ಸಾಂದರ್ಭಿಕ ಚಿತ್ರ
ಬೆಳ್ತಂಗಡಿ; ಶುಭ ಕಾರ್ಯಕ್ರಮಕ್ಕೆ ಹೋಗಿದ್ದಲ್ಲಿ ಸಂಬಂಧಿಕರೊಬ್ಬರು 'ಬಾಯ್ ಚುಮ್ಮಿ' ಎಂದು ಪತ್ನಿಗೆ ಹೇಳಿಹೋದದ್ದನ್ನೇ ಗುರಿಯಾಗಿಸಿ ಮನೆಗೆ ಮರಳಿದ ಬಳಿಕ ಪತ್ನಿಗೆ ಪತಿ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ ಘಟನೆ ಓಡಿಲ್ನಾಳದಲ್ಲಿ ನಡೆದಿದೆ.
ಪತ್ನಿಯ ನಡತೆಯ ಬಗ್ಗೆ ಶಂಕೆ ವ್ಯಕ್ತಪಡಿಸಿ ಕಾನೂನು ಕೈಗೆತ್ತಿಕೊಂಡ ಪತಿಯ ವಿರುದ್ಧ ಇದೀಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓಡಿಲ್ನಾಳ ಗ್ರಾಮದ ನಿವಾಸಿ ರಾಘವೇಂದ್ರ ಗೌಡ ಎಂಬವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಪತಿಯೊಂದಿಗೆ ಕಾರ್ಯಕ್ರಮವೊಂದಕ್ಕೆ ಹೋದಾಗ ಇನ್ನೊಬ್ಬ ಸಂಬಂಧಿ 'ಬಾಯ್ ಚುಮ್ಮಿ' ಎಂದು ಮಾತನಾಡಿಸಿದ್ದು ಇದನ್ನು ನೆಪವಾಗಿಟ್ಟುಕೊಂಡು ರಾತ್ರಿಯ ವೇಳೆ ಮನೆಗೆ ಬಂದ ಪತಿ ಬಾಗಿಲು ತೆಗೆಯುವ ವಿಚಾರವಾಗಿ ಜಗಳತೆಗೆದಿದ್ದು ತನ್ನಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ನನ್ನ ಕಣ್ಣಿಗೆ ಮತ್ತು ಹಣೆಗೆ ಗಾಯವಾಗಿದೆ. ದೈವದ ಕಾರ್ಯಕ್ರಮಕ್ಕೆ ಹೋಗಿದ್ದ ಪತಿ ಮಧ್ಯ ರಾತ್ರಿ ಮನೆಗೆ ಹಿಂತಿರುಗಿದವರು ನನ್ನನ್ನು ಕರೆದಿದ್ದಾರೆ. ನಾನು ಬಾಗಿಲು ತೆರೆದ ವೇಳೆ, 'ಏನು ಬಾಗಿಲು ತೆರೆಯಲು ಇಷ್ಟು ತಡ. ನಿನ್ನನ್ನು 'ಚುಮ್ಮಿ' ಎಂದು ಕರೆದವನು ಯಾರು' ಎಂದು ತಗಾದೆ ತೆಗೆದು ಭಾರೀ ಗಲಾಟೆ ಮಾಡಿ ನನಗೆ ಕೋಲಿನಿಂದ ಹೊಡೆದಿದ್ದಾರೆ. ಆ ಬಳಿಕ ನಾನು ಅಸಹಾಯಕಳಾಗಿ ನನ್ನ ಮನೆಯವರಿಗೆ ಕರೆ ಮಾಡಿ ನಡೆದ ವಿಚಾರ ಹೇಳಿದ್ದು ಅವರು ರಾತ್ರಿಯೇ ಬಂದು ನನ್ನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಂತೆಯೇ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪತ್ನಿಯ ಮನೆಯವರಿಂದ ಹಲ್ಲೆ; ಪತಿಯಿಂದಲೂ ಪ್ರತಿದೂರು
ಈ ಮಧ್ಯೆ ಪತಿ ಹಾಗೂ ಮೇಲಿನ ಪ್ರಕರಣದ ಆರೋಪಿ ರಾಘವೇಂದ್ರ ಗೌಡ ಅವರು ಬೆಳ್ತಂಗಡಿ ಪೊಲೀಸರಿಗೆ ಪ್ರತಿ ದೂರು ನೀಡಿದ್ದು, ತನಗೆ ಪತ್ನಿಯ ಕಡೆಯವರು ಹಲ್ಲೆ ನಡೆಸಿ ಜೀವ ಬೆದರಿಕೆ ಯೊಡ್ಡಿದ್ದಾರೆ ಎಂದು ಆಪಾದಿಸಿದ್ದಾರೆ.
ನಾನು ಸಂಬಂಧಿಗಳ ಮನೆಯ ದೈವದ ಕಾರ್ಯಕ್ರಮಕ್ಕೆ ಹೋಗಿದ್ದಾತ ಮಧ್ಯ ರಾತ್ರಿ ಮನೆಗೆ ವಾಪಾಸಾದಾಗ ಮನೆಯ ಬಾಗಿಲು ತೆಗೆಯುವ ವಿಚಾರದಲ್ಲಿ ಪತ್ನಿಯೊಂದಿಗೆ ಜಗಳವಾಗಿದ್ದು ಬಾಗಿಲನ್ನು ದೂಡಿದಾಗ ಪತ್ನಿಯ ಕಣ್ಣಿಗೆ ಗಾಯವಾಗಿದೆ. ಇದಾದ ಬಳಿಕ ನಾನು ಮನೆಯ ಎದುರು ಕುಳಿತಿದ್ದಾಗ ಪತ್ನಿಯ ಕಡೆಯವರಾದ ಸಂಜೀವ ಗೌಡ, ವಿಜಯ ಗೌಡ, ಹರೀಶ, ಚಂದ್ರಶೇಖರ್ , ಸದಾನಂದ, ರಂಜಿತ್, ಶಶಿಧರ ಹಾಗೂ ಇತರರು ಮನೆಗೆ ಬಂದು ತನ್ನ ಮೇಲೆ ಹಲ್ಲೆ ನಡೆಸಿದ್ದು ಬೆತ್ತದಿಂದ ಕೈಯಿಂದ ಹೊಡೆದಿದ್ದಾರೆ. ಕಾಲಿನಿಂದ ತುಳಿದು ಗಾಯಗೊಳಿಸಿದ್ದಾರೆ. ತಡೆಯಲು ಬಂದ ನನ್ನ ಅಮ್ಮನನ್ನೂ ದೂಡಿದ್ದು ನಮಗೆ ಬೆದರಿಕೆಯೊಡ್ಡಿದ್ದಾರೆ ಎಂದು ಪ್ರತಿದೂರು ನೀಡಿದ್ದಾರೆ.
ಈ ದೂರೂ ಕೂಡ ಎಫ್ ಐ ಆರ್ ಆಗಿದ್ದು ತನಿಖೆ ನಡೆಯುತ್ತಿದೆ.