ಬೆಳ್ತಂಗಡಿ: ಸಾಮಾಜಿಕ ಹೋರಾಟಗಾರ, ಚಿಂತಕ ಪಿ.ಡೀಕಯ್ಯ ಅವರ ನಿಗೂಢ ಸಾವಿನ ಬಗ್ಗೆ ಸಂಶಯಿಸಿ ಕುಟುಂಬಸ್ತರು ನೀಡಿರುವ ದೂರಿಗೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲು ಕ್ರಮಕೈಗೊಳ್ಳಲಿದ್ದೇನೆ ಎಂದು ಶಾಸಕ ಹರೀಶ್ ಪೂಂಜ ಭರವಸೆ ನೀಡಿದರು.
ಜು.31 ರಂದು ಪಿ ಡೀಕಯ್ಯ ಅವರಿಗೆ ನಡೆದ ಹುಟ್ಟೂರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗಿಯಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪಿ ಡೀಕಯ್ಯ ಅವರ ಜನಪರ ಚಳವಳಿ ಬಗ್ಗೆ ನೆನಪಿಸಿಕೊಂಡ ಅವರು, ಪ್ರಕರಣ ತನಿಖೆಯ ಬಗ್ಗೆ ಕುಟುಂಬದ ಸದಸ್ಯರು ಮಾಡಿದ ಮನವಿಗೆ ಅವರು ಈ ರೀತಿ ಪ್ರತಿಸ್ಪಂದಿಸಿದರು.
ನುಡಿನಮನದ ಪ್ರಧಾನ ಭಾಷಣ ಮಾಡಿದ ಹಿರಿಯ ಅಂಬೇಡ್ಕರ್ ವಾದಿ, ಪಿ.ಡೀಕಯ್ಯರವರ ಚಳುವಳಿಯ ಒಡನಾಡಿ, ಸಮತಾ ಸೈನಿಕದಳ ಸ್ಥಾಪಕ ಡಾ.ವೆಂಕಟ ಸ್ವಾಮಿ ಅವರು, ಬಹುಜನ ಸಮಾಜಕ್ಕೆ ಸೈಸಮಾಜದಲ್ಲಿ ಮೌಲ್ಯಾಧಾರಿತ ಬದಲಾವಣೆಗಾಗಿ ಚಳುವಳಿಯಲ್ಲಿ ತೊಡಗಿದ್ದ ಪಿ.ಡೀಕಯ್ಯರವರು ಅಪ್ಪಟ ಅಂಬೇಡ್ಕರ್ ವಾದಿಯಾಗಿದ್ದವರು. ಜಿಲ್ಲೆಯಲ್ಲಿ ದಲಿತರ ಮೇಲಾಗುತ್ತಿದ್ದ ಶೋಷಣೆ, ದೌರ್ಜನ್ಯ, ಅನ್ಯಾಯ, ಅಸಮಾನತೆಗಳ ವಿರುದ್ಧ ಗಟ್ಟಿ ಧ್ವನಿ ಎತ್ತಿ ಹೋರಾಡಿದ ಅವರು ದಲಿತ, ಹಿಂದುಳಿದ ಶೋಷಿತ ಸಮುದಾಯಗಳ ವಿಮೋಚನೆಗಾಗಿ ಶ್ರಮಿಸಿದವರು. ಇದೇ ಕಾರಣಕ್ಕೆ ರಾಜ್ಯಾದ್ಯಂತ ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿ ಚಳುವಳಿಯನ್ನು ಮುನ್ನಡೆಸುತ್ತಾ ಬಹುಜನ ಸಮಾಜದಲ್ಲಿ ಸೈದ್ಧಾಂತಿಕ ಧೈರ್ಯವನ್ನು ತುಂಬಿದವರು ಎಂದು ನೆನಪಿಸಿಕೊಂಡರು.
ದಲಿತ ಸಂಘರ್ಷ ಸಮಿತಿ ಹುಟ್ಟಿನ ಕಾಲದಲ್ಲಿ ಬೆಳ್ತಂಗಡಿ ತಾಲೂಕಿನ್ನೇ ಜಿಲ್ಲಾ ಕೇಂದ್ರವೆಂಬಂತೆ ಪರಿಗಣಿಸಿ ಅನೇಕ ಹೋರಾಟಗಳಿಗೆ ಅವರು ನೇತೃತ್ವವಹಿಸಿಕೊಂಡಿದ್ದು, ಸಂಘಟನಾ ಚತುರತೆ ಮತ್ತು ಜ್ಞಾನದಿಂದಾಗಿ ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡಿದ್ದರು ಎಂದರು.
ಹಿರಿಯ ಸಾಮಾಜಿಕ ಚಿಂತಕ ಲೋಲಾಕ್ಷ ಮಂಗಳೂರು ಮಾತನಾಡಿ, ಪಿ.ಡೀಕಯ್ಯ ಅವರ ಸಾವಿನ ಸುತ್ತ ಇರುವ ಸಂಶಯಗಳು ನಿವಾರಣೆಯಾಗಿ ಸಾವಿಗೆ ನ್ಯಾಯ ಸಿಗಲಿ ಎಂದರು.ಪದ್ಮುಂಜ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ನಿವೃತ್ತ ಮ್ಯಾನೇಜರ್ ತಿಮ್ಮಯ್ಯ ಗೌಡ, ಡಾ.ರಾಜಾರಾಮ್ , ಎಲ್ ಐ ಸಿ ಅಧಿಕಾರಿ, ಬಿ.ಎಸ್.ಪಿ. ರಾಜ್ಯ ಮುಖಂಡ ಕಾಂತಪ್ಪ ಆಲಂಗಾರ್, ಪ.ಜಾ., ಪ.ಪಂ. ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ನ್ಯಾಯವಾದಿ ಶಿವಕುಮಾರ್ , ಬೆಳ್ತಂಗಡಿ ಠಾಣಾ ಪೊಲೀಸ್ ಹೆಡ್ ಕಾನ್ಸ್ಟೇಬಲ್ ವೆಂಕಪ್ಪ ಪಿ.ಎಸ್., ಹಿರಿಯರಾದ ಬೀರಣ್ಣ ಸಾಧನಾ, ಅಣ್ಣು ಸಾಧನ, ಪೊಡಿಯ ಬಾಂಗೇರು, ಎಲ್ ಐ ಸಿ ಅಧಿಕಾರಿ ಮೋಹನ್ ರಾಮನಗರ, ಸಾಮಾಜಿಕ ಹೋರಾಟಗಾರ ಶೇಖರ್ ಎಲ್, ಬಾಬು ಎಂ ಬೆಳಾಲು, ಬರಹಗಾರ ಸತೀಶ್ ಕಕ್ಯಪದವು, ಬಿ.ಎಸ್.ಪಿ.ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಶ್ರೀನಿವಾಸ್ ಮುಂತಾದವರು ನುಡಿ ನಮನ ಸಲ್ಲಿಸಿದರು.
ಬಂಗಾಡಿ ಕಾನದ - ಕಟದ ಜನ್ಮಭೂಮಿ ಶೋಧನಾ ಸಮಿತಿ ಗೌರವಾಧ್ಯಕ್ಷ ವೆಂಕಣ್ಣ ಕೊಯ್ಯೂರು, ಬಿ.ಎಸ್.ಪಿ ತಾಲೂಕು ಉಸ್ತುವಾರಿ ಸಂಜೀವ ನೀರಾಡಿ ಉಪಸ್ಥಿತರಿದ್ದರು. ಪತ್ರಕರ್ತ ಅಚುಶ್ರೀ ಬಾಂಗೇರು ಕಾರ್ಯಕ್ರಮ ನಿರ್ವಹಿಸಿದರು.