ಬೆಳ್ತಂಗಡಿ; ತಾಲೂಕಿನ ಹಿರಿಯ ಮಸ್ಜಿದ್ಗಳಲ್ಲಿ ಒಂದಾದ ಮೊಟ್ಟೆತಡ್ಕ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಕಿಲ್ಲೂರು ಇದರ ಆಡಳಿತಾಧಿಕಾರಿಯಾಗಿ ಬೆಳ್ತಂಗಡಿ ತಾಲೂಕು ಮಾಜಿ ಸೈನಿಕರ ಸಂಘದ ಮಾಜಿ ಕಾರ್ಯದರ್ಶಿ ಹಾಗೂ ಮಾಜಿ ಅಧ್ಯಕ್ಷರಾಗಿರುವ ನಿವೃತ್ತ ಯೋಧ ಮುಹಮ್ಮದ್ ರಫಿ ಅವರನ್ನು ನೇಮಕಗೊಳಿಸಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಆದೇಶ ನೀಡಿದೆ.
ಆ ಹಿನ್ನೆಲೆಯಲ್ಲಿ ಅವರು ನ.3 ರಂದೇ ಅಧಿಕೃತವಾಗಿ ಕಿಲ್ಲೂರು ಮಸ್ಜಿದ್ನ ಅಧಿಕಾರ ಪದ ವಹಿಸಿಕೊಂಡಿದ್ದಾರೆ.
ಕಿಲ್ಲೂರು ಮಸ್ಜಿದ್ನಲ್ಲಿ ಚಾಲ್ತಿಯಲ್ಲಿದ್ದ ಆಡಳಿತ ಸಮಿತಿಯ ಅಧಿಕಾರ ಅವಧಿ ಮುಕ್ತಾಯವಾಗಿದ್ದ ಹಿನ್ನೆಲೆಯಲ್ಲಿ ಖಾಝಿ ಸಯ್ಯಿದ್ ಕೂರತ್ ತಂಙಳ್ ಅವರ ಉಪಸ್ಥಿತಿಯಲ್ಲಿ ನೂತನ ಸಮಿತಿ ರಚಿಸಲಾಗಿತ್ತು.ಈ ಆಯ್ಕೆ ಪ್ರಕ್ರೀಯೆ ತೃಪ್ತಿಕರವಾಗಿರಲಿಲ್ಲ ಎಂಬುದಾಗಿ ಆಪಾದಿಸಿ ಸದ್ರಿ ಸಮಿತಿಯ ವಿರುದ್ಧ ಜಮಾಅತ್ ನಲ್ಲಿ ಇನ್ನೊಂದು ಸಮಿತಿ ರಚನೆಯಾಗಿತ್ತು. ಈ ಬಗ್ಗೆ ವಿವಾದ ಉಂಟಾಗಿ ವಕ್ಫ್ ಮಂಡಳಿಗೆ ದೂರು ಸಲ್ಲಿಕೆಯಾಗಿತ್ತು. ಅದೂ ಅಲ್ಲದೆ ಹಣಕಾಸು ಅವ್ಯವಹಾರದ ಆಪಾದನೆ ಕೂಡ ಗಂಭೀರವಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿದ ವಕ್ಫ್ ಮಂಡಳಿ ಇದೀಗ ಸಮಿತಿಗಳನ್ನು ಭರ್ಕಾಸ್ತುಗೊಳಿಸಿ ಮುಂದಿನ ವ್ಯವಹಾರ ನಿರ್ವಹಣೆಗಾಗಿ ಸಮರ್ಥ ಅನುಭವಿ ಆಡಳಿತಾಧಿಕಾರಿಯನ್ನು ನೇಮಕಗೊಳಿಸಿದೆ.
ಇದೀಗ ಅಧಿಕಾರ ವಹಿಸಿಕೊಂಡಿರುವ ಮುಹಮ್ಮದ್ ರಫಿ ಅವರು ಪ್ರಸ್ತುತ ಕಚ್ ಮೆಮನ್ ಮಸ್ಜಿದ್ ಬಂದರ್ ಮಂಗಳೂರು, ಝಕರಿಯಾ ಜುಮ್ಮಾ ಮಸ್ಜಿದ್ ಬೆಳ್ಳಾರೆ ಸುಳ್ಯ, ಮೂಡಬಿದ್ರೆ ಪಡುಮಾರ್ನಾಡು ಕಾಯರ್ಕಟ್ಟ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಗುಂಡುಕಲ್ಲು ಇಲ್ಲಿ ಆಡಳಿತಾಧಿಕಾರಿಯಾಗಿ ಅತ್ಯುತ್ತಮ ರೀತಿಯಲ್ಲಿ ಕರ್ತವ್ಯನಿರತರಾಗಿದ್ದಾರೆ.
ಅದೂ ಅಲ್ಲದೆ ಈ ಹಿಂದೆ ಅವರು ಇತಿಹಾಸ ಪ್ರಸಿದ್ಧ ಕಾಜೂರು ಸಂಸ್ಥೆಯ ಆಡಳಿತಾಧಿಕಾರಿಯಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದು, ವಕ್ಪ್ ಮಂಡಳಿಯ ನಿರ್ದೇಶನದಂತೆ ಚುನಾವಣೆಯ ಮೂಲಕ ಕಾಜೂರಿಗೆ ಹೊಸ ಆಡಳಿತ ಸಮಿತಿ ರಚನೆಯಾಗುವಂತೆ ಮಾಡಿ ಅಧಿಕಾರ ಬಿಟ್ಟುಕೊಟ್ಟಿದ್ದರು.
ಜಾಮಿಯಾ ಮಸ್ಜಿದ್ ಕೋರ್ಟ್ ರಸ್ತೆ ಬೆಳ್ತಂಗಡಿ ಇಲ್ಲಿನ ಅಡಳಿತ ಮಂಡಳಿಯ ಅಧ್ಯಕ್ಷರಾಗಿ ಸೇವೆಯಲ್ಲಿರುವ ಅವರು ಕರ್ನಾಟಕ ಮುಸ್ಲಿಂ ಜಮಾಅತ್ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ, ಗುರುವಾಯನಕೆರೆ ಉರೂಸ್ ಸಮಿತಿ, ಎಸ್ಎಮ್ಎ, ಎಸ್ವೈಎಸ್ ಸೇರಿದಂತೆ ಹಲವು ಧಾರ್ಮಿಕ ಸಂಸ್ಥೆಗಳಲ್ಲಿ ಆಡಳಿತಾತ್ಮಕ ಹುದ್ದೆಗಳಲ್ಲಿ ಅನುಭವ ಹೊಂದಿದವರಾಗಿದ್ದಾರೆ. ರಫಿ ಅವರು ಕಿಲ್ಲೂರಿನ ಅಧಿಕಾರ ವಹಿಸಿಕೊಳ್ಳುವ ವೇಳೆ ಜಮಾಅತ್ ನ ಪ್ರತಿನಿಧಿಗಳು ಉಪಸ್ಥಿತರಿದ್ದರು.