ಬೆಳ್ತಂಗಡಿ; ಕಲ್ಮಂಜ ಗ್ರಾಮದ ಕರಿಯನೆಲದಲ್ಲಿ ಕರ್ಬಿಂತ್ತಿಲ್ ಎಂಬಲ್ಲಿ ವಿದ್ಯುತ್ ಅವಘಡದಿಂದ ಸ್ಥಳೀಯ ಅವಿವಾಹಿತ ಯುವಕ ಉದಯ ಗೌಡ ಅವರ ಸಾವಿಗೆ ಕಾರಣರಾದ ಮೂವರು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಕಲ್ಮಂಜ ಗ್ರಾಮದ ನಿವಾಸಿಗಳು ಹಾಗೂ ಉದಯ ಗೌಡ ಅವರ ಸಂಬಂಧಿಗಳೇ ಆಗಿರುವ ಹರೀಶ್ ಗೌಡ(59), ಸುಮಂತ್ (21)ಹಾಗೂ ಪ್ರಶಾಂತ್ (30)ಎಂಬವರಾಗಿದ್ದಾರೆ
ತಾಲೂಕಿನ ರೆಖ್ಯ ಗ್ರಾಮದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಕಲ್ಮಂಜದಲ್ಲಿ ಕಾಡ ಹಂದಿ ಭೇಟೆಗಾಗಿ ಆರೋಪಿಗಳು ತಂತಿಗೆ ವಿದ್ಯುತ್ ಅಳವಡಿಸಿ ವ್ಯೂಹ ರಚಿಸಿದ್ದರು. ಅದರ ಅರಿವಿಲ್ಲದ ಉದಯ ಗೌಡರು ವಯರ್ ಸ್ಪರ್ಷಿಸಿ ಸಾವನ್ನಪ್ಪಿದ್ದರು.
ಆರಂಭದಲ್ಲಿ ಉದಯ ಗೌಡ ಅವರು ಪಂಪು ಶೆಡ್ಡ್ ಬಳಿ ಆಕಸ್ಮಿಕ ವಿದ್ಯುದಾಘಾತಕ್ಕೆ ಸಾವನ್ನಪ್ಪಿರುವುದಾಗಿ ಬಿಂಭಿಸುವ ಯತ್ನ ನಡೆದಿತ್ತು. ಆದರೆ ನಿಜವಾದ ಘಟನೆ ಪಕ್ಕದ ಉಪಯೋಗವಿಲ್ಲದ ಗದ್ದೆಯಬಳಿ ಆಗಿತ್ತು.ಈಬಗ್ಗೆ ಆರಂಭಿಕ ಸಂಶಯದಿಂದ ಧರ್ಮಸ್ಥಳ ಎಸ್.ಐ ಅನಿಲ್ ಕುಮಾರ್ ಅವರ ತಂಡ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ ಪ್ರಕರಣದ ಹಿಂದಿರುವ ಸತ್ಯಾಸತ್ಯತೆ ಬಯಲಿಗೆ ತಂದಿದ್ದರು.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 304 (A) ಮತ್ತು, ಅಕ್ರಮವಾಗಿ ವಿದ್ಯುತ್ ಕಳ್ಳತನ ಗೈದಿರುವ ಬಗ್ಗೆ ಇಲೆಕ್ಟ್ರಿಸಿಟಿ ಆಕ್ಟ್ ನಡಿ ಪ್ರಕರಣ ದಾಖಲಿಸಿದ್ದರೂ ಆರಂಭದಲ್ಲಿ ಆರೋಪಿಗಳ ಬಂಧಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಧರ್ಮಸ್ಥಳ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದರು. ಪಕ್ಷದ ನಾಯಕರುಗಳೂ ಕೂಡ ಈಸಭೆಯಲ್ಲಿ ಭಾಗಿಯಾಗಿ, ಪೊಲೀಸರು ಯಾರದೋ ಒತ್ತಡಕ್ಕೆ ಮಣಿಯುತ್ತಿದ್ದಾರೆ ಎಂಬುದಾಗಿ ಆಪಾದಿಸಿದ್ದರು. ಈ ಎಲ್ಲ ಬೆಳವಣಿಗೆ ಗಳ ಬಳಿಕ ಇದೀಗ ಪೊಲೀಸರು ಎಲ್ಲ ಮೂವರು ಆರೋಪಿಗಳನ್ನೂ ಬಂಧಿಸಿದ್ದಾರೆ.