ಬೆಳ್ತಂಗಡಿ; ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಯುವವಾಹಿನಿ ಬೆಳ್ತಂಗಡಿ ಘಟಕ ಇದರ ಆಶ್ರಯದಲ್ಲಿ ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ ಬಿಲ್ಲವ ಮಹಿಳಾ ವೇದಿಕೆ ಬೆಳ್ತಂಗಡಿ ಯುವವಾಹಿನಿ ಮಹಿಳಾ
ಸಂಚಾಲನ ಸಮಿತಿ ಬೆಳ್ತಂಗಡಿ ತಾಲೂಕು ಇದರ ಸಹಕಾರದೊಂದಿಗೆ "ನಮ್ಮೊಳಗಿನ ನಾಣು" ನಾರಾಯಣ ಗುರು ವಿಚಾರ ಸಂಪದ ಮಾ. 28 ರಂದು ಬೆಳ್ತಂಗಡಿ ಆಶಾ ಸಾಲಿಯಾನ ಸಭಾಂಗಣದಲ್ಲಿ ಜರುಗಲಿದೆ ಎಂದು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ, ನ್ಯಾಯವಾದಿ ಮನೋಹರ್ ಕುಮಾರ್ ಇಳಂತಿಲ ಹೇಳಿದರು.
ನಗರದ ವಾರ್ತಾಭವನದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.
ವಿಚಾರ ಸಂಪದದಲ್ಲಿ "ನಾರಾಯಣ ಗುರು ಜನನ ಪೂರ್ವ ಸಮಾಜ" ಈ ವಿಷಯದ ಮೇಲೆ ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಶಿಕ್ಷಕಿ ಹಾಗೂ ಸಾಹಿತಿ ಬಿ.ಎಮ್ ರೋಹಿಣಿ, "ಪರಿವರ್ತನೆಯ ಹರೀಕಾರ ನಾರಾಯಣ ಗುರು" ವಿಷಯದಲ್ಲಿ ಸಮಾಜಶಾಸ್ರ್ತ ಸಹ ಪ್ರಾಧ್ಯಾಪಕ ಡಾ.ಶೇಷಪ್ಪ ಅಮೀನ್, "ಪ್ರಸ್ತುತ ಸಮಾಜ ಮುಂದಿನ ನಡೆ" ವಿಷಯದಲ್ಲಿ ಹಂಪಿ ಯುನಿವರ್ಸಿಟಿಯ ನಿವೃತ್ತ ಪ್ರಾಧ್ಯಾಪಕ ಡಾ.ಎಂ ಚಂದ್ರಪೂಜಾರಿ ಇವರು ವಿಚಾರ ಮಂಡಿಸಲಿದ್ದಾರೆ.
ಯುವವಾಹಿನಿಯ ಕೇಂದ್ರ ಸಮಿತಿ ನಿಕಟಪೂರ್ವ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಸಮನ್ವಯಕಾರರಾಗಿರುತ್ತಾರೆ.
ಬ್ರಹ್ಮಶ್ರೀ ನಾರಾಯಣ ಗುರುಗಳ ಪೂರ್ವಾಶ್ರಮದ ಹೆಸೇ ನಾಣು, ಅವರ ಬಗ್ಗೆ ನಾವೆಷ್ಟು ತಿಳಿದಿದ್ದೇವೆ ಎಂಬುದನ್ನು ಅರಿಯಲು ಹಾಗೂ ಇನ್ನಷ್ಟು ವಿಶಾಲವಾಗಿ ಅರ್ಥೈಸಲು ಈ ವಿಚಾರ ಸಂಪದ ಎಂದು ವಿವರಿಸಿದರು.
ಶ್ರೀ ಗುರುನಾಯಾರಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ ಉದ್ಘಾಟನೆ ನಡೆಸಲಿದ್ದಾರೆ.
ಮಾಜಿಶಾಸಕವಸಂತ ಬಂಗೇರ, ಯುವ ವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಎಂ.ಕೆ ಪ್ರಸಾದ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ರಂಜಿತ್ ಹೆಚ್.ಡಿ, ಮಹಿಳಾ ಬಿಲ್ಲಿವ ವೇದಿಕೆ ಅಧ್ಯಕ್ಷೆ ರಾಜಶ್ರೀ ರಮಣ್, ಯುವ ವಾಹಿನಿ ಮಹಿಳಾ ಸಂಚಲನಾ ಸಮಿತಿ ಪ್ರ.ಸಂಚಾಲಕಿ ಸುಜಾತಾ ಅಣ್ಣಿ ಪೂಜಾರಿ ಉಪಸ್ಥಿತರಿರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರುಗಳ ತತ್ವ ಆದರ್ಶ ತಿಳಿಯಲು ಬಯಸುವ ಯಾರೂ ಕೂಡ ಮುಕ್ತವಾಗಿ ಭಾಗವಹಿಸಬಹುದು ಎಂದೂ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪದ್ಮನಾಭ ಮಾಣಿಂಜ, ಎಂ.ಕೆ ಪ್ರಸಾದ್ ಮತ್ತು ಗುರುರಾಜ್ ಸಾಲ್ಯಾನ್ ಉಪಸ್ಥಿತರಿದ್ದರು.