ವರದಿ: ಅಚ್ಚು ಮುಂಡಾಜೆ
9449640130
--------
ಬೆಳ್ತಂಗಡಿ; ಧರ್ಮಸ್ಥಳ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರದ ಯತಿವರೇಣ್ಯರೂ ಆಗಿರುವ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳಿಂದ ಮೂರನೇ ವರ್ಷದ, 48 ದಿನಗಳ ಚಾತುರ್ಮಾಸ್ಯ ವೃತಾಚರಣೆ ಜು.13 ರಿಂದ(ಇಂದಿನಿಂದ) ಆರಂಭಗೊಳ್ಳಲಿದೆ ಎಂದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಹರೀಶ್ ಪೂಂಜ ಹೇಳಿದರು.
ನಗರದ ಪ್ರವಾಸಿ ಬಂಗಲೆಯಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಈ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ 5 ಜಿಲ್ಲೆಯಿಂದ ಭಕ್ತರು ಭಾಗವಹಿಸಲಿದ್ದಾರೆ. ಗುರುಪರಂಪರೆಯ ಕಾಲದಿಂದಲೂ ಯತಿಗಳು ಮಾಡಿಕೊಂಡು ಬಂದಿರುವ ಕಾರ್ಯಕ್ರಮ. ಶ್ರೀ ಆತ್ಮಾನಂದ ಸ್ಬಾಮೀಜಿಯವರ ಮೂಲಕ ಪ್ರಾರಂಭಗೊಂಡ ಶ್ರೀ ರಾಮಕ್ಷೇತ್ರದ ಎರಡನೇ ಪೀಠಾಧಿಪತಿಗಳಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಈ ಕಾರ್ಯಕ್ರಮದಲ್ಲಿ ತಾಲೂಕಿನ, ಜಿಲ್ಲೆಯ ಹಾಗೂ ರಾಜ್ಯದ ಭಕ್ತವೃಂದ ಹಾಗೂ ಶಿಷ್ಯವೃಂದ ಜೊತೆ ಸೇರಿ ಆಯೋಜಿಸುತ್ತಿದೆ. ಯತಿಗಳು ವೃತದಲ್ಲಿರುವ ವೇಳೆ ಅವರ ಆಶೀರ್ವಾದ ಪಡೆಯಲು ಮಾಡುವ ಕಾರ್ಯಕ್ರಮ.
ಈಗಾಗಲೇ ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಆಗಿದೆ. 81 ಗ್ರಾಮದವರೂ ಬೇರೆ ಬೇರೆ ದಿನಗಳಲ್ಲಿ ಭಾಗವಹಿಸುವ ಬಗ್ಗೆ ದಿನಾಂಕ ನಿಗದಿಯಾಗಿದೆ. ಅನೇಕ ಸುತ್ತಿನ ಸಭೆಗಳು ನಡೆದಿವೆ. ಉಡುಪಿ, ದ. ಕ, ಉತ್ತರ ಕನ್ನಡ ಶಿವಮೊಗ್ಗ, ಕೊಡಗು ಜಿಲ್ಲೆಯಿಂದಲೂ ಭಕ್ತರು ಯಾವ್ಯಾವ ದಿನಗಳಲ್ಲಿ ಭಾಗವಹಿಸುವುದೆಂದು ಈಗಾಗಲೇ ನಿರ್ಧಾರ ಆಗಿದೆ ಎಂದರು.
ಅನ್ನ ಸಂತರ್ಪಣೆಗೆ ತಾಲೂಕುವಾರು ಹೊರೆ ಕಾಣಿಕೆ;
ಕ್ಷೇತ್ರದಲ್ಲಿ 48 ದಿನಗಳ ಕಾಲ ವಿಶೇಷ ರೀತಿಯಲ್ಲಿ ಅನ್ನ ಸಂತರ್ಪಣೆ ನಡೆಯಲಿದ್ದು ಅದಕ್ಕಾಗಿ ತಾಲೂಕು ತಾಲೂಕುಗಳಿಂದ ಹೊರೆಬಕಾಣಿಕೆ ವ್ಯವಸ್ಥೆ ಮಾಡಲಾಗಿದೆ. ಸುಳ್ಯ ತಾಲೂಕಿನಿಂದ ಶಾಸಕ ಅಂಗಾರ ಅವರ ನೇತೃತ್ವದಲ್ಲಿ 15 ಕ್ವಿಂಟಾಲ್ ಅಕ್ಕಿ , ಪುತ್ತೂರು ತಾಲೂಕಿನಿಂದ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ 5 ಕ್ವಿಂಟಾಲ್ ಸಕ್ಕರೆ, ಬಂಟ್ವಾಳ ತಾಕೂಕಿನಿಂದ. ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ 25 ಡಬ್ಬಿ ಎಣ್ಣೆ, ಉಳ್ಳಾಲದಿಂದ ಸತೀಶ್ ಕುಂಪಲ ಅವರ ನೇತೃತ್ವದಲ್ಲಿ 5 ಕ್ವಿಂಟಾಲ್ ಬೆಲ್ಲ, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಅನ್ನದಾನದ ಜಿನಸಿ ಸಾಮಾಗ್ರಿ, ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ನೇತೃತ್ವದಲ್ಲಿ 10 ಕ್ವಿಂಟಾಲ್ ಅಕ್ಕಿ, ಮೂಡಬಿದ್ರೆಯಿಂದ ಶಾಸಕ ಉಮನಾಥ ಕೋಟ್ಯಾನ್ ನೇತೃತ್ವದಲ್ಲಿ 3 ಕ್ವಿಂಟಾಲ್ ಮೆಣಸು ಹೀಗೆ ಭಕ್ತರ ಮುಖಾಂತರ ಸಮರ್ಪಣೆಯಾಗಲಿದೆ. ಉಳಿದಂತರ ಇತರ ಸಾಮಾಗ್ರಿಗಳು ಬೆಳ್ತಂಗಡಿ ಕ್ಷೇತ್ರದ ಜನತೆಯಿಂದ ಯಿಂದ ವ್ಯವಸ್ಥೆಯಾಗಿದೆ. ಜಿಲ್ಲೆಯ ಜನ ಒಟ್ಟು ಸೇರಿ ಅನ್ನದಾನ ವ್ಯವಸ್ಥೆ ಮಾಡುತ್ತಿದ್ದಾರೆ.
ಶಾಶ್ವತ ಪೆಂಡಾಲ್, ವೇದಿಕೆ ನಿರ್ಮಾಣ;
ಮಠದ ಮೂಲಭೂತ ಸೌಕರ್ಯದ ಅಭಿವೃದ್ಧಿ ದೃಷ್ಟಿಯಿಂದ ಈ ವರುಷ ಕಾರ್ಯಕ್ರಮಕ್ಕೆ ಬೇಕಾದ ವಿಶಾಲ ಶಾಶ್ವತವಾದ ಪೆಂಡಾಲ್ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಊಟದ ವ್ಯವಸ್ಥೆಗೆ ಮತ್ತು ಪಾಕಶಾಲೆಗೆ ಕೂಡ ಶಾಶ್ವತ ವ್ಯವಸ್ಥೆ ಮಾಡಲಾಗುತ್ತಿದೆ. ನಿರಂತರ ಕಾರ್ಯಕ್ರಮದ ಆಯೋಜನೆ ದೃಷ್ಟಿಯಿಂದ ಅಂದಾಜು 75 ಲಕ್ಷ ರೂ. ವೆಚ್ಚದಲ್ಲಿ ಶಾಶ್ವತ ವ್ಯವಸ್ಥೆ ರೂಪಿಸಿದ್ದೇವೆ ಎಂದು ಶಾಸಕರು ತಿಳಿಸಿದರು.
ಜು.13 ರಂದು ಚಾತುರ್ಮಾಸ್ಯದ ಉದ್ಘಾಟನೆಯನ್ನು ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ
ನಳಿನ್ ಕುಮಾರ್ ಕಟೀಲ್ ನೆರವೇರಿಸಲಿದ್ದಾರೆ. ಪ್ರತಿ ದಿನ ಪಾದ ಪೂಜೆ, ಸಭಾ ಕಾರ್ಯಕ್ರಮ ನಡೆಯಲಿದ್ದು ರಾಜ್ಯ ಮುಖ್ಯಮಂತ್ರಿ ಗಳು, ಕರಾವಳಿ ಭಾಗದ ಸಚಿವರುಗಳಾದ ಅಂಗಾರ, ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಆದಿಯಾಗಿ ಸಚಿವರುಗಳನ್ನು, ಮಾಜಿ ಸಚಿವರುಗಳನ್ನು, ಜನಪ್ರತಿನಿಧಿಗಳನ್ನು ಕರೆತರುವ ಎಲ್ಲಾ ಯೋಚನೆಗಳನ್ನು ಮಾಡಲಾಗಿದೆ ಎಂದರು.
ಧಾರ್ಮಿಕ ಕಾರ್ಯಕ್ರಮ;
ಧಾರ್ಮಿಕ ಕಾರ್ಯಕ್ರಮ ನಿಮಿತ್ತ ಪ್ರತಿದಿನ ಎರಡು ಭಜನಾ ತಂಡಗಳಿಂದ ನಿರಂತರ ಭಜನೆ ನಡೆಯಲಿದೆ. ಪ್ರತಿ ಸೋಮವಾರ ಯಜ್ಞಗಳು ನಡೆಯಲಿವೆ. ಪ್ರತೀ ಶನಿವಾರ ಮತ್ತು ಆದಿತ್ಯವಾರ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಯಕ್ಷಗಾನ ನಡೆಯಲಿದೆ ಎಂದರು.
ಆರಂಭದ ದಿನವಾದ ಬುಧವಾರ ದೇವಲಿಂಗೇಶ್ವರ ದೇವಸ್ಥಾನದಿಂದ ಯತಿಗಳ ಪುರಪ್ರವೇಶ ಮೆರವಣಿಗೆ, ನಡೆಯಲಿದೆ. ಅದರ ಮೂಲಕ ಎಲ್ಲಾ ಚಟುವಟಿಕೆಗಳು ಅಧಿಕೃತವಾಗಿ ಆರಂಭಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಾತುರ್ಮಾಸ್ಯ ಆಚರಣಾ ಸಮಿತಿ ಪ್ರಧಾನ ಸಂಚಾಲಕ ಜಯಂತ ಕೋಟ್ಯಾನ್, ಸಂಚಾಲಕ ಸೀತಾರಾಮ ಬಿ.ಎಸ್, ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು ಉಪಸ್ಥಿತರಿದ್ದರು.