ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾ.ಪಂ ಪಿಡಿಒ ರವಿ ಬಂಧಿತ
ಬೆಳ್ತಂಗಡಿ: ಜಾಗದ ವಿಚಾರವಾಗಿ 9/11 ದಾಖಲೆ ಒದಗಿಸಲು ಹಣಕ್ಕಾಗಿ ಬೇಡಿಕೆ ಇಟ್ಟು ಕಕ್ಷಿದಾರನಿಂದ 15 ಸಾವಿರ ರೂ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಮಾಲಾಡಿ ಗಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿ ಅವರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಸೋಮವಾರ ತಮ್ಮ ಕಚೇರಿಯಲ್ಲಿ ಅವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಮೊದಲೇ ಹೊಂಚುಹಾಕಿ ಕುಳಿತಿದ್ದ ಎಸಿಬಿ ಅಧಿಕಾರಿಗಳು ಅವರನ್ನು ತಮ್ಮ ಬಲೆಗೆ ಕೆಡಹಿದ್ದಾರೆ.
ಮಾಲಾಡಿ ಗ್ರಾಮದ ಗ್ರಾಮಸ್ಥರೊಬ್ಬರು ಜಾಗದ 9/11 ದಾಖಲೆಗಾಗಿ ಅರ್ಜಿ ಸಲ್ಲಿಸಿದ್ದರು. ಇದು ಗ್ರಾ.ಪಂ ಮಟ್ಟದಲ್ಲೇ ನಿಗದಿತ ವೆಬ್ಸೈಟ್ ಮೂಲಕ ಆಗುವ ಆನ್ಲೈನ್ ಪ್ರಕ್ರಿಯೆಯಾಗಿದ್ದು ಅತ್ಯಂತ ಸರಳ ದಾಖಲೆಯೂ ಆಗಿದೆ. ಸಂಬಂಧ ಪಟ್ಟ ಜಾಗದ ಭಾವಚಿತ್ರ, ಸೇಲ್ ಡೀಡ್ ದಾಖಲೆ, ವಿಳಾಸದ ದಾಖಲೆ ಇತ್ಯಾಧಿ ಪ್ರತಿಗಳು ಮತ್ತು ಸರಕಾರಕ್ಕೆ ಪಾವತಿಸುವ ಸರಕಾರಿ ಫೀಸು ತುಂಬಿದರೆ ನಿಯಮಾನುಸಾರ ಆಗಬೇಕಾದ ದಿನಗಳ ಬಳಿಕ 9-11 ದಾಖಲೆ ಪಂಚಾಯತ್ ನಲ್ಲೇ ಪಂಚತಂತ್ರ ದಡಿ ದೊರೆಯಲ್ಪಡುತ್ತದೆ. ಆದರೆ ಈ ಕೆಲಸಕ್ಕೆ ಪಿಡಿಒ ರವಿ ಅವರು 25 ಸಾವಿರ ರೂ ಬೇಡಿಕೆ ಇಟ್ಟಿದ್ದರೆಂದು ಹೇಳಲಾಗಿದ್ದು ಅದರ ಬಾಬ್ತು 15 ಸಾವಿರ ರೂ.ಮುಂಗಡ ಪಡೆಯುವ ವೇಳೆ ಈ ನಿಯೋಜಿತ ದಾಳಿ ನಡೆದಿದೆ.
ಲಂಚದ ಬೇಡಿಕೆ ಇಟ್ಟಿರುವ ಕುರಿತು ಕಕ್ಷಿದಾರರು ಡಿ. 9 ರಂದು ಎಸಿಬಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಅಧಿಕಾರಿಗಳು ಕೂಲಂಕಷವಾಗಿ ಮಾಹಿತಿ ಪಡೆದುಕೊಂಡಿದ್ದರು. ಸೋಮವಾರ ಪಂಚಾಯಿತಿ ಪಿಡಿಒ ಅವರು ಫಲಾನುಭವಿಯಿಂದ ಹಣ ಸ್ವೀಕರಿಸಿದ್ದರು.
ಇದೀಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪಿಡಿಒ ರವಿ ಅವರನ್ನು ಇಲಾಖಾ ನಿಯದಂತೆ ಬಂಧಿಸಿ ಮಹಜರು ನಡೆಸಿದರು. ಬಳಿಕ ಅವರನ್ನು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಹದಿನೈದು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಕಾರ್ಯಾಚರಣೆ ಯಲ್ಲಿ ಭ್ರಷ್ಟಾಚಾರ ನಿಗ್ರಹದಳದ ಡಿವೈಎಸ್ ಪಿ ಕೆ.ಸಿ.ಪ್ರಕಾಶ್ ಅವರು ನೇತೃತ್ವ ವಹಿಸಿದ್ದು, ಇನ್ಸ್ ಪೆಕ್ಟರ್ ಗಳಾದ ಗುರುರಾಜ್ ಹಾಗೂ ಶ್ಯಾಮ್ ಸುಂದರ್ ಇವರು ರೂಪುರೇಷೆ ಸಿದ್ದಪಡಿಸಿದ್ದರು.ಎಸಿಬಿ ಸಿಬಂದಿಗಳಾದ ರಾಧಾಕೃಷ್ಣ ಡಿ. ಎ., ಹರಿಪ್ರಸಾದ್, ಆದರ್ಶ್, ಉಮೇಶ್, ಮೋಹನ್ ಮತ್ತು ವೈಶಾಲಿ ಇವರು ಸಹಕರಿಸಿದರು.