ಬೆಳ್ತಂಗಡಿ; ಕಮ್ಯುನಿಷ್ಟರು ಮತ್ತು ಕಾಂಗ್ರಸ್ಸಿಗರೇ ಕಾರ್ಮಿಕರ ಹಿತ ಕಾಪಾಡುವವರು ಎಂದು ಹೇಳಿಕೊಂಡು ಬರಲಾಗುತ್ತಿತ್ತು. ಆದರೆ ಎಲ್ಲರೂ ಒಟ್ಟಾಗಿ ಹಂಚಿಕೊಂಡು ಬದುಕುವುದೇ ಭಾರತೀಯ ಚಿಂತನೆ. ಕಾರ್ಮಿಕ, ಮಾಲಿಕ, ಗ್ರಾಹಕರ ಯಶಸ್ಸು ಎಲ್ಲಿದೆಯೋ ಅಲ್ಲಿ ಯಶಸ್ಸು ಇದೆ ಎಂದು ಆರ್ಎಸ್ಎಸ್ ಪ್ರಾಂತ ಕಾರ್ಯಕಾರಿಣಿಯ ಆಮಂತ್ರಿಸ ಸದಸ್ಯ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿಯ ಸ್ಥಳಾಂತರಗೊಂಡ ನೂತನ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜ ಮಾತನಾಡಿ, ತಾಲೂಕಿನಲ್ಲಿ ಸಚಿವ ಶಿವರಾಮ ಹೆಬ್ಬಾರ್ ಅವರಲ್ಲಿ ವಿನಂತಿಸಿ 10 ಸಾವಿರ ಕಿಟ್ ಗಳನ್ನು ಬಿಎಮ್ಎಸ್ ಮೂಲಕ ವಿತರಿಸಿದ್ದೇವೆ. ಮುಂದಕ್ಕೆ ಖಾಸಗಿ ಚಾಲಕರ ಶ್ರೇಯೋಭಿವೃದ್ದಿ ಮಂಡಳಿ ಬೇಡಿಕೆಯನ್ನು ಶೀಘ್ರದಲ್ಲೇ ಮುಖ್ಯಮಂತ್ರಿಯ ಬಳಿ ಆಗ್ರಹಿಸುತ್ತೇನೆ. ಈಗಾಗಲೇ ಸಚಿವರು ಎರಡು ಕೋಟಿ ರೂ.ಅನುದಾನ ಭರವಸೆ ನೀಡಿದ್ದು, ಒಂದು ತಿಂಗಳೊಳಗಾಗಿ ಜಾಗ ಗುರುತಿಸಿ ತಾಲೂಕಿನಲ್ಲಿ ಕಾರ್ಮಿಕ ಭವನವನ್ನೂ ನಿರ್ಮಿಸಲಾಗುವುದು ಎಂದು ಘೋಷಿಸಿದರು.
ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ನಗರ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವಾ, ಉಪಾಧ್ಯಕ್ಷ ಜಯಾನಂದ ಗೌಡ, ಬಿಎಮ್ಸ್ ನಿಕಟಪೂರ್ವ ರಾಜ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ, ರಾಜ್ಯ ಉಪಾಧ್ಯಕ್ಷ ಭಗವಾನ್ದಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಭಾಗಿಯಾಗಿ ಶುಭ ಕೋರಿದರು
ವೇದಿಕೆಯಲ್ಲಿ ಸುರೇಶ್ ದಯಾನಂದ್, ನಾಹಲಗರಾಜ ಮಾಚಾರು, ಜಿ.ಕೆ ಶರ್ಮ ಕೊಯ್ಯೂರು, ಚಂದ್ರಕಲಾ ಸಿ.ಕೆ, ಶಶಿಕಲಾ ವಿ.ಎಸ್ ಕೊಯ್ಯೂರು, ಯೋಗೀಶ್ ಪುಂಜಾಲಕಟ್ಟೆ, ಮನೋಜ್ ಕಾಡಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಕಾನರ್ಪ ಪ್ರಸ್ತಾವನೆಗೈದು ಸ್ವಾಗತಿಸಿದರು.
ಜನಾರ್ದನ ಕಾನರ್ಪ ನಿರೂಪಿಸಿದರು. ಸ್ನೇಹಾ ಪ್ರಾರ್ಥನೆ ಹಾಡಿದರು. ತಾಲೂಕಿನ ಬಿಜೆಪಿ ಪ್ರಮುಖರು, ಸಂಘ ಪರಿವಾರ ಸಂಘಟನೆಗಳ ಪ್ರಮುಖರು ಭಾಗಿಯಾಗಿದ್ದರು.
ಬಿಎಮ್ಎಸ್ ಸಂಘಟನೆ:
1955 ರಲ್ಲಿ ಆರ್ಎಸ್ಎಸ್ ತತ್ವ ಸಿದ್ಧಾಂತದಡಿ ಕಾರ್ಮಿಕ ಸದಸ್ಯರ ಅನುಕೂಲಕ್ಕಾಗಿ ಆರಂಭವಾಗಿರುವ ಭಾರತೀಯ ಮಜ್ದೂರ್ ಸಂಘ ಇದರ ಕಾರ್ಯಚಟುವಟಿಕೆಗಳನ್ನು ಮೂರು ವರ್ಷಗಳ ಹಿಂದೆ ಬೆಳ್ತಂಗಡಿಯಲ್ಲಿ ಪ್ರಾರಂಭಿಸಲಾಗಿದ್ದು,
ಕಾರ್ಮಿಕರ ಹಿತರಕ್ಷಣೆ ಹಾಗೂ ಕಾರ್ಮಿರನ್ನು ಸದೃಡರನ್ನಾಗಿಸಲು, ರಾಷ್ಟ ನಿರ್ಮಾಣದ ಚಿಂತನೆಯೊಂದಿಗೆ ಒಗ್ಗೂಡಿಸುವ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದ ದತ್ತೋಪಂಥ ಥೇಂಗಡಿಜೀಯವರು ಭಾರತೀಯ ಮಜ್ದೂರ್ ಸಂಘವನ್ನು ಸ್ಥಾಪನೆ ಮಾಡಿದ್ದಾರೆ. ಮಜ್ದೂರ್ ಸಂಘವು ರಾಷ್ಟ್ರೀಯತೆ, ದೇಶಾಭಿಮಾನ, ಕಾರ್ಮಿಕರ ಬದುಕನ್ನು ಸುಧಾರಿಸುವ ವಿಚಾರದಡಿಯಲ್ಲಿ ಕಾರ್ಮಿಕರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪ್ರಪಂಚದ ಅತೀ ಹೆಚ್ಚು ಕಾರ್ಮಿಕ ಸದಸ್ಯರನ್ನೊಳಗೊಂಡ ದೊಡ್ಡ ಕಾರ್ಮಿಕ ಸಂಘಟನೆಯಾಗಿದೆ. ೫೦೦೦ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ವರ್ಗ/ಸಂಘಗಳ ಮಾತೃಸಂಸ್ಥೆಯಾಗಿ ಕಾರ್ಯನಿರ್ವಹಿಸಿ ಕಾರ್ಮಿಕರ ಏಳಿಗೆಗಾಗಿ ದುಡಿಯುತ್ತಿದೆ. ತಾಲೂಕಿನಲ್ಲಿ ಬಿ.ಎಂ.ಎಸ್ ತಾಲೂಕು ಸಮಿತಿಯನ್ನು ರಚನೆ ಮಾಡಿ ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿರುವಲ್ಲಿ ಇತರ ಕಡೆಗಿಂತಲೂ ಮುಂಚೂಣಿಯಲ್ಲಿದ್ದು ಭಾರತೀಯ ಮಜ್ದೂರು ಸಂಘದ ಅಧೀನದಲ್ಲಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಕಾಮಗಾರಿ ಮಜ್ದೂರ್ ಸಂಘ ತಾಲೂಕು ಸಮಿತಿ ನೇತೃತ್ವದಲ್ಲಿ ತಾಲೂಕಿನಲ್ಲಿ ಸುಮಾರು ೫೦೦೦ಕ್ಕಿಂತಲೂ ಕಟ್ಟಡ ಕಾರ್ಮಿಕರನ್ನು ಕರ್ನಾಟಕ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೊಂದಾವಣೆ ಮಾಡಿಸಿ ಅವರಿಗೆ ವಿವಿಧ ಸೌಲಭ್ಯವನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಸಂಘದ ಸದಸ್ಯ ಕಟ್ಟಡ ಕಾರ್ಮಿಕರಿಗೆ ಪ್ರಸ್ತುತ ವರ್ಷ ಸ್ಕಾಲರ್ಶಿಪ್, ವಿವಾಹ ಸಹಾಯಧನ, ಮರಣ ಪರಿಹಾರ ಹಾಗೂ ಕೋವಿಡ್ ಸಹಾಯಧನ ಸೇರಿದಂತೆ ಸುಮಾರು ೧ಕೋಟಿ ೫೦ಲಕ್ಷಕ್ಕಿಂತಲೂ ಅಧಿಕ ಸಹಾಯಧನವನ್ನು ಸರಕಾರದಿಂದ ಒದಗಿಸಿಕೊಡಲಾಗಿದೆ. ರಬ್ಬರ್ ಟ್ಯಾಪರ್ಸ್ ಕಾರ್ಮಿಕರನ್ನು ಸಂಘಟಿಸಲು ರಬ್ಬರ್ ಟ್ಯಾಪರ್ಸ್ ಮಜ್ದೂರ್ ಸಂಘವನ್ನು ರಾಜ್ಯದಲ್ಲೇ ಪ್ರಥಮ ಬಾರಿಗೆ ಬೆಳ್ತಂಗಡಿಯಲ್ಲಿ ಪ್ರಾರಂಭಿಸಿದ್ದು ವಿವಿಧ ತಾಲೂಕಿನಲ್ಲಿ ತಾಲೂಕು ಸಮಿತಿ ರಚಿಸಿ ಕಾರ್ಮಿಕರನ್ನು ಸಂಘಟಿಸುವ ದೃಷ್ಠಿಯಲ್ಲಿ ಈಗಾಗಲೇ ಹಲವು ತಾಲೂಕು ಸಮಿತಿಗಳನ್ನು ರಚಿಸಲಾಗಿದೆ.
ತಾಲೂಕಿನ ಬೀಡಿ ಕಾರ್ಮಿಕರ ಪರವಾಗಿ ಕೆಲಸ ಮಾಡಲು ಬೀಡಿ ಮಜ್ದೂರ್ ಸಂಘವನ್ನು, ಮೋಟಾರ್ ರಂಗದಲ್ಲಿ ದುಡಿಯುತ್ತಿರುವ ಕಾರ್ಮಿಕರ ಪರವಾಗಿ ಕೆಲಸ ಮಾಡಲು ಮೋಟಾರ್ ಮಜ್ದೂರ್ ಸಂಘವನ್ನು ರಚನೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿರುವ ಅಸಂಘಟಿತ ಕಾರ್ಮಿಕರನ್ನು ಸಂಘಟಿಸುವ ದೃಷ್ಠಿಯಲ್ಲಿ ಬಿ.ಎಂ.ಎಸ್ ಕೆಲಸ ಮಾಡಲಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಇತರ ಬೇರೆ ಬೇರೆ ವಿಭಾಗಗಳಲ್ಲಿ ಗೌರವ ಸಂಭಾವನೆಯಲ್ಲಿ ದುಡಿಯುವ ಜನರ ಪರವಾಗಿ ಕೆಲಸ ಮಾಡುವವರನ್ನು ಸಂಘಟಿಸುವ ಉದ್ದೇಶ ಹೊಂದಿದೆ.
ಈಗಾಗಲೇ ತಾಲೂಕಿನ ಅನೇಕ ಗ್ರಾಮಗಳಲ್ಲಿ ಬಿ.ಎಂ.ಎಸ್ ಗ್ರಾಮ ಸಮಿತಿಗಳನ್ನು ರಚನೆ ಮಾಡಿ ಮಾಹಿತಿ ಕಾರ್ಯಗಾರಗಳನ್ನು ಹಮ್ಮಿಕೊಂಡಿದ್ದು ಸರಕಾರದ ಆಹಾರ್ ಕಿಟ್, ಸ್ಯಾನಿಟರಿ ಕಿಟ್, ಆರ್ಥಿಕ ಪ್ಯಾಕೇಜ್, ಹಾಗೂ ಇನ್ನಿತರ ಸೌಲಭ್ಯಗಳನ್ನು ಕಾರ್ಮಿಕರಿಗೆ ವಿತರಣೆ ಮಾಡಲಾಗಿದೆ.
ತಾಲೂಕಿನ ಕಾರ್ಮಿಕರಿಗೆ ಉತ್ತಮ ಸೇವೆಯನ್ನು ನೀಡಿ ಕಾಮಿಕರನ್ನು ಇನ್ನಷ್ಟು ಬಲಿಷ್ಠವಾಗಿ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ಬಿಎಮ್ಎಸ್ ಅಧ್ಯಕ್ಷ ಉದಯ ಬಿ.ಕೆ ಹೇಳಿದರು.