ಬೆಳ್ತಂಗಡಿ: ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನೇಮಕಕ್ಕೆ ರಾಜ್ಯ ವಕ್ಫ್ ಮಂಡಳಿ ಆ.19 ರಂದು ತಡೆಯಾಜ್ಞೆ ನೀಡಿತ್ತಾದರೂ ಸದ್ರಿ ಆದೇಶವನ್ನು ರಾಜ್ಯ ಉಚ್ಚನ್ಯಾಯಾಲಯ ಆ.23 ರಂದು ತೆರವುಗೊಳಿಸಿದೆ. ಆ ಹಿನ್ನೆಲೆಯಲ್ಲಿ ಬಿ.ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರ ಅಧ್ಯಕ್ಷತೆಯಲ್ಲಿ ಈ ಹಿಂದೆ ನೇಮಕವಾಗಿದ್ದ ಜಿಲ್ಲಾ ಸಲಹಾ ಸಮಿತಿಯ ತಂಡವೇ ಮತ್ತೆ ಮುಂದುವರಿಯಲಿದೆ. ಈ ಸಮಿತಿಯಲ್ಲಿ ಸದಸ್ಯರಾಗಿರುವ ಕಾಜೂರು ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಅವರೂ ತಮ್ಮ ಸದಸ್ಯತ್ವದಲ್ಲಿ ಮತ್ತೆ ಮುಂದುವರಿಯಲಿದ್ದಾರೆ.
ಈ ವರ್ಷದ ಸಲಹಾ ಸಮಿತಿಯನ್ನು ಎಪ್ರಿಲ್ 6 ರಂದು ರಚಿಸಲಾಗಿತ್ತಾದರೂ ಬಳಿಕ ಸಮಿತಿಯನ್ನು ರಾಜ್ಯ ಹಜ್ ಮತ್ತು ವಕ್ಫ್ ಸಚಿವರ ಆಗಸ್ಟ್ 8 ರ ಉಲ್ಲೇಖಿತ ಟಿಪ್ಪಣಿಯಲ್ಲಿ, ಸದ್ರಿ ಸಲಹಾ ಸಮಿತಿಯ ವಿರುದ್ಧ ಸಾರ್ವಜನಿಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ಸಮಿತಿಗೆ ತಕ್ಷಣದಿಂದ ಜಾರಿಗೆ ಬರುವಂತೆ ತಡೆ ನೀಡಲಾಗಿದೆ ಎಂದು ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು ಆ.19ರಂದು ಹೊರಡಿಸಿದ್ದ ತಡೆ ಆದೇಶದಲ್ಲಿ ತಿಳಿಸಿದ್ದರು.
ಈ ತಡೆಯಾಜ್ಞೆ ವಿರುದ್ಧ ವಕ್ಫ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಅಲ್ಲಿ ಸದ್ರಿ ತಡೆ ಆದೇಶವನ್ನು ಆ.23 ರಂದು ಹೈಕೋರ್ಟ್ ತೆರವುಗೊಳಿಸಿದೆ.