇರಿಕೊಂಡಿದ್ದರು. ದುರಾದೃಷ್ಟವೆಂದರೆ ಲಾಕ್ಡೌನ್ ನಿಮಿತ್ತ ಊರಿನಲ್ಲೇ ಇದ್ದ ಅವರು ಎರಡು ದಿನಗಳ ಹಿಂದಷ್ಟೇ ಬೆಂಗಳೂರಿಗೆ ಮರಳಿದ್ದರೆಂದು ಸ್ಥಳೀಯರು ಲೈವ್ ಮೀಡಿಯಕ್ಕೆ ಮಾಹಿತಿ ನೀಡಿದ್ದಾರೆ.
ಘಟನೆಯ ವಿವರ ಅರಿಯುತ್ತಿದ್ದಂತೆ ಮೃತರ ತಂದೆ ಹಾಗೂ ಕುಟುಂಬಸ್ಥರು ರಾಜಧಾನಿ ಬೆಂಗಳೂರಿಗೆ ಧಾವಿಸಿದ್ದು, ಅಲ್ಲಿನ ಕಾನೂನು ಕಟ್ಟಳೆಗಳನ್ನು ಮುಗಿಸಿ ಇದೀಗ ತಡ ರಾತ್ರಿಯೇ ಮೃತದೇಹವನ್ನು ಊರಿಗೆ ತರುತ್ತಿದ್ದಾರೆ ಎಂದು ತಿಳಿದುಬಂದಿದೆ.