ಬೆಳ್ತಂಗಡಿ : ಕಳೆದ ಹತ್ತು ವರ್ಷಗಳಿಂದ ಉಜಿರೆ ಜನಾರ್ದನ ದೇವಸ್ಥಾನದ ಮುಂಭಾಗದಲ್ಲಿರುವ ಶಾರದಾ ಮಂಟಪದಲ್ಲಿ, ಕೂಲಿ ಕೆಲಸ ಮಾಡಿಕೊಂಡಿದ್ದ ಉಡುಪಿ ಜಿಲ್ಲೆಯವರಾದ(ಕುಟುಂಬಸ್ಥರು ಯಾರು ಇಲ್ಲ) ಅನಾಥ ವ್ಯಕ್ತಿಯಾದ ಬಾಬು(70) ಎಂಬವರು ಕಳೆದ ವಾರ ಮಂಗಳೂರಿನ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು ಅವರ ಅಂತ್ಯಸಂಸ್ಕಾರ ವನ್ನು ಗೌರವಯುತವಾಗಿ ನಡೆಸಿಕೊಡುವ ಮೂಲಕ ಬದುಕು ಕಟ್ಟೋಣ ಬನ್ನಿ ತಂಡ ಉಜಿರೆ ಮಾದರಿಯೋಗ್ಯ ಕೆಲಸ ಮಾಡಿದೆ.
ಆರಂಭದಲ್ಲಿ ಬಾಬು ಅವರ ಬಗ್ಗೆ ಮಾಹಿತಿ ಇಲ್ಲದ ಬಜ್ಪೆ ಠಾಣಾ ಪೊಲೀಸರು ಅವರ ವಸ್ರ್ತದ ಕಾಲರ್ನಲ್ಲಿದ್ದ ಟೈಲರ್ ಟ್ಯಾಗ್ ನಲ್ಲಿ ಉಜಿರೆ ಎಂದು ಇದ್ದುದರಿಂದ ಜಾಲತಾಣದಲ್ಲಿ ಅಪರಿಚಿತ ಮೃತದೇಹದ ಗುರುತುಪತ್ತೆಗೆ ಪ್ರಕಟಣೆ ಹೊರಡಿಸಿದ್ದರು. ಈಗ ಬಜ್ಪೆ ಠಾಣೆಯಲ್ಲಿ ಈ ಹಿಂದಿನ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಅವರು ಕರ್ತವ್ಯದಲ್ಲಿದ್ದು ಅವರು ಬೆಳ್ತಂಗಡಿ ವಾಟ್ಸ್ ಆಪ್ ಗ್ರೂಪ್ಗಳಲ್ಲೂ ಸುದ್ದಿ ಹಂಚಿಕೊಂಡಿದ್ದರು. ಈ ವೇಳೆ ಅವರನ್ನು ಕಳೆದ ಇಷ್ಟೂ ವರ್ಷಗಳಿಂದ ಬಲ್ಲ ಉಜಿರೆಯವರು ಅವರನ್ನು ಗುರುತಿಸಿದರು.
ಮೃತ ಬಾಬು ಅವರ ಬಗ್ಗೆ ಕಾಳಜಿ ಇಟ್ಟು ಉಜಿರೆಯ ಉದ್ಯಮಿ ಲಕ್ಷ್ಮಣ ಸಪಲ್ಯ ಅವರು ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಿಗೆ ಮಾಹಿತಿ ನೀಡಿದ್ದು ನಂತರ ಇವರಿಗೆ ಹಿಂದೂ ಸಂಪ್ರದಾಯದಂತೆ ದಫನ ಮಾಡಲು ತೀರ್ಮಾನಿಸಿದರು.
ಈ ಬಗ್ಗೆ ಅಗುವ ಖರ್ಚುಗಳನ್ನು ಭರಿಸುವುದಾಗಿ ಭರವಸೆಯೂ ಲಭಿಸಿತು. ಬದುಕು ಕಟ್ಟೋಣ ಬನ್ನಿ ತಂಡದ ನೇತೃತ್ವದಲ್ಲಿ ಉದ್ಯಮಿ ಹಾಗೂ ತಂಡದ ಗೌರವ ಸಲಹೆಗಾರರಾದ ಲಕ್ಷ್ಮಣ ಸಪಲ್ಯ ಅವರ ಮಾರ್ಗದರ್ಶನದಲ್ಲಿ ಕಲ್ಮಂಜ ಗ್ರಾ.ಪಂ ಅಧ್ಯಕ್ಷ ಶ್ರೀಧರ್ ಎಮ್ ಕಲ್ಮಂಜ, ವಿ ರಾಘವೇಂದ್ರ ಉಂಕ್ರೋಟ್ಟು, ಸಂತೋಷ್ ಕೊಳಂಬೆ, ಮುಖೇಶ್ ಗೌಡ ಕಲ್ಮಂಜ, ಹರೀಶ್ ದೇವಾಡಿಗ ಕಲ್ಮಂಜ ,ಪ್ರತೀಕ್ ಕೋಟ್ಯಾನ್ ಹಾಗೂ ಪ್ರಶಾಂತ್ ಉಜಿರೆ, ಚರಣ್ ಮತ್ತಿತರರು ಶನಿವಾರ ಬೆಳಗ್ಗೆ ಮಂಗಳೂರಿಗೆ ತೆರಳಿ ಮೃತದೇಹದ ಎಲ್ಲಾ ಕಾನೂನು ಪ್ರಕ್ರಿಯೆ ಮುಗಿಸಿಕೊಂಡು ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ದೇಹವನ್ನು ಪಡೆದು ಎಸ್.ಡಿ.ಎಮ್ ಮುಕ್ತಿ ವಾಹನದ ಮೂಲಕ ಸಂಜೆ ಉಜಿರೆಯ ಹಳೆಪೇಟೆಯಲ್ಲಿರುವ ರುದ್ರ ಭೂಮಿಗೆ ತರುವ ವ್ಯವಸ್ಥೆ ಕೈಗೊಂಡರು.
ಮುಂದಕ್ಕೆ ಇದೇ ಬಾಬು ಅವರ ಮರಣೋತ್ತರ ತಿಥಿ ಕಾರ್ಯಗಳನ್ನೂ ಸಂಪ್ರದಾಯದಂತೆ ಇದೇ ಬದುಕು ಕಟ್ಟೋಣ ಬನ್ನಿ ತಂಡದ ನೇತೃತ್ವದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಒಟ್ಟಾರೆಯಾಗಿ ಬದುಕು ಕಟ್ಟೋಣ ಬನ್ನಿ ತಂಡ ಇಂತಹದ್ದೇ ಜನಪರ ಕಾರ್ಯಗಳ ಮೂಲಕ ಜನರ ಮನಸ್ಸಲ್ಲಿ ಶಾಶ್ವತ ಸ್ಥಾನ ಪಡೆದಿದೆ. ಈ ತಂಡಕ್ಕೆ ಸಾಮೂಹಿಕ ನಾಯಕತ್ವವಿದ್ದು, ಉಜಿರೆಯ ಖ್ಯಾತ ಉದ್ಯಮಿಗಳಾದ ಲಕ್ಷ್ಮೀ ಗ್ರೂಪ್ಸ್ ಸಂಸ್ಥೆಯ ಮೋಹನ್ ಕುಮಾರ್ ಮತ್ತು ಸಂಧ್ಯಾ ಟ್ರೇಡರ್ಸ್ ಸಂಸ್ಥೆಯ ರಾಜೇಶ್ ಪೈ ಅವರು ಮುಂಚೂಣಿ ನೇತೃತ್ವ ನೀಡುತ್ತಿದ್ದಾರೆ. ಅವರ ಕೈ ಕೆಳಗೆ ತುರ್ತು ಸಂದರ್ಭಗಳಲ್ಲಿ ಸನ್ನದ್ಧರಾಗಿರುವಂತೆ ಯುವಕರ ಪಡೆಯನ್ನೇ ಅವರು ಕಟ್ಟಿಕೊಂಡಿದ್ದಾರೆ. ವಿಪತ್ತು ನಿರ್ವಹಣೆ ಸಹಿತ ತಮ್ಮ ಸೇವೆಗೆ ಬೇಕಾದ ಎಲ್ಲಾ ಅಗತ್ಯ ಪರಿಕರಗಳು, ಸಮವಸ್ರ್ತ ಎಲ್ಲವನ್ನೂ ಅವರ ತಂಡ ಹೊಂದಿದೆ.