ಬೆಳ್ತಂಗಡಿ; ಇಲ್ಲಿನ ಬೆಳ್ತಂಗಡಿ- ಬಂಟ್ವಾಳ ಗಡಿ ಗ್ರಾಮವಾದ ಪಾಂಡವರಕಲ್ಲು ಪ್ರದೇಶದಲ್ಲಿ ಶನಿವಾರ ಸಂಜೆಯ ಗಾಳಿ ಮಳೆಗೆ ಸಿಡಿಲು ಮಿಂಚಿನ ಅಬ್ಬರಕ್ಕೆ ಹಲವು ಮನೆಗಳಿಗೆ ಹಾನಿಯಾಗಿದೆ.
ಕಂದಾಯ ಇಲಾಖೆ ಲೆಕ್ಕಾಚಾರ ಪ್ರಕಾರ ಸುಮಾರು 60ಕ್ಕೋ ಹೆಚ್ಚು ಮನೆಗಳಿಗೆ ತೀವ್ರ ಮತ್ತು ಭಾಗಶಃ ಹಾನಿ ಸಂಭವಿಸಿದೆ.
ಹಲವು ಮನೆಗಳ ಹೆಂಚುಗಳು ನೆಲಕ್ಕಪ್ಪಳಿಸಿ ಪುಡಿಪುಡಿಯಾಗಿದೆ. ತಗಡು ಮತ್ತು ಸಿಮೆಂಟ್ ಮೇಲ್ಚಾವಣಿಗಳು ಕಿತ್ತುಬಂದಿದ್ದು ಅಪಾರ ನಷ್ಟ ಉಂಟಾಗಿದೆ.
ಮರಗಳು ಮತ್ತು ರೆಂಬೆಲು ಮನೆಯ ಮೇಲ್ಛಾವಣಿ ಮೇಲೆಯೇ ಬಿದ್ದುದರಿಂದ ಕೆಲವು ಮನೆಗಳ ಗೋಡೆಗೂ ಹಾನಿಯಾಗಿದೆ. ಸಿಡಿಲು ಮತ್ತು ಮಿಂಚಿನ ಅಬ್ಬರಕ್ಕೆ ವಿದ್ಯುತ್ ವಯರ್, ಫ್ಯಾನ್, ಮಿಕ್ಸಿ ಇತ್ಯಾಧಿ ಉಪಕರಣಗಳು ಸುಟ್ಟುಕರಕಲಾಗಿದೆ. ಕೆಲವು ಮನೆಯಲ್ಲಿ ವಯರಿಂಗ್ ಕಿತ್ತು ಬಂದಿದ್ದು ಲಕ್ಷಾಂತರ ರೂ . ನಷ್ಟ ಸಂಭವಿಸಿದೆ.
ಹಾನಿಗೊಳಗಾದ ಪ್ರದೇಶಕ್ಕೆ ಎಸ್ಡಿಪಿಐ ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ನಿಯೋಗ, ಪಿಎಫ್ಐ ಸಂಘಟನೆಯ ಸ್ವಯಂಸೇವಕ ರ ತಂಡ ಧಾವಿಸಿ ಪರಿಸರ ಸ್ವಚ್ಛತೆ, ಕುಸಿದ ಮನೆಗಳ ಸ್ವಚ್ಚತೆ, ಮರಗಳ ತೆರವು ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ನಿಯೋಗ ಭೇಟಿ ನೀಡುವವರೆಗೆ ಆ ಪ್ರದೇಶದಲ್ಲಿ ಅಷ್ಟೊಂದು ಗಂಭೀರ ಹಾನಿಯಾಗಿದ್ದರೂ ಪ್ರದೇಶಕ್ಕೆ ಕಂದಾಯ ಇಲಾಖೆ, ಸ್ಥಳೀಯಾಡಳಿತ ಆರಂಭಿಕ ಸ್ಪಂದನ ನೀಡದ ಬಗ್ಗೆ ನಿಯೋಗದಲ್ಲಿದ್ದ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ತಹಶಿಲ್ದಾರ್ ಅವರನ್ನು ಮತ್ತು ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಮುಖಂಡರು ಸಕಾಲಿಕ ಸ್ಪಂದನ ಆಗುವಂತೆ ಕ್ರಮ ಕೈಗೊಂಡರು.
ಕೆಲವೊಂದು ಸಂತ್ರಸ್ತರ ಮನೆಯ ಒಳಹೋಗುವ ಸ್ಥಿತಿಯೂ ಇಲ್ಲದ್ದರಿಂದ ಅವರಿಗೆ ಕಾಳಜಿ ಕೇಂದ್ರವನ್ನೂ ತೆರೆಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಬಳಿಕ ತಮ್ಮ ಪಕ್ಷ ಮತ್ತು ಸಂಘಟನೆ ಕಡೆಯಿಂದ ತಾತ್ಕಾಲಿಕವಾಗಿ ಕಾಳಜಿ ಕೇಂದ್ರ ತೆರೆಯಲಾಯಿತು.
ಈ ನಿಯೋಗದಲ್ಲಿ ಎಸ್ಡಿಪಿಐ ದ.ಕ ಜಿಲ್ಲಾ ಸಮಿತಿ ಸದಸ್ಯ ಯೂಸೂಫ್ ಆಲಡ್ಕ, ಬಂಟ್ವಾಳ ವಿಧಾನಸಭಾ ಸಮಿತಿ ಅಧ್ಯಕ್ಷ ಶಾಹುಲ್ ಎಸ್ಹೆಚ್, ಕಾರ್ಯದರ್ಶಿ ಮೊನಿಶ್ ಅಲಿ, ಬೆಳ್ತಂಗಡಿ ವಿಧಾನಸಭಾ ಸಮಿತಿ ಅಧ್ಯಕ್ಷ ನಿಸಾರ್ ಕುದ್ರಡ್ಕ, ಕಾರ್ಯದರ್ಶಿ ನಿಝಾಮ್ ಗೇರುಕಟ್ಟೆ, ಉಪಾಧ್ಯಕ್ಷರಾದ ಹನೀಫ್ ಪುಂಜಾಲಕಟ್ಟೆ, ಕಾವಳ ಪಡೂರು ಗ್ರಾಮ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಮದ್ದ, ಪಿಎಫ್ಐ ಬೆಳ್ತಂಗಡಿ ಜಿಲ್ಲಾಧ್ಯಕ್ಷ ಮುಸ್ತಫಾ ಜಿ.ಕೆರೆ ಹಾಗೂ ಇನ್ನಿತರ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.