ಬೆಳ್ತಂಗಡಿ; ಕೋವಿಡ್ ನಿಂದಾಗಿ ಕಳೆದ 12 ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನೆಲ್ಯಾಡಿಯ ದಂಪತಿ ಕೇವಲ ಮೂರುವರೆ ಗಂಟೆ ಅಂತರದಲ್ಲಿ ಕೊನೆಯುಸಿರೆಳೆದ ಘಟನೆ ಗುರುವಾರ ನಡೆದಿದೆ.
ಮುಂಡಾಜೆ ಸೈಂಟ್ ಮೇರಿಸ್ ಚರ್ಚ್ನ ಧರ್ಮಗುರು ಸೆಬಾಸ್ಟಿಯನ್ ಪುನ್ನತ್ತಾನತ್ತ್ ಅವರ ತಾಯಿ ಮೇರಿ ಪುನ್ನತ್ತಾನತ್ತ್ ಮತ್ತು ಅವರ ತಂದೆ ವರ್ಗೀಸ್ ಪುನ್ನತ್ತಾನತ್ತ್ ಅವರೇ ಮೃತ ದಂಪತಿ.
ದಂಪತಿ ಪೈಕಿ ಮೇರಿ ಅವರು ಮಧ್ಯಾಹ್ನ 3 ಗಂಟೆ ವೇಳೆಗೆ ಕೊನೆಯುಸಿರೆಳೆದರೆ, ತಂದೆ ಸಂಜೆ 6.30 ರ ವೇಳೆಗೆ ಇಹಲೋಕ ತ್ಯಜಿಸಿದರು.
ನೆಲ್ಯಾಡಿಯ ಪುನ್ನತ್ತಾನತ್ತ್ ನಿವಾಸಿಗಳಾದ ದಂಪತಿಯನ್ನು ಜುಲೈ 4 ರಂದು ಮಾನವ ಸ್ಪಂದನ ತಂಡದ ಚೇರ್ಮೆನ್ ಪಿ.ಸಿ ಸೆಬಾಸ್ಟಿಯನ್ ಅವರ ಸಹಕಾರದೊಂದಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜೀವನದುದ್ದಕ್ಕೂ ಅನ್ಯೋನ್ಯವಾಗಿದ್ದ ದಂಪತಿ ಇದೀಗ ಸಾವಿನಲ್ಲೂ ಒಂದಾಗಿದ್ದು, ಮನೆಯವರನ್ನು ದುಃಖಕ್ಕೆ ತಳ್ಳಿದೆ.
ಮೃತರು ಓರ್ವ ಧರ್ಮಗುರು ಸಹಿತ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಶುಕ್ರವಾರ 11.00 ಕ್ಕೆ ನೆಲ್ಯಾಡಿಯ ಸೈಂಟ್ ಅಲ್ಫೋನ್ಸಾ ಚರ್ಚ್ನ ದಫನ ಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ತರು ತಿಳಿಸಿದ್ದಾರೆ. ಅಂತ್ಯಸಂಸ್ಕಾರ ಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಚರ್ಚ್ನಲ್ಲಿ ಮಾಡಲಾಗಿದೆ ಎಂದು ಅಲ್ಲಿನ ಧರ್ಮಗುರುಗಳಾದ ಫಾ. ಬಿನೊಯ್ ಅವರು ತಿಳಿಸಿದ್ದಾರೆ.