ಬೆಳ್ತಂಗಡಿ; ಕಲ್ಮಂಜ ಗ್ರಾಮದ ನಿಡಿಗಲ್ ನದಿ ತಟದಲ್ಲಿ ಮರ್ಕಝ್ ಸಂಸ್ಥೆಯ ಆರ್ಸಿಎಫ್ಐ ನಿಧಿ ಹಾಗೂ ಊರವರ ಪೂರಕ ದೇಣಿಗೆಯ ಸಹಯೋಗದೊಂದಿಗೆ ನಿರ್ಮಾಣವಾದ ನೂತನ ಮಸ್ಜಿದ್ ಇದರ ಉದ್ಘಾಟನೆಯು ನ.18 ರಂದು ಮಧ್ಯಾಹ್ನ ನೆರವೇರಲಿದೆ.
ಇದಕ್ಕೂ ಮುನ್ನಾ ದಿನ ನ.17 ರಂದು ರಾತ್ರಿ ಹಮ್ಮಿಕೊಳ್ಳಲಾಗಿರುವ "ಮಸ್ಜಿದ್ಗೆ ಸರ್ವಧರ್ಮೀಯರ ಸೌಹಾರ್ದ ಭೇಟಿ" ಕಾರ್ಯಕ್ರಮ ವೈಶಿಷ್ಟ್ಯತೆ ಸಾರಲಿದೆ.
ಕರ್ನಾಟಕ ವಕ್ಫ್ ಮಡಳಿಗೆ ನೊಂದಾವಣೆಗೊಂಡು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನಿಡಿಗಲ್ ಮಸ್ಜಿದ್ ನ ಹಳೆಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ ಕಾರಣಕ್ಕೆ ಮಸ್ಜಿದ್ ಗೌರವಾಧ್ಯಕ್ಷ ಸಯ್ಯಿದ್ ಕಾಜೂರು ತಂಙಳ್ ಅವರ ವಿಶೇಷ ಪದರಯತ್ನದ ಫಲವಾಗಿ ನೂತನ ಮಸ್ಜಿದ್ ತಲೆ ಎತ್ತಿ ನಿಂತಿದೆ. ಆಡಳಿತ ಸಮಿತಿ,ಯಂಗ್ ಮೆನ್ಸ್ ಹಾಗೂ ಜಮಾಅತ್ ಸಮಿತಿಯವರ ತೀವ್ರ ಮುತುವರ್ಜಿಯಿಂದ ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿ ನಡೆದಿದ್ದು ಅಂತಿಮ ಹಂತ ತಲುಪಿದೆ.
ನೂತನ ಮಸ್ಜಿದ್ ನ ಉದ್ಘಾಟನೆಯು ನವಂಬರ್ 18 ರಂದು ಮಧ್ಯಾಹ್ನ 12.30 ಕ್ಕೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ನೆರವೇರಿಸಲಿದ್ದಾರೆ. ಮಸ್ಜಿದ್ನ ವಕ್ಫ್ ವಿಧಿಯನ್ನು ಖಾಝಿ ಸಯ್ಯಿದ್ ಕೂರತ್ ತಂಙಳ್ ನೆರವೇರಿಸಲಿದ್ದಾರೆ. ಈ ಸಂದರ್ಭ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್, ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್, ಎಸ್ಎಮ್ಎ ರಾಜ್ಯಾಧ್ಯಕ್ಷ ಸಯ್ಯಿದ್ ಮಲ್ಜಅ ತಂಙಳ್, ಸಯ್ಯಿದ್ ಮನ್ಶರ್ ತಂಙಳ್, ಸಯ್ಯಿದ್ ಬೆಳಾಲ್ ತಂಙಳ್, ಸಯ್ಯಿದ್ ವಾದಿ ಇರ್ಫಾನ್ ತಂಙಳ್, ಕೃಷ್ಣಾಪುರ ಖಾಝಿ ಇಬ್ರಾಹಿಂ ಮುಸ್ಲಿಯಾರ್, ಮಸ್ಜಿದುತ್ತಕುವಾ ಪಂಪ್ವೆಲ್ ಪ್ರ.ಕಾರ್ಯದರ್ಶಿ ಮಮ್ತಾಝ್ ಅಲಿ ಕೃಷ್ಣಾಪುರ, ಸಹಿತ ಹಲವಾರು ಮಂದಿ ಸಯ್ಯಿದರುಗಳು, ಸಾದಾತುಗಳು, ಉಲಮಾ ಉಮರಾ ನಾಯಕರುಗಳು, ಆಸುಪಾಸಿನ ಜಮಾಅತ್ ಪ್ರಮುಖರು, ಸುನ್ನೀ ಸಂಘ ಕುಟುಂಬದ ನಾಯಕರುಗಳು ಭಾಗವಹಿಸಲಿರುವರು.
ಕಾರ್ಯಕ್ರಮದ ಪ್ರಯುಕ್ತ ನ.17 ರಂದು ರಾತ್ರಿ6.30 ರಿಂದ 8.30 ರ ವರೆಗೆ ಮಸ್ಜಿದ್ ವೀಕ್ಷಣೆಗಾಗಿ ಸರ್ವ ಧರ್ಮೀಯರ ಸೌಹಾರ್ದ ಭೇಟಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ಮತ್ತು ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ವಸಂತ ಬಂಗೇರ, ಕಲ್ಮಂಜ ಗ್ರಾ.ಪಂ ಅಧ್ಯಕ್ಷ ಶ್ರೀಧರ ಎಂ ಮತ್ತು ಸದಸ್ಯರುಗಳು, ಕೃಷಿಕ ಹುಣಿಪ್ಪಾಜೆ ಗುತ್ತು ರತನ್ ಕುಮಾರ್ ಜೈನ್ ಸಹಿತ ಊರಿನ ವಿವಿಧ ಧಾರ್ಮಿಕ ಕ್ಷೇತ್ರಗಳ ಗಣ್ಯರುಗಳು ಭಾಗವಹಿಸಲಿದ್ದಾರೆ.
ನ.19 ರಂದು ಕಾಜೂರು ತಂಙಳ್ ನೇತೃತ್ವದಲ್ಲಿ ಶುಕ್ರವಾರದ ಪ್ರಥಮ ಖತುಬಾ ಪಾರಾಯಣ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.