Posts

ನೆರೆಪೀಡಿತ ಕೊಳಂಬೆಯ 12 ಮನೆಗಳ ಪ್ರವೇಶೋತ್ಸವ ಅದ್ದೂರಿ ಕಾರ್ಯಕ್ರಮ

3 min read

ಬೆಳ್ತಂಗಡಿ; 2019 ರ ನೆರೆಪೀಡಿತ ಚಾರ್ಮಾಡಿ ಗ್ರಾಮದ ಕೊಳಂಬೆಯ 12 ಮನೆಗಳನ್ನು ಸರಕಾರದ ಅನುದಾನ, ದಾನಿಗಳ ನೆರವು ಮತ್ತು ಸ್ವಯಂಸೇವಕರ  ಜೊತೆಯಾಗುವಿಕೆಯೊಂದಿಗೆ ನಿರ್ಮಿಸಲಾದ 12 ಮನೆಗಳ ಪ್ರವೇಶೋತ್ಸವ ಕಾರ್ಯಕ್ರಮ ಮೇ. 8 ರಂದು ಅದ್ದೂರಿಯಾಗಿ ಜರುಗಿತು.

ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಉದ್ಘಾಟನೆ ಗೊಳಿಸಿದರು. 


ಬಳಿಕ ಮಾತನಾಡುತ್ತಿದ್ದ ಅವರು, ಬದುಕು ಕಟ್ಟೋಣ ಬನ್ನಿ ತಂಡ ಕೊಳಂಬೆಯಲ್ಲಿ ಮಾಡಿರುವ ಕಾರ್ಯ ದೇಶದಲ್ಲೇ‌ ವಿನೂತನವಾದದ್ದು. ಇದು ಪ್ರಧಾನಿ ಮೋದೀಜಿಯವರು ತಮ್ಮ ಮನ್ಕಿ ಬಾತ್‌ನಲ್ಲಿ ಇದನ್ನು ಉದ್ಧರಿಸುವಂತಾಗಬೇಕು ಎಂಬುದು ನನ್ನ ಇರಾದೆ. ಇಲ್ಲಿ‌ ಸಾವಿರಾರು ಕಾರ್ಯಕರ್ತರ ಶ್ರಮದ ಬೆವರು ಇಂದು ಪುಷ್ಪಗಳಾಗಿ ಪರಿವರ್ತಿತವಾಗಿ ಪರಿಮಳ ಸೂಸುತ್ತಿದೆ. ರಾಜೇಶ್ ಪೈ ಮತ್ತು ಮೋಹನ್ ಕುಮಾರ್ ಎಂಬಿಬ್ಬರು ಮಿತ್ರರು ಜೊತೆ ಸೇರಿ ಮಾಡಿದ ಈ ಆತ್ಮವಿಶ್ವಾಸ ತುಂಬುವ ಕಾರ್ಯ ಅದ್ಭುತ. ಸ್ವಂತ ಉದ್ಯಮ ಮತ್ತು‌ ಬದುಕಿಗಿಂತ ಸಮಾಜದ ನೋವಿಗೆ ಈ‌ ರೀತಿ‌ ಸ್ಪಂದಿಸಿದಾಗ ಅದರಿಂದ ಸಿಗುವ ಆನಂದ ವರ್ಣಿಸಲು ಅಸಾಧ್ಯ. ಬದುಕು ಕಟ್ಟೋಣ ಈ‌ ತಂಡದ ಸೇವಾ ಕಾರ್ಯ‌ ಸಾಂಕ್ರಾಮಿಕದಂತೆ ನಾಡಿನುದ್ದಗಲ ಹಬ್ಬಲಿ. ಇಂತಹಾ ವಿಕೋಪಗಳು ಬಂದಾಗ ಅದನ್ನು ಮೀರಿ‌ ನಿಂತು ಮರು ನಿರ್ಮಾಣ ಮಾಡುವ ತಾಕತ್ತು ನಮ್ಮಲ್ಲಿದೆ ಎಂಬುದನ್ನು ಇಲ್ಲಿ ನಿರೂಪಿಸಲಾಗಿದೆ. ಅದಕ್ಕೆ ಪೂರಕವಾಗಿ ಕೆಲಸ ಮಾಡುವ ಹರೀಶ್ ಪೂಂಜ ರಂತಹಾ ಶಾಸಕರು ಇದ್ದಾರೆ ಎಂಬುದೇ ಹೆಮ್ಮೆಯ ಸಂಗತಿ. ಇಂತಹಾ ಶಾಸಕರು ಎಲ್ಲ‌ಕಡೆ ಇದ್ದಾಗ ಮೋದೀಜಿಯವರ ಭಾರತದ ಪರಿಕಲ್ಪನೆ ಈಡೇರುವುದರಲ್ಲಿ‌ ಸಂದೇಹವಿಲ್ಲ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜಾ ವಹಿಸಿದ್ದರು. ಆರ್‌ಎಸ್‌ಎಸ್ ನಮಗೆ ನೀಡಿದ‌ ಚಿಂತನೆಯಂತೆ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ತತ್ವದಡಿ ರಾಜೇಶ್ ಪೈ ಮತ್ತು ಮೋಹನ್ ಕುಮಾರ್ ಅವರು ಜೋಡೆತ್ತುಗಳಾಗಿ  ಇಲ್ಲಿ ಇಡೀ ದೇಶ- ಜಗತ್ತಿಗೆ ಪ್ರೇರಣೆಯಾಗುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಗೋವು ಮತ್ತು ಕೃಷಿಯನ್ನು ಆಧರಿಸಿ ನಮ್ಮ ಬದುಕು ಮುನ್ನಡೆಯುವ ಚಿಂತನೆ ಎಲ್ಲರ ಮನದಲ್ಲಿ ಮೂಡಿದರೆ ಮಾತ್ರ ಪರಿವರ್ತನೆ ಸಾಧ್ಯ. ಅದಕ್ಕೆ ಪ್ರೇರಣೆ ನೀಡಲು ಸೂಲಿಬೆಲೆ ಅವರನ್ನು ಇಲ್ಲಿ ಕರೆಸಿದ್ದೇವೆ. ಈ ತಾಲೂಕಿನ ಸಮಗ್ರ ಅಭಿವೃದ್ಧಿಗೆ ನೆರೆಯೂ ಒಂದು ಕಾರಣವಾಗಿದೆ. ಅಂದು ಒಬ್ಬಂಟಿಯಾಗಿ ರಾಜ್ಯ‌ ತಿರುಗಾಡಿದ ಮುಖ್ಯಮಂತ್ರಿ‌ ಯಡಿಯೂರಪ್ಪ ಅವರು ಕುಕ್ಕಾವಿಗೆ ಬಂದಿದ್ದಾಗ ಇಡೀ ರಾಜ್ಯಕ್ಕೇ ಅನ್ವಯವಾಗುವಂತೆ, ನೆರೆಯಲ್ಲಿ‌‌‌ ಮನೆ ಕಳೆದುಕೊಂಡಿರುವವರಿಗೆ 5 ಲಕ್ಷ ರೂ. ಪರಿಹಾರ ಕೊಡುವುದಾಗಿ ಘೋಷಿಸಿದ್ದರು. ಆ ಮೊತ್ತ ಇಲ್ಲಿನ ಫಲಾನುಭವಿಗಳಿಗೂ ಬಂದಿದೆ‌. ಅವರು ನೆರೆಯ ಕಾರಣಕ್ಕಾಗಿ ನಮ್ಮ ತಾಲೂಕಿಗೆ 500 ರಿಂದ 600 ಕೋಟಿ ರೂ. ಹೆಚ್ಚುವರಿಯಾಗಿ ಅನುದಾನ ಒದಗಿಸಿಕೊಟ್ಟಿದ್ದಾರೆ. ದಾನಿಗಳ ತಂಡ ಕಟ್ಟಿ "ಕಾಳಜಿ‌ ರಿಲೀಫ್ ಫಂಡ್" ಕೊಟ್ಟ ಏಕೈಕ ತಾಲೂಕು ಬೆಳ್ತಂಗಡಿ. ಕೊಳಂಬೆಯ ಮಂದಿ ತಮ್ಮ‌ಮನೆಗಳಲ್ಲಿ‌ ಪ್ರತಿದಿನ ದೇವರಿಗೆ ದೀಪ‌ ಇಡುವಾದ ರಾಜೇಶ್ ಪೈ ಮತ್ತು ಮೋಹನ್ ಕುಮಾರ್ ಸಹೋದರರಿಗೆ ಪ್ರಾರ್ಥನೆ ಸಲ್ಲಿಸಬೇಕು. ಆಗ ಅವರಿಗೆ ಇನ್ನಷ್ಟು ಸೇವಾ ಮನೋಶಕ್ತಿ ಬಂದು ಆ ಮೂಲಕ ತಾಲೂಕಿಗೇ ಶಕ್ತಿ‌ ದೊರೆಯುತ್ತದೆ ಎಂದರು. ಈ‌ ಇಬ್ಬರೂ ಸಹೋದರರು ಮಾಡಿದ ಸೇವೆಗಾಗಿ ಇಡೀ ತಾಲೂಕಿನ ಜನತೆಯ ಪರವಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದರು. ಅತಿಥಿಗಳಾಗಿದ್ದ ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸೇವಾ ಪ್ರಮುಖ್ ಸುಬ್ರಾಯ ನಂದೋಡಿ ಶುಭಕೋರಿದರು.



ಸಮಾರಂಭದಲ್ಲಿ ವಿಧಾನ ಪರಿಷತ್ ಶಾಸಕ ಕೆ ಪ್ರತಾಪ್‌ಸಿಂಹ ನಾಯಕ್‌, ರೋಟರಿ ಕ್ಲಬ್ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ, ಶಶಿ ಕೆಟರಿಂಗ್ ಸರ್ವಿಸಸ್ ಪ್ರೈ. ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ  ಶಶಿಧರ ಶೆಟ್ಟಿ ಗುರುವಾಯನಕೆರೆ, ಚಾರ್ಮಾಡಿ ಗ್ರಾ.ಪ‌ಂ ಅಧ್ಯಕ್ಷ ಕೆ.ವಿ ಪ್ರಸಾದ್, ಮುಂಡಾಜೆ ಗ್ರಾ.ಪಂ ಅಧ್ಯಕ್ಷೆ ರಂಜಿನಿ ಮತ್ತು ನೆರಿಯ ಗ್ರಾ.ಪಂ ಅಧ್ಯಕ್ಷೆ ವಸಂತಿ ಭಾಗಿಯಾಗಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್, ಸೇವೆಗಾಗಿ ಇಲ್ಲಿ‌ಕೆಲಸ ಆರಂಭಿಸಿದಾಗ ನಮಗೆ ಅನೇಕ ಟೀಕೆಗಳು ಎದುರಾದವು. ಆದರೆ ಅದೆಲ್ಲವನ್ನೂ ಮೆಟ್ಟಿ ನಿಂತು ಇಲ್ಲಿನ ಕುಟುಂಬಗಳ ಬದುಕು ಕಟ್ಟುವಲ್ಲಿ ನಮ್ಮದೇ ಆದ ಸೇವೆ ನೀಡಿದ್ದೇವೆ. ಇದಕ್ಕಾಗಿ ನಮ್ಮ ಜೊತೆ ಕೈ ಜೋಡಿಸಿದ ಶಾಸಕರು, ಸಂಘ ಸಂಸ್ಥೆಯವರು ಹಾಗೂ ದಾನಿಗಳು, ಜೊತೆಗೆ ಸಾವಿರಾರು ಸ್ವಯಂಸೇವಕರು ಅಭಿನಂದನಾರ್ಹರು ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ಅಳವಡಿಸಿದ್ದ ಡಿಜಿಟಲ್ ಪರದೆಯಲ್ಲಿ ಯು ಪ್ಲಸ್ ಸಂಯೋಜಿಸಿದ ಕೊಳಂಬೆಯ ಅಂದಿನ‌ ನೆರೆ ಮತ್ತು ಆ ಬಳಕದ ಕ್ರಾಂತಿ‌ವರೆಗಿನ ವೀಡಿಯೋ ಡಾಕ್ಯುಮೆಂಟರಿ ಪ್ರದರ್ಶಿಸಲಾಯಿತು.‌ಅದನ್ನು ವೀಕ್ಷಿಸಿದ ಸಭೆಯಲ್ಲಿದ್ದ ಮಂದಿಯ ಕಣ್ಣಾಲಿಗಳು ತೇವಗೊಂಡವು.

ಸನ್ಮಾನ;

ಕೊಳಂಬೆ ಮರು ನಿರ್ಮಾಣದಲ್ಲಿ ಸಹಕಾರಿಯಾದ ಡಿ.ಎಂ.ಸಿ ಕಂಸ್ಟ್ರಕ್ಷನ್ಸ್ ವಿಭಾಗದ ಇಂಜಿನಿಯರ್ ಯಶೋಧರ ಪೂಜಾರಿ, ಸಿವಿಲ್ ಗುತ್ತಿಗೆದಾರ ಅಂಬರೀಶ್ ಬೆಳ್ತಂಗಡಿ, ಮೇಸ್ತ್ರಿ ಗಣೇಶ್ ಕುಲಾಲ್, ಪೈಂಟರ್ ಪ್ರತೀಕ್ ನಾಯ್ಕ ಇವರನ್ನು ಸನ್ಮಾನಿಸಲಾಯಿತು. 

ಬದುಕು ಕಟ್ಟೋಣ ತಂಡದಿಂದ ಸೂಲಿಬೆಲೆ ಮತ್ತು ಶಾಸಕರನ್ನು ಗೌರವಿಸಲಾಯಿತು. ಕೊಳಂಬೆ ನಾಗರಿಕರ ಪರವಾಗಿ ಶಾಸಕ ಹರೀಶ್ ಪೂಂಜ, ಬದುಕು ಕಟ್ಟೋಣ ಬನ್ನಿ ತಂಡದ ಮುಖ್ಯಸ್ಥರಾದ ರಾಜೇಶ್ ಪೈ ಮತ್ತು ಮೋಹನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಎಂ ಶಶಿಧರ ಕಲ್ಮಂಜ, ‌ಶ್ರೀಧರ ಮರಕಡ, ತಿಮ್ಮಪ್ಪ ನಾಯ್ಕ, ಶ್ರೀಧರ ಕಲ್ಮಂಜ ಮತ್ತು ರಾಘವೇಂದ್ರ ಕಲ್ಮಂಜ ಅವರನ್ನು ಗುರುತಿಸಲಾಯಿತು. ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಸ್ಮರಣಿಕೆ ನೀಡಲಾಯಿತು.

ಚಾರ್ಮಾಡಿ ಗ್ರಾ.ಪಂ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಸ್ವಾಗತಿಸಿದರು. ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಎಂ.ಡಿ ಜನಾರ್ದನ ಅವರು ಹೆಗ್ಗಡೆಯವರ ಸಂದೇಶ ವಾಚಿಸಿದರು. 

ಬದುಕು ಕಟ್ಟೋಣ ಬನ್ನಿ ತಂಡದ ಇನ್ನೋರ್ವ ಸಂಚಾಲಕ ರಾಜೇಶ್ ಪೈ  ವಂದನಾರ್ಪಣೆಗೈದರು. ಸ್ಮಿತೇಶ್ ಎಸ್ ಬಾರ್ಯ, ತಿಮ್ಮಯ್ಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದ ಅಂಗವಾಗಿ ಶನಿವಾರ ರಾತ್ರಿಯೇ ಎಲ್ಲ ಮನೆಗಳ ವಾಸ್ತು ಹೋಮ‌ ಸೇರಿದಂತೆ ಧಾರ್ಮಿಕ ವಿಧಿಗಳು ಆರಂಭವಾದವು. ಮಧ್ಯಾಹ್ನ2500 ರಷ್ಟು ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. 

----

ವರದಿ; ಅಚ್ಚು ಮುಂಡಾಜೆ

9449640130

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment