ಬೆಳ್ತಂಗಡಿ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದ ಮೇಲೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿದ್ದ ಬೆಳ್ತಂಗಡಿಯ ಮಾಜಿ ಸರ್ಕಲ್ ಇನ್ಸ್ಪೆಕ್ಟರ್, ಮಂಗಳೂರು ಕೋಸ್ಟಲ್ ಇನ್ಸ್ಪೆಕ್ಟರ್ ಆಗಿದ್ದ ವೈ ಗಂಗಿ ರೆಡ್ಡಿ ಅವರ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಬೆಳ್ತಂಗಡಿಯ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಗಂಗೀರೆಡ್ಡಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ 2009 ರಲ್ಲಿ ಆ.27ರಂದು ಆಗಿನ ಲೋಕಾಯುಕ್ತ ಡಿವೈಎಸ್ಪಿ ಸದಾನಂದ ವರ್ಣೇಕರ್ ನೇತೃತ್ವದ ತಂಡ ದಾಳಿ ನಡೆಸಿ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು.
ಆ ಬಳಿಕ ಲೋಕಾಯುಕ್ತ ಡಿವೈಎಸ್ಪಿ ಎಂ. ವಿಠಲ್ ದಾಸ್ ಪೈ ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದರಲ್ಲದೆ ಇನ್ಸ್ಪೆಕ್ಟರ್ ಗಂಗೀರೆಡ್ಡಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯವು 2020ರಲ್ಲಿ ಗಂಗೀರೆಡ್ಡಿಯ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿ 4 ವರ್ಷ ಸಾದಾ ಶಿಕ್ಷೆ ವಿಧಿಸಿತ್ತು.
ಆಗ ಕರಾವಳಿ ಕಾವಲು ಪಡೆಯ (ಸಿಎಸ್ಪಿ) ಇನ್ಸ್ಪೆಕ್ಟರ್ ಆಗಿದ್ದ ಗಂಗೀರೆಡ್ಡಿ ಅವರು ಲೋಕಾಯುಕ್ತ ತೀರ್ಪಿನ ವಿರುದ್ಧ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ತನ್ನ ಬಾಬ್ತು ಕೃಷಿ ಆದಾಯ, ಊರಿನಲ್ಲಿರುವ ಕಟ್ಟಡಗಳ ಬಾಡಿಗೆ, ಕುಟುಂಬದ ಆದಾಯದಲ್ಲಿ ದೊರೆತ ಚಿನ್ನದ ಮಾರಾಟದಿಂದ ಬಂದ ಹಣದ ಲೆಕ್ಕಾಚಾರವನ್ನು ತನಿಖೆ ವೇಳೆ ಪರಿಗಣಿಸಿರಲಿಲ್ಲ ಎಂಬ ಅಂಶವನ್ನು ಮುಂದಿಟ್ಟುಕೊಂಡು ಇದೀಗ ಹೈಕೋರ್ಟ್ ಅವರ ಶಿಕ್ಷೆಯನ್ನು ರದ್ದುಗೊಳಿಸಿದೆ.
ಗಂಗೀರೆಡ್ಡಿಯ ಪರವಾಗಿ ನ್ಯಾಯವಾದಿಗಳಾದ ಪರಮೇಶ್ವರ ಎನ್.ಹೆಗ್ಡೆ ಮತ್ತು ಜಿನೇಂದ್ರ ವಾದ ಮಂಡಿಸಿದ್ದರು.
ಲೋಕಾಯುಕ್ತ ನ್ಯಾಯಾಲಯದಿಂದ ಶಿಕ್ಷೆ ಕಾಯಂಗೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸ್ ಕರ್ತವ್ಯದಿಂದ ವಿಮುಕ್ತಗೊಂಡಿದ್ದರು. ಆದರೆ ಅವರು ಇದೀಗ ಸದ್ರಿ ತೀರ್ಪಿನ ಮೇಲೆ ಮೇಲ್ಮನವಿ ಸಲ್ಲಿಸಿ ಗೆಲುವು ಸಾಧಿಸಿರುವುದಿಂದ ಮತ್ತೆ ಅವರಿಗೆ ಪೊಲೀಸ್ ಇಲಾಖೆ ಕರ್ತವ್ಯ ಲಭಿಸಲಿದೆ. ಸೀನಿಯಾರಿಟಿಯಂತೆ ಡಿವೈಎಸ್ಪಿ ಯಾಗಿ, ಅಲ್ಲಿಂದ ಪದೋನ್ನತಿಹೊಂದಿ ಎಸ್ಪಿ ಆಗಬೇಕಾಗಿದ್ದ ಅವರಿಗೆ ಇದೇ ಹುದ್ದೆ ಗೆ ಖಾಯಂ ಆಗೂದು ಬಹುತೇಕ ಖಚಿತ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
--------
ವರದಿ; ಅಚ್ಚು ಮುಂಡಾಜೆ