ಬೆಳ್ತಂಗಡಿ: ಶನಿವಾರ ಸಂಜೆ ಶಿರಾಡಿಯ ಘಾಟ್ ನ ಗುಂಡ್ಯ ಸಮೀಪದ ಬರ್ಚಿನಹಳ್ಳಿ ಎಂಬಲ್ಲಿ ನಡೆದ ಎರಡು ವಾಹನಗಳ ಅಪಘಾತದಲ್ಲಿ ಬೆಳ್ತಂಗಡಿ ಕಂದಾಯ ಇಲಾಖೆಯ ಇಬ್ಬರು ಸಿಬ್ಬಂದಿಗಳೂ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಈ ಪೈಕಿ ಓರ್ವ ಗಾಯಾಳುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದೂ ಮಾಹಿತಿ ಲಭಿಸಿದೆ.
ಗಾಯಾಳುಗಳನ್ನು ನಿಡ್ಲೆ ಗ್ರಾಮದ ಗ್ರಾಮ ಸಹಾಯಕ ಯತೀಂದ್ರ, ಕೊಕ್ಕಡ ನಾಡ ಕಚೇರಿಯಲ್ಲಿ ಕರ್ತವ್ಯದಲ್ಲಿರುವ ಇನ್ನೋರ್ವ ಗ್ರಾಮ ಸಹಾಯಕ ಆನಂದ, ನಿಡ್ಲೆಯ ಬರೆಂಗಾಯ ನಿವಾಸಿ ಗುರು ಮತ್ತು ಕಳೆಂಜದ ಶಾಲೆತಡ್ಕ ನಿವಾಸಿ ಪ್ರಜ್ವಲ್ ಎಂಬರೆಂದು ತಿಳಿದುಬಂದಿದೆ.
ಈ ಪೈಕಿ ಗುರು ಅವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣವೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ ಎಂಬಲ್ಲಿರುವ ಧಾರ್ಮಿಕ ಶ್ರದ್ಧಾ ಕೇಂದ್ರ ಶಿರಾಡಿಗಡಿ ದೈವಸ್ಥಾನ ಇಲ್ಲಿಗೆ ಹರಕೆ ತೀರಿಸಲೆಂದು ಜೊತೆಯಾಗಿ ಗೂಡ್ಸ್ ಮಾದರಿಯ ಜೀತೋ ವಾಹನದಲ್ಲಿ ತೆರಳಿದ್ದ ತಂಡದವರು ಮರಳುತ್ತಿರುವಾಗ ಗುಂಡ್ಯದ ಬಳಿ ಬರ್ಚಿನಹಳ್ಳಿ ಎಂಬಲ್ಲಿಗೆ ತಲುಪುವಷ್ಟರಲ್ಲಿ
ಎದುರಿನಿಂದ ಬರುತ್ತಿದ್ದ ಟೆಂಪೋ ಟ್ರಾವೆಲರ್ ವಾಹನಕ್ಕೆ ಡಿಕ್ಕಿಹೊಡೆದು ಅವಘಡ ಸಂಭವಿಸಿದೆ. ಈ ವೇಳೆ ಹೆದ್ದಾರಿಯಲ್ಲೇ ಜೀತೋ ವಾಹನ ಮಗುಚಿ ಬಿದ್ದಿದ್ದು ಎಲ್ಲರೂ ಗಾಯಗೊಂಡರೆಂದು ಹೇಳಲಾಗಿದೆ. ಪಲ್ಟಿ ಹೊಡೆದ ಗೂಡ್ಸ್ ವಾಹನದಲ್ಲಿ ಇವರು ಕೊಂಡು ಹೋಗಿದ್ದ ಪಾತ್ರೆ, ಹಾಗೂ ಆಹಾರ ಸಾಮಾಗ್ರಿಗಳು ಇದ್ದು, ಅಪಘಾತದ ವೇಳೆ ಅವುಗಳು ರಸ್ತೆಗೆ ಚೆಲ್ಲಲ್ಪಟ್ಟಿದ್ದವು.