ಬೆಳ್ತಂಗಡಿ; ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಮಹಿಳಾ ಸವಲೀಕರಣ ಉದ್ದೇಶದಿಂದ ದೀರ್ಘ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿರುವ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಲೋಕೇಶ್ವರೀ ವಿನಯಚಂದ್ರ ಅವರಿಗೆ ಬಂಟ್ವಾಳದ ಕೈಕಂಬ ಸರಿದಂತರ ಪ್ರಕಾಶನ ಸಂಸ್ಥೆ ಕೊಡಮಾಡುವ ಸರಿದಂತರ ಪ್ರಶಸ್ತಿ ನೀಡಿ ಗೌರವಿಸಿದೆ.
ಡಿ.26 ರಂದು ನಮ್ಮ ಮನೆ ತಮ್ಯಾಪ್ರಾಶ ಇಲ್ಲಿ ನಡೆದ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಅವರನ್ನು ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಎ.ವಿ ನಾರಾಯಣ ವಹಿಸಿದ್ದರು. ಕಾರ್ಯಕ್ರಮದಲ್ಲಿ "ಧರ್ಮ -ಕರ್ಮ" ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ. ಶ್ರೀಶ ಕುಮಾರ್ ಎಂ.ಕೆ, ಅಖಿಲ ಕರ್ನಾಟಕ ಹಿರಿಯಡ್ಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೈಯೂರು ನಾರಾಯಣ ಭಟ್, ಸರಿದಂತರ ಪ್ರಕಾಶನದ ಸಂಚಾಲಕ ರಾಜಮಣಿ ರಾಮಕುಂಜ, ಗೌರವ ಸಲಹೆಗಾರ ಅರ್.ಎಸ್ ರಾಮಮೂರ್ತಿ ಭಟ್ ಮೊದಲಾದ ಗಣ್ಯರು ಭಾಗಿಗಳಾಗಿದ್ದರು.
ಲೋಕೇಶ್ವರೀ ವಿನಯಚಂದ್ರ ಅವರು ಕಡಿರುದ್ಯಾವರದ ವಿದ್ಯಾ ಸರಸ್ವತಿ ಮಹಿಳಾ ಮಂಡಲದ ಸ್ಥಾಪಕ ಅಧ್ಯಕ್ಷರಿಂದ ಮೊದಲ್ಗೊಂಡು ಸುಮಾರು ಮೂರು ದಶಕಗಳಿಂದ ಈಗಲೂ ಅಧ್ಯಕ್ಷರಾಗಿಯೇ ಮುಂದುವರಿಯುತ್ತಿದ್ದಾರೆ. ಅಲ್ಲದೆ ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರೀಯವಾಗಿ, ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದಾರೆ.