ಬೆಳ್ತಂಗಡಿ; ಮುಂಡಾಜೆ ಗ್ರಾ.ಪಂ ಅಧ್ಯಕ್ಷರ ಮಗಳನ್ನು ಅಪಹರಣ ಮಾಡಲಾಗಿದೆ ಎಂಬ ಶಂಕೆಯ ಬಳಿಕ ಇದೀಗ ಆಕೆಯನ್ನು ಕರೆದುಕೊಂಡುಹೋದ ರಿಕ್ಷಾ ಉಪ್ಪಿನಂಗಡಿಯದ್ದು ಎಂದು ಖಚಿತಗೊಂಡಿದೆ.
ತಿಂಗಳ ಹಿಂದೆ ರಬ್ಬರ್ ಟ್ಯಾಪಿಂಗ್ಗೆಂದು ಚೆನ್ನಿಗುಡ್ಡೆ ಶ್ರೀ ಶಾರದಾನಗರಕ್ಕೆ ಆಗಮಿಸಿದ್ದ ಕುಟುಂಬವೊಂದರ ಮನೆ ಖಾಲಿ ಮಾಡುವ ಉದ್ದೇಶಕ್ಕಾಗಿ ಅವರು ಉಪ್ಪಿನಂಗಡಿಯಿಂದ ಬಾಡಿಗೆ ರಿಕ್ಷಾ ಮಾಡಿಕೊಂಡು ಬಂದಿದ್ದರೆಂದು ವಿಚಾರಣೆ ವೇಳೆ ತಿಳಿದುಬಂದಿದೆ. ಆದರೆ ದಾರಿ ಕೇಳುವ ಉದ್ದೇಶಕ್ಕೆ ಏಕಾಏಕಿ ಮಗುವನ್ನು ರಿಕ್ಷಾದಲ್ಲಿ ಹತ್ತಿಸಿಕೊಂಡು ಹೋಗಿ ಸಂದೇಹ ಬರುವಂತೆ ಮಾಡಿದ ಬಗ್ಗೆ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ತಿಂಗಳ ಹಿಂದೆ ಟ್ಯಾಪಿಂಗ್ ಕುಟುಂಬವೊಂದು ಮುಂಡಾಜೆಯ ತೋಟವೊಂದಕ್ಕೆ ಬಂದಿದ್ದರು. ವ್ಯವಹಾರ ಸರಿಯಾಗದ್ದರಿಂದ ಅವರು ಮನೆ ಸಾಮಾಗ್ರಿ ಕೊಂಡೊಯ್ಯಲೆಂದು ಬಾಡಿಗೆ ರಿಕ್ಷಾ ಮಾಡಿಕೊಂಡು ಮತ್ತೆ ಇತ್ತ ಬಂದಿದ್ದರು.
ವಿಳಾಸ ಹೇಳುವ ವೇಳೆ "ಆಚಾರಿ ಕೊಟ್ಟಿಗೆ ಬಳಿ" ಎಂದು ಚಾಲಕನಿಗೆ ಹೇಳಿದ್ದು, ಚಾಲಕ ರಸ್ತೆ ಅರಿಯದೆ ದೇವಿಗುಡಿ ರಸ್ತೆಯಲ್ಲಿ ಹತ್ತಿಬಂದಿದ್ದರು. ಈ ವೇಳೆಮನೆ ತೋರಿಸಲೆಂದು 10 ವರ್ಷದ ಮಗುವನ್ನು ಹೆತ್ತವರ ಅನುಮತಿ ಇಲ್ಲದೆ ರಿಕ್ಷಾದಲ್ಲಿ ಹತ್ತಿಸಿಕೊಂಡು ಹೋಗಿದ್ದರು. ಆದರೆ ಅವರು ಹೋದ ರಸ್ತೆ ಸರಿ ಇಲ್ಲದ್ದರಿಂದ ಟಯರ್ ಕೆಸರಿನಲ್ಲಿ ಹೂತು ಸಮಸ್ಯೆಯಾಗಿತ್ತು. ಮಗುವನ್ನು ಕರೆದುಕೊಂಡು ಹೋದವರು ತಾವು ಯಾರೆಂದು ಸ್ಪಷ್ಟಪಡಿಸದೆ ಸಂದೇಹ ಬರುವಂತೆ ವರ್ತಿಸಿರುವುದು ಸರಿಯಲ್ಲ ಎಂದು ಜನ ಅಭಿಪ್ರಾಯಿಸಿದ್ದಾರೆ.
ಜನರ ಸ್ಪಂದನೆಗೆ ಅಧ್ಯಕ್ಷರಿಂದ ಕೃತಜ್ಞತೆ;
ಮಗು ಅಪಹರಣ ಆಗಿದೆ ಎಂದು ವರದಿಗಳು ಪ್ರಕಟವಾಗುತ್ತಿರುವಂತೆ ಅನೇಕ ಮಂದಿ ಕರೆ ಮಾಡಿ ವಿಚಾರಿಸಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಆಘಾತಕ್ಕೊಳಗಾಗಿ ಏನು ಮಾಡಬೇಕೆಂದೇ ಅರಿತಿರಲಿಲ್ಲ. ಆದರೆ ಎಲ್ಲವೂ ತಿಳಿಯಾದ ಬಳಿಕ ಸುಮ್ಮನಾಗಿದ್ದೆವು. ಇದೀಗ ಸತ್ಯ ವಿಚಾರ ತಿಳಿದಿದೆ. ಇಂತಹಾ ಸಂದರ್ಭ ನನಗೆ ಎದುರಾದ ವಿಚಾರ ಅರಿತು ಧೈರ್ಯ ತುಂಬಿದ, ಹಾಗೂ ಸ್ಪಂದಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಮುಂಡಾಜೆ ಗ್ರಾ.ಪಂ ಅಧ್ಯಕ್ಷರು ತಿಳಿಸಿದ್ದಾರೆ.