Posts

ಆನೆ ಹಾವಳಿ ತಡೆಗೆ ಪೂರಕವಾಗಿ ರೋಟರಿ ಸಂಸ್ಥೆಯಿಂದ ಅರಣ್ಯದಲ್ಲಿ 9.50 ಕೋಟಿ ಬಿದಿರಿನ ಗಿಡದ ಬೀಜ ಬಿತ್ತನೆ || ರೋಟರಿ ರಾಜ್ಯಪಾಲ ರವೀಂದ್ರ ಭಟ್

2 min read


ಬೆಳ್ತಂಗಡಿ: ಆನೆಗಳಿಗೆ ಅರಣ್ಯದೊಳಗೆ ಆಹಾರದ ಕೊರತೆ ಎದುರಾಗಿದ್ದು ಅವುಗಳು ನಾಡಿಗೆ ದಾಳಿ ಇಡುತ್ತಿದೆ. ಆ ನಿಟ್ಟಿನಲ್ಲಿ ಅವುಗಳಿಗೆ ಆಹಾರಕ್ಕೆ ಪೂರಕವಾಗಿ ರೋಟರಿ ಸಂಸ್ಥೆಯ ವತಿಯಿಂದ ಅರಣ್ಯದೊಳಗೆ ಬಿದಿರಿನ ಹಿಂಡುಗಳು ಹುಟ್ಟಿ ಬರುವಂತೆ ಒಟ್ಟು 9.50 ಕೋಟಿ ಬಿದಿರಿನ ಗಿಡದ ಬೀಜ ಬಿತ್ತನೆ ಮಾಡಲಾಗಿದೆ ಎಂದು ರೋಟರಿ ಕ್ಲಬ್ ಜಿಲ್ಲಾ ರಾಜ್ಯಪಾಲ ರವೀಂದ್ರ ಭಟ್ ಹೇಳಿದರು.

ಕಾಶಿಬೆಟ್ಟು ಅರಳಿ ರಸ್ತೆಯಲ್ಲಿರುವ ರೋಟರಿ ಸುವರ್ಣ ಸೌಧದ ರಮಾನಂದ ಸಾಲಿಯಾನ್ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.

ಹಿಂದೆಲ್ಲಾ ಉತ್ತರ ಕರ್ನಾಟಕ ಪ್ರಾಂತ್ಯಗಳಲ್ಲಿ ಅತೀ ಹೆಚ್ಚು ಕಂಡು ಬರುತ್ತಿದ್ದ ಆನೆ ಹಾವಳಿಯಂತಹಾ ಘಟನೆಗಳು ಇತ್ತೀಚೆಗೆ ಕರಾವಳಿ ಪ್ರದೇಶದಲ್ಲೂ ಅಧಿಕಗೊಂಡಿದೆ. ಇಲ್ಲಿನ ಕೃಷಿಕರು ಇದರಿಂದ ಭಾರೀ ನಷ್ಟವನ್ನನುಭವಿಸುತ್ತಿದ್ದು, ಕಾಡಿನಲ್ಲಿ ಬಿದಿರಿನ ಬೆಳೆ ಸಹಿತ ಕೆಲವು ಅವುಗಳಿಗೆ ಬೇಕಾದ ಆಹಾರ ಬೆಳೆಗಳು ನಾಶವಾಗಿ ಹೋಗಿರುವುದೇ ಕಾರಣ ಎಂದು ತಿಳಿದು ಬೇಂಬೋ ಬಿತ್ತನೆ ಯೋಜನೆ ಜಾರಿಗೆ ತರಲಾಗಿದೆ. ಇದರಲ್ಲಿ 10 ಶೇ. ಗಿಡಗಳು ಮಾತ್ರ ಹುಟ್ಟಿಬಂದರೂ 9.50 ಲಕ್ಷ ಗಿಡಗಳು ಬರಲಿದೆ ಎಂಬ ವಿಶ್ವಾಸ ನಮ್ಮದು ಎಂದರು.

116 ವರ್ಷಗಳ ಇತಿಹಾಸವಿರುವ ರೋಟರಿ ಸೇವಾ ಸಂಸ್ಥೆಯಲ್ಲಿ 4 ರೆವೆನ್ಯೂ ಜಿಲ್ಲೆಗಳನ್ನೊಳಗೊಂಡಿರುವ ನಮ್ಮ ರೋಟರಿ ಜಿಲ್ಲೆಯಲ್ಲಿ 90 ಕ್ಲಬ್‌ಗಳಿವೆ. ಒಟ್ಟು 3600 ಸದಸ್ಯರಿದ್ದಾರೆ. ಭಾರತದಲ್ಲಿ 1.60 ಲಕ್ಷ ಸದಸ್ಯರನ್ನೊಳಗೊಂಡಿದ್ದು ಜಗತ್ತಿನಲ್ಲಿ 12 ಲಕ್ಷ ಸದಸ್ಯರನ್ನು ಹೊಂದಿದೆ. ನಮ್ಮ ಸದಸ್ಯರು ಸಮಾಜಕ್ಕಾಗಿ ಸಮಯ, ಕೌಶಲ್ಯ, ಸಂಪನ್ಮೂಲ, ಮತ್ತು ಹಣವನ್ನು ಸೇವೆಯಾಗಿ ಸಮರ್ಪಿಸುಸುತ್ತಿದ್ದಾರೆ. ನಮ್ಮಲ್ಲಿರುವ ಪ್ರತೀ ಕ್ಲಬ್ಬ್ ಗಳು ಸರಾಸರಿ ವಾರ್ಷಿಕವಾಗಿ 55 ರಿಂದ 60 ಲಕ್ಷ ರೂ. ಗಳ ಸಾಮಾಜಿಕ ಸೇವೆ ಕೈಗೊಳ್ಳುತ್ತಿದ್ದಾರೆ. ಇದು ನಮ್ಮ ಜಿಲ್ಲೆಯಲ್ಲೇ ಪರಿಗಣಿಸಿದರೆ ಒಟ್ಟು 50 ರಿಂದ 60ಕೋಟಿ ರೂ.ಗಳ ಸೇವೆ ನಡೆಯುತ್ತಿದೆ. ನಮ್ಮದೇನಿದ್ದರೂ ಲೋಕಾರ್ಪಣೆಗೊಳ್ಳುವ ಸೇವೆಗಳಾಗಿದ್ದು ಇದರಲ್ಲಿ ನಮಗೆ ಯಾವುದೂ ಇಲ್ಲ ಎಂಬುದು ಗಮನಾರ್ಹ. 

ಗಿಡಗಳ ನಾಟಿ, ಶಿಕ್ಷಣ ಪ್ರೋತ್ಸಾಹ, ದತ್ತು ಸ್ವೀಕಾರ, ಆರೋಗ್ಯ ಸೇವೆ, ಡಯಾಲಿಸಿಸ್ ಘಟಕಗಳ ಸ್ಥಾಪನೆ, ಬ್ಲಡ್ ಬ್ಯಾಂಕ್ ಮೂಲಕ ರಕ್ತದಾನ ಶಿಬಿರ, ಹೀಗೆ ಬಹುವಿಧ ಸೇವೆ ನಡೆಯುತ್ತಿದೆ. ನಮ್ಮ ಸದಸ್ಯರೇ ಸರಾಸರಿ 400ರಿಂದ 500 ಯುನಿಟ್ ರಕ್ತ ಸಂಘ್ರಹಿಸಿ ನೀಡುತ್ತಿದ್ದು ನಮ್ಮ ಜಿಲ್ಲೆಯಲ್ಲೇ ಇದರ ಪ್ರಮಾಣ ಸಾವಿರಾರು ಯುನಿಟ್‌ಗಳಾಗುತ್ತವೆ ಎಂದರು. 

ನಾಯಕತ್ವ ಗುಣ ಬೆಳೆಸುವುದು, ಸೇವೆ ಮಾಡುವುದು ನಮ್ಮ ಉದ್ದೇಶ. ಆ ನಿಟ್ಟಿನಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಈಗಿನ ಮಂಡಳಿಯವರು ಈಗಾಗಲೇ 500 ರಷ್ಟು ಸೇವಾ ಯೋಜನೆ ಮಾಡಿದ್ದು, ಮಾದರಿಯಾಗಿದ್ದಾರೆ. ಶೈಕ್ಷಣಿಕ ಪ್ರೋತ್ಸಾಹದಡಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಪರೀಕ್ಷಾ ಪೂರ್ವ ತಯಾರಿಗಾಗಿ ಸರಕಾರಿ ಮತ್ತು ಅನುದಾನಿತ ಶಾಲೆಗಳ 5ಲಕ್ಷದಷ್ಟು ವಿದ್ಯಾರ್ಥಿಗಳಿಗೆ 2.85ಲಕ್ಷ ವಿಜ್ಞಾನ, ಇಂಗ್ಲೀಷ್ ಮತ್ತು ಗಣಿತ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಒಂದೇ ದಿನ 10.66 ಲಕ್ಷ ಮಂದಿಯ ಬಿಪಿ ಮತ್ತು ಶುಗರ್ ಟೆಸ್ಟ್ ಹಮ್ಮಿಕೊಳ್ಳುವ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಮಾಡಿದ್ದೇವೆ. ಪೋಲಿಯೋ ಮುಕ್ತತೆಗಾಗಿ ರೋಟರಿ ಅಮೋಲಾಗ್ರ ಸೇವೆ ಸಲ್ಲಿಸಿದ್ದು ಪ್ರಸ್ತುತ ಭಾರತ ಸೇರಿದಂತೆ ಹಲವು ರಾಷ್ಟಗಳನ್ನು ಪೋಲಿಯೋ ಮುಕ್ತ ರಾಷ್ವ್ರವಾಗಿಸಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶದಂತೆ ಒಂದು ವೇಳೆ ಈ ಅಭಿಯಾನ ನಡೆಯದೇ ಇರುತ್ತಿದ್ದ ನಮ್ಮ ದೇಶದ 10 ಮಂದಿಯಲ್ಲಿ 3 ಮಂದಿ ಪೋಲಿಯೋ ಪೀಡಿತರಾಗಿರುತ್ತಿದ್ದರು ಎಂಬ ವಾತಾವರಣದಿಂದ ನಾವು ಮುಕ್ತರಾಗಿದ್ದು ಇದಕ್ಕಾಗಿ ಭಾರತ ಸರಕಾರ ಕೂಡ ನಮ್ಮ ಜೊತೆ ಕೈಜೋಡಿಸುತ್ತಿದೆ. ಕಳೆದ ಕೋವಿಡ್ ಸಂದರ್ಭ ಪ್ರಧಾನ ಮಂದಿ ಪರಿಹಾರ ನಿಧಿಗೆ ರೋಟರಿ ಸಂಸ್ಥೆ 380 ಕೋಟಿ ರೂ.ಗಳ ಆರ್ಥಿ ಕ ನೆರವು ನೀಡಿದ್ದು, ಆ ಕಾರಣಕ್ಕಾಗಿ ಇತ್ತೀಚೆಗೆ ಪ್ರಧಾನಿ ಮೋದಿ ಅವರು ನಮ್ಮ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ 45 ನಿಮಿಷಗಳ ಮಾತುಕತೆ ನಡೆಸಿರುವುದು ಉಲ್ಲೇಖನೀಯ ಎಂದರು. ಪ್ರಸ್ತುತ ದೇಶದಲ್ಲಿರುವ72 ಶೇ. ಅನಕ್ಷರತೆಯ ಪ್ರಮಾಣವನ್ನು ಕಡಿಮೆಗೊಳಿಸಲು ರೋಟರಿ "ಈಚ್ 1 ಟೀಚ್ 1" ಯೋಜನೆ ಹಾಕಿಕೊಂಡಿದ್ದು ಇದರಲ್ಲಿ ನಾವು ಸಫಲತೆ ಸಾಧಿಸಲಿದ್ದೇವೆ ಎಂದರು. ಬೆಳ್ತಂಗಡಿ ಘಟಕವು ಸದಸ್ಯರ ಸಹಭಾಗಿತ್ವದಿಂದಲೇ ಸುಮಾರು 2 ಕೋಟಿ ರೂ. ಮೊತ್ತದ ಸ್ವಂತ ಕಟ್ಟಡ ನಿರ್ಮಿಸಿಕೊಂಡಿದ್ದು ಇದರ ಮೊದಲ ಮಹಡಿಯಲ್ಲಿ ಸದ್ಯದಲ್ಲೇ ಒಕೇಶನಲ್ ಟ್ರೈನಿಂಗ್ ಪ್ರಾರಂಭಿಸುವ ಯೋಜನೆ ಹಾಕಿಕೊಂಡಿದೆ. ಇದರಲ್ಲಿ ಆರೋಗ್ಯ ಪೂರಕ ದೃಷ್ಟಿಕೋನದಿಂದ ಟೆನ್ನಿಸ್ ಕೋರ್ಟ್ ಕೂಡ ಅಳವಡಿಸಿದೆ. ಉಜಿರೆ ಹಿಂದೂ ರುದ್ರಭೂಮಿಗೆ 1.90 ಲಕ್ಷ ರೂ. ವೆಚ್ಚದಲ್ಲಿ ಶೀಥಲೀಕೃತ ಶವ ಸಂರಕ್ಷಣಾ ಘಟಕ ಕೊಡುಗೆ ನೀಡುತ್ತಿದೆ. ಮುಗುಳಿಯಲ್ಲಿ ಸರಕಾರಿ ಶಾಲೆ ದತ್ತು ಪಡೆಯುತ್ತಿರುವುದು, ಕೊಳಂಬೆಯ ಪ್ರವಾಹ ಪೀಡಿತ ಪ್ರದೇಶದ 12 ಮನೆಗಳಿಗೆ ತಲಾ 30 ಸಾವಿರ ರೂ. ಗಳಂತೆ ಉಚಿತ ವಿದ್ಯುದೀಕರಣ ಒದಗಿಸಿಕೊಡುತ್ತಿರುವುದು ಜಿಲ್ಲೆಗೇ ಮಾದರಿಯಾಗಿದೆ ಎಂದರು.  


ಪತ್ರಿಕಾಗೋಷ್ಟಿಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ, ಸಹಾಯಕ ಗವರ್ನರ್ ಸುರೇಂದ್ರ ಬಿ.ಕೆ, ಝೋನಲ್ ಲೆಫ್ಟಿನೆಂಟ್ ಬಿ.ಕೆ ಧನಂಜಯ ರಾವ್, ತಾ. ಘಟಕದ ಕಾರ್ಯದರ್ಶಿ ಅಬೂಬಕ್ಕರ್, ನಿಯೋಜಿತ ಅಧ್ಯಕ್ಷೆ ಮನೋರಮಾ ಭಟ್, ಕಾರ್ಯದರ್ಶಿ ರಕ್ಷಾ ರಾಘ್ನೇಶ್ ಉಪಸ್ಥಿತರಿದ್ದರು.

----

ಅಚ್ಚು ಮುಂಡಾಜೆ, ಪ್ರಿನ್ಸಿಪಲ್ ಎಡಿಟರ್, ಲೈವ್ ಮೀಡಿಯಾ ಟೀಮ್: 9449640130

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment