Posts

ಬೆಳ್ತಂಗಡಿ ಅನಾಥ ಕ್ಷೇತ್ರವಲ್ಲ; ಹೊರಗಿನವರನ್ನು ತಂದು ಸ್ಥಾಪನೆ ಮಾಡುವ ಗತಿಗೇಡು ಬೆಳ್ತಂಗಡಿ ಕಾಂಗ್ರೆಸ್ ಗೆ ಬರಲಿಲ್ಲ; ಮಾಜಿ ಸಚಿವ ಗಂಗಾಧರ ಗೌಡ ಗುಡುಗು

2 min read

ಬೆಳ್ತಂಗಡಿ; 2023 ರ ವಿಧಾನ ಸಭಾ ಚುನಾವಣೆಗೆ ಬೆಳ್ತಂಗಡಿ ಕ್ಷೇತ್ರದಿಂದ ಸ್ಪರ್ಧಿಸಲು ಕೆಪಿಸಿಸಿ ಗೆ ಮೂರು ಮಂದಿ ಉಮೇದ್ವಾರಿಕೆ ಸಲ್ಲಿಸಿದ್ದು ಆ ಮೂಲಕ ರಾಜಕೀಯ ಚಟುವಟಿಕೆ ಗರಿಗೆದರಿದೆ. ಅರ್ಜಿ ಸಲ್ಲಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಮಾಜಿ ಸಚಿವ ಕೆ ಗಂಗಾಧರ ಗೌಡ ಅವರು,  "ಬೆಳ್ತಂಗಡಿ ಅನಾಥ ಕ್ಷೇತ್ರ ವಲ್ಲ. ಇಲ್ಲಿ ಹೊರಗಿನವರನ್ನು ತಂದು ಸ್ಥಾಪನೆ ಮಾಡುವ ಅಗತ್ಯ ಇಲ್ಲ" ಎಂದಿರುವುದು ಇದೀಗ ಭಾರೀ ಸುದ್ದಿಯಾಗತೊಡಗಿದೆ.

ಬೆಂಗಳೂರಿನಲ್ಲಿ ಕಾಂಗ್ರೆಸ್ ನಿಯೋಗ;

ರೇ ಹೇಳಿದಂತೆ, ನಮ್ಮಲ್ಲಿ‌ ಬಣದ ಪ್ರಶ್ನೆ ಇಲ್ಲ.  ಬ್ಲಾಕ್ ಕಾಂಗ್ರೆಸ್ ನ ಪದಾಧಿಕಾರಿಗಳು, ಎಂ.ಎಲ್‌.ಸಿ ಹಾಗೂ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಎಲ್ಲರೂ ತಿರ್ಮಾನ ಮಾಡಿದಂತೆ ಇಲ್ಲಿ ಬೆಳ್ತಂಗಡಿಯವರಿಗೇ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕು. ಹೊರಗಿನವರಿಗೆ ಅವಕಾಶ ಮಾಡಿಕೊಡುವ ಅಗತ್ಯವಿಲ್ಲ. 1978 ರ ವರೆಗೆ ಹೊರಗಿನವರು ಬೆಳ್ತಂಗಡಿಯಲ್ಲಿ ಸ್ಪರ್ಧೆ ಮಾಡಿದ್ದಾರೆ. ವೈಕುಂಠ ಬಾಳಿಗ, ಸುಬ್ರಹ್ಮಣ್ಯ ಗೌಡ, ವೆಂಕಟ್ರಮಣ ಗೌಡ ಇವರೆಲ್ಲ ಸ್ಪರ್ಧೆ ಮಾಡ್ತಾ ಇದ್ರು. ಆ ನಂತರದ ದಿನಗಳಲ್ಲಿ ಬೆಳ್ತಂಗಡಿಯವರೇ ಶಾಸಕರಾದರು. ನಮ್ಮ ಕಾಂಗ್ರೆಸ್ ಗೆ ಇಲ್ಲಿ ಬರಗಾಲ ಬಂದಿಲ್ಲ.‌ ಕಾಂಗ್ರೆಸ್ ನಲ್ಲಿ ಬೇಕಾದಂತಹಾ ಕಾರ್ಯಕರ್ತರು ಇದ್ದಾರೆ. ಅಧ್ಯಕ್ಷರುಗಳು ಇದ್ದಾರೆ. ಕೆಲಸ ಮಾಡುವಂತಹಾ ನಾಯಕರುಗಳು ಇದ್ದಾರೆ. ಕಾಂಗ್ರೆಸ್ ಗೆಲ್ಲಿಸಲು ಶಕ್ತಿ ಇದೆ. ಕಾಂಗ್ರೆಸ್ ಗೆ ಹೊರಗಡೆಯಿಂದ ಆಮದು ಮಾಡುವಂತಹಾ ಗತಿಗೇಡು ಬಂದಿಲ್ಲ, ಯಾರು ಬೆಳ್ತಂಗಡಿಯಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ ಅವರಿಗೇ ಟಿಕೆಟ್ ಕೊಡಬೇಕು. ಅದು ಯಾರಾದರೂ ಸರಿ ಎಂದಿದ್ದಾರೆ. 

ಮುಂದುವರಿದು ಮಾತನಾಡಿ, ಕಳೆದ ನಾಲ್ಕೂವರೆ ವರ್ಷದಿಂದ ಪಕ್ಷಕ್ಕಾಗಿ ನಮ್ಮ ಕಾರ್ಯಕರ್ತರು ದುಡಿದಿದ್ದಾರೆ. ನಮ್ಮ ವಸಂತ ಬಂಗೇರರು ದುಡಿದಿದ್ದಾರೆ. ನಾನೂ ದುಡಿದಿದ್ದೇನೆ. ಅಂತಹಾ ಸಂದರ್ಭದಲ್ಲಿ ಹೊರಗಡೆ ಯವರನ್ನು, ಬೆಂಗಳೂರಿನವನ್ನು ತಂದು ಸ್ಥಾಪನೆ ಮಾಡುವಂತಹಾ ಪರಿಸ್ಥಿತಿ‌ ಯಾಕೆ ಬೇಕು?

ಯಾಕೆ ಅಗತ್ಯ ಇದೆ? ಎಂದು ಪ್ರಶ್ನಿಸಿದ ಅವರು, ಬೇಕಾದರೆ ಅವರಿಗೆ ಬೆಂಗಳೂರಿನಲ್ಲಿ ಬೇಕಾದಷ್ಟು ಕ್ಷೇತ್ರಗಳಿವೆ. ಅಲ್ಲಿ ಸ್ಪರ್ಧೆ‌ ಮಾಡಬಹುದು. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕಲ್ಲು ಹಾಕುವಂತಹದ್ದು ಯಾಕೆ, ಅದಕ್ಕೆ ಯಾರೂ ಒಪ್ಪಲ್ಲ. ಅದು ಸ್ಪಷ್ಟವಾಗಿ ದೆ. ಒಂದೋ‌ ವಸಂತ ಬಂಗೇರ ಸ್ಪರ್ಧೆ ಮಾಡ್ತಾರೆ. ಅಥವಾ ನಾನೇ ಸ್ಪರ್ಧೆ ಮಾಡುತ್ತೇನೆ. ಹೊರಗಿನವರಿಗೆ ಟಿಕೆಟ್ ಎಂಬ ಪ್ರಶ್ನೆನೇ ಬರೋಲ್ಲ. 

ರಾಜ್ಯದ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು ಅದಕ್ಕೆ ಅವಕಾಶ ಮಾಡಿಕೊಡಲ್ಲ.

ನಮ್ಮಲ್ಲಿ ತೀರ್ಮಾತಾಗಿದೆ. ಹರೀಶ್ ಕುಮಾರ್ ಅವರು, ಪಕ್ಷದ ಅಧ್ಯಕ್ಷರು, ಮುಂಚೂಣಿ ಘಟಕದ ನಾಯಕರುಗಳು, ಮಹಿಳಾ ಘಟಕದ ನಾಯಕರು, ಎಲ್ಲರೂ ಒಂದು ಅಭಿಪ್ರಾಯಕ್ಕೆ ಬಂದಿದ್ದೇವೆ. ಇವತ್ತು ಎಲ್ಲರೂ ಇಲ್ಲೇ ಇದ್ದಾರೆ. ಅದ್ದರಿಂದ ಬೆಳ್ತಂಗಡಿ ಅನಾಥ ಕ್ಷೇತ್ರವಲ್ಲ. ಶ್ರೀಮತಿ ಇಂದಿರಾ ಗಾಂಧಿ ಅವರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಿದ ಕ್ಷೇತ್ರ. ಅಲ್ಲಿ ಕಾಂಗ್ರೆಸ್ ನ ಕಾರ್ಯಕರ್ತರಿಗೆ ಏನೂ ಕೊರತೆ ಇಲ್ಲ. ಕೆಲವೊಂದು ಕಾರಣದಿಂದ ಏನೋ ಆಗಿರಬಹುದು. ನಾನು ಪಕ್ಷ ಬಿಡುವಂತಹಾ ಪ್ರಶ್ನೆ ಬಂದಿರಬಹುದು. ಅದು ಈಗ ಅಗತ್ಯ ಇಲ್ಲ. ಅದನ್ನು ನಾನು ಈಗ ವಿವರಿಸಲು‌ ಹೋಗೂದಿಲ್ಲ ಎಂದಿದ್ದಾರೆ. 

ಈ‌ ಮಧ್ಯೆ ಟಿಕೆಟ್ ಆಕಾಂಕ್ಷಿಯಾಗಿರುವ ಕೆಪಿಸಿಸಿ ಕಾರ್ಯದರ್ಶಿ, ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಅಧ್ಯಕ್ಷ ರಕ್ಷಿತ್ ಶಿವರಾಂ ಅವರು ತಾನು ಉಮೇದ್ವಾರಿಕೆ ಸಲ್ಲಿಸಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.   

ರಕ್ಷಿತ್ ಶಿವರಾಂ ಪೋಸ್ಟ್;

"ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ 2023 ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಕೆಪಿಸಿಸಿ ಸಮಿತಿಗೆ ನಾನು ಅರ್ಜಿ ಸಲ್ಲಿಸಿದ್ದೇನೆ. ಹಿಂದಿನಿಂದ ಬೆನ್ನು ತಟ್ಟುವ ಹಿರಿಯರು, ಬೆಂಬಲವಾಗಿ ನಿಲ್ಲುವ ಕಾರ್ಯಕರ್ತರು, ಹಿತೈಷಿಗಳಿಗೆ ನಾನು ಋಣಿಯಾಗಿದ್ದೇನೆ.

ಕಾಂಗ್ರೆಸ್ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರಲು ಹಾಗೂ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಎಂದಿನಂತೆ ನಿಮ್ಮೆಲ್ಲರ ಸಲಹೆ, ಸಹಕಾರ ಪ್ರೀತಿ,ಬೆಂಬಲ, ಆಶೀರ್ವಾದ ಸದಾ ಹೀಗೆ ಇರಲಿ ಎಂದು ಆಶಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ. 

ಒಟ್ಟಾರೆ ಬೆಳವಣಿಗೆಯಲ್ಲಿ ಬೆಳ್ತಂಗಡಿ ಕಾಂಗ್ರೆಸ್ ನಲ್ಲಿ ಹಿರಿಯ ತಲೆಗಳ ಮಧ್ಯೆ ಹೊಸ ಅಭ್ಯರ್ಥಿ ಕೂಡ ಇದ್ದಾರೆ ಎಂಬುದೀಗ ಸಾಬೀತಾಗಿದೆ.

----

ವರದಿ; ಅಚ್ಚು ಮುಂಡಾಜೆ

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment